ಕದಂಬ ನೌಕಾನೆಲೆಗಾಗಿ ಬಲವಂತವಾಗಿ ಭೂಸ್ವಾಧೀನ :25 ವರ್ಷ ಕಳೆದರೂ ಸಿಗದ ಪರಿಹಾರ
ಕಾರವಾರ, ಜನವರಿ 23: ಕಾರವಾರ ಭಾಗದ ಜನರು ದೇಶದ ಪ್ರತಿಷ್ಟಿತ ಯೋಜನೆ ನೌಕಾನೆಲೆಗಾಗಿ ತಮ್ಮ ಭೂಮಿಯನ್ನು ನೀಡಿದವರು. ಆದರೆ ಭೂಮಿ ನೀಡಿ 25 ವರ್ಷ ಕಳೆದರು ಇಂದಿಗೂ ಪರಿಹಾರ ಹಣ ಮಾತ್ರ ಬಂದಿಲ್ಲ. ತಾವು ನೀಡಿದ ಭೂಮಿಗೆ ಪರಿಹಾರ ಕೊಡುವಂತೆ ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದು, ಇತ್ತ ಭೂಮಿ ಪಡೆಯುವಾಗ ನೀಡಿದ ಉದ್ಯೋಗ ಭರವಸೆ ಕೂಡ ಹುಸಿಯಾಗಿ ಅತಂತ್ರರಾಗಿದ್ದಾರೆ.
ಕಾರವಾರ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ತೆಗೆದುಕೊಂಡ ಕ್ರಮಗಳಿವು
ಕದಂಬ ನೌಕಾನೆಲೆ ದೇಶದ ಪ್ರತಿಷ್ಟಿತ ಯೋಜನೆಗಳಲ್ಲಿ ಒಂದು. ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಯನ್ನು ಸಹ ಕದಂಬ ನೌಕಾನೆಲೆ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿ ತಲೆ ಎತ್ತಿದ ಈ ಯೋಜನೆ ನಿರ್ಮಾಣಕ್ಕೆ ಸಾವಿರಾರು ಜನರು ತಮ್ಮ ಭೂಮಿಯನ್ನು ನೀಡಿದ್ದರು. ಹತ್ತಾರು ಗ್ರಾಮಗಳೇ ಯೋಜನೆ ವ್ಯಾಪ್ತಿಗೆ ಬಂದು ಜನರು ಬೇರೆಡೆ ಸ್ಥಳಾಂತರ ಮಾಡಿ ನಿರಾಶ್ರಿತರಾಗಿದ್ದರು.
ನ್ಯಾಯಾಲಯದ ಆದೇಶಕ್ಕೂ ಇಲ್ಲ ಬೆಲೆ
ಕದಂಬ ನೌಕಾನೆಲೆ ಸ್ಥಾಪನೆಗೆ ಭೂಮಿ ನೀಡಿದ್ದ ಸುಮಾರು 400 ಕುಟುಂಬಗಳಿಗೆ ಇಂದಿಗೂ ಸರಿಯಾದ ಪರಿಹಾರ ಬಂದಿಲ್ಲ. ಸೂಕ್ತ ಪರಿಹಾರ ಕೊಡುವಂತೆ ನ್ಯಾಯಾಲಯ ಮೊರೆ ಹೋಗಿದ್ದು ಅದರಂತೆ ನ್ಯಾಯಾಲಯ ಕೂಡ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ಒದಗಿಸಲು ಸೂಚನೆ ನೀಡಿದೆ. ಆದರೆ ಯೋಜನೆಗೆ ಭೂಮಿ ನೀಡಿದವರಿಗೆ ಮಂಜೂರಾಗಿದ್ದ ಪರಿಹಾರದ ಹಣವನ್ನು ನೀಡುವಂತೆ ಕಚೇರಿಗೆ ಅಲೆದಾಡಿದರು ಇಂದಿಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಯೋಜನೆ ಪ್ರಾರಂಭದ ವೇಳೆ ಭೂಮಿ ನೀಡಿದವರಿಗೆ ಉದ್ಯೋಗದೊಂದಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದ ಸರ್ಕಾರ ಸದ್ಯ ಉದ್ಯೋಗವೂ ಇಲ್ಲದೇ ಪರಿಹಾರವೂ ಸಿಗದೇ ಜನರ ಪರದಾಟ ನಡೆಸುತ್ತಿದ್ದು ಸರ್ಕಾರದ ನಡೆಗೆ ಕಿಡಿಕಾರುತ್ತಿದ್ದಾರೆ.
ಪರಿಹಾರವೂ ಇಲ್ಲ, ಸರ್ಕಾರ ನೀಡಿದ್ದ ಭರವಸೆಯೂ ಮಣ್ಣುಪಾಲು
ನೌಕಾನೆಲೆ ಆರಂಭದಲ್ಲಿ ಮನೆಗೊಂದು ಉದ್ಯೋಗ, ಪರಿಹಾರ ನೀಡುವ ಭರವಸೆ ನೀಡಿದ್ದರಿಂದ ಇವರ ಮಾತನ್ನು ನಂಬಿ ಸಾಲಮಾಡಿಕೊಂಡು ನಿರಾಶ್ರಿತರಾಗಿ ಮನೆ ಜಮೀನು ಸರಿಮಾಡಿಕೊಂಡಿದ್ದೇವೆ. ಆದರೆ ಇದೀಗ ಆ ಸಾಲದ ಬಡ್ಡಿಯನ್ನು ತೀರಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ ಪರಿಹಾರದ ಹಣ ಬರುವುದಾಗಿ ನಂಬಿದ್ದ ನಮ್ಮ ತಾಯಿ ನಾಲ್ವರು ಅಣ್ಣಂದಿರು ಸಾವನ್ನಪ್ಪಿದ್ದಾರೆ. ಇದೀಗ ಇದ್ದ ನಮಗೂ ಅನಾರೋಗ್ಯ ಕಾಡುತ್ತಿದ್ದು ಪರಿಹಾರ ನೀಡಲು ಸತಾಯಿಸುತ್ತಿದ್ದಾರೆ. ಸರ್ಕಾರ ಕೂಡ ಹೆಚ್ಚುವರಿ ಪರಿಹಾರವನ್ನು ನೀಡಬೇಕು ಎಂದು ನಿರಾಶ್ರಿತರಾದ ವಾಣಿ ಗಣಪತಿ ನಾಯ್ಕ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
25 ವರ್ಷಕಳೆದರೂ ಪರಿಹಾರ ನೀಡದೇ ನಿರ್ಲಕ್ಷ್ಯ
ಇನ್ನು ಕದಂಬ ನೌಕನೆಲೆಗೆ ಭೂಮಿ ನೀಡುವ ವೇಳೆ ಗುಂಟೆ ಜಮೀನಿಗೆ 150 ರೂ ಪರಿಹಾರ ನೀಡಿದ್ದರು. ಅದರಲ್ಲಿ ಕೆಲವರು ನ್ಯಾಯಲಯ ಮೊರೆ ಹೋಗಿ ಸುಪ್ರಿಂ ಕೋರ್ಟ್ನಲ್ಲಿ ಗುಂಟೆಗೆ 11,500 ರೂ ಹಾಗೂ ಇಷ್ಟು ದಿನಗಳ ಕಾಲದ ಬಡ್ಡಿ ನೀಡುವಂತೆ ಆದೇಶ ಬಂದಿದ್ದು ನ್ಯಾಯಾಲಯದ ಮೊರೆ ಹೋದವರಿಗೆ ಪರಿಹಾರವನ್ನು ಸರ್ಕಾರ ನೀಡಿತ್ತು. ಆದರೆ ಸುಮಾರು 400 ಕುಟುಂಬಗಳಿಗೆ ಕಾಗದಪತ್ರಗಳು ಸರಿ ಇಲ್ಲ, ವಾರಸುದಾರರು ಇಲ್ಲ ಹೀಗೆ ನಾನಾ ಕಾರಣಗಳನ್ನು ಹೇಳಿ ಇಂದಿಗೂ ಪರಿಹಾರ ನೀಡಿಲ್ಲ. ಅಂದು ನಾವು ಭೂಮಿ ನೀಡಲು ಒಪ್ಪದೆ ಇದ್ದಾಗ ಉಟ್ಟ ಬಟ್ಟೆಯಲ್ಲಿಯೇ ಹೊರ ಹಾಕಿದ್ದರು. ಇದೀಗ 25 ವರ್ಷಗಳಿಂದ ಪರಿಹಾರಕ್ಕಾಗಿ ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಡಿ ಅಲೆದಾಡಿ ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನಾದರು ತಮಗೆ ನ್ಯಾಯ ಕೊಡಿಸಿ ಎಂದು ನಿರಾಶ್ರಿತರಾದ ಕೃಷ್ಣಾನಂದ ನಾಯ್ಕ್ ಒತ್ತಾಯಿಸಿದ್ದಾರೆ.
ದೇಶದ ಭದ್ರತೆಯ ಯೋಜನೆಗೆ ಭೂಮಿ ನೀಡಿದವರಿಗಿಲ್ಲ ನ್ಯಾಯ
ಕಾರವಾರ ಜಿಲ್ಲಾಧಿಕಾರಿಯಾಗಿ ಯಾರೇ ಬಂದರು ಅವರ ಬಳಿ ಪರಿಹಾರ ಕೊಡಿಸುವಂತೆ ಸುಮಾರು 400 ಕುಟುಂಬದ ನಿರಾಶ್ರಿತರು ಮನವಿ ಮಾಡಿಕೊಂಡು ಬರುತ್ತಲೇ ಇದ್ದಾರೆ. ಆದರೆ ಯಾವ ಅಧಿಕಾರಿಗಳು ಈ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಮನಸ್ಸು ಮಾಡಿದರೆ ತಮಗೆ ಪರಿಹಾರ ಒದಗಿಸಬಹುದು ಎನ್ನುತ್ತಾರೆ ನಿರಾಶ್ರಿತರು. ಇನ್ನಾದರು ಸಂಭಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ದೇಶದ ಭದ್ರತೆಯ ಯೋಜನೆಗೆ ಭೂಮಿ ನೀಡಿದವರಿಗೆ ನ್ಯಾಯ ಒದಗಿಸಿಕೊಡುವ ಕಾರ್ಯ ಮಾಡಬೇಕಾಗಿದೆ.