ಇಂಧನ ಬೆಲೆ ಏರಿಕೆಯಿಂದ ಸದ್ದಿಲ್ಲದೇ ಏರುತ್ತಿದೆ ಅಗತ್ಯ ವಸ್ತುಗಳ ಬೆಲೆ; ಜನಸಾಮಾನ್ಯ ಹೈರಾಣ
ಕಾರವಾರ, ಅಕ್ಟೋಬರ್ 11: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹೊರೆ ಸದ್ದಿಲ್ಲದೇ ಜನರ ಮೇಲೆ ಬೀಳುತ್ತಿದೆ. ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದಾರೆ. ಬೆಲೆ ಏರಿಕೆಯ ಪರಿಣಾಮದಿಂದಾಗಿ ಸಾಮಾನ್ಯ ಜನರು ಹೈರಾಣಾಗಿದ್ದಾರೆ.
ಪೆಟ್ರೋಲ್ ಬೆಲೆ ಎರಡು ತಿಂಗಳ ಹಿಂದೆಯೇ ನೂರು ರೂಪಾಯಿ ಗಡಿ ದಾಟಿತ್ತು. ಸದ್ಯ ಡೀಸೆಲ್ ಬೆಲೆ ಸಹ ನೂರು ರೂಪಾಯಿ ಮುಟ್ಟಿದೆ. ವಸ್ತುಗಳ ಸಾಗಾಟ ಮಾಡಲು ಬಳಕೆಯಾಗುವ ಲಾರಿಗಳು ಡೀಸೆಲ್ ಇದ್ದರೆ ಮಾತ್ರ ಓಡುತ್ತವೆ. ಡೀಸೆಲ್ ದರ ಏರಿಕೆ ಪರಿಣಾಮ ಸಾಗಾಟ ವೆಚ್ಚವೂ ಏರಿಕೆಯಾಗುತ್ತಿರುವ ಕಾರಣ ನಿಧಾನಗತಿಯಲ್ಲಿ ದಿನನಿತ್ಯ ವಸ್ತುಗಳ ಬೆಲೆಯಲ್ಲೂ ಸಹ ಬದಲಾವಣೆಯಾಗತೊಡಗಿದೆ.
ಪ್ರಮುಖವಾಗಿ ನೂರು ಕ್ವಿಂಟಾಲ್ ಅಕ್ಕಿಯ ಮೇಲೆ ಇನ್ನೂರು ರೂಪಾಯಿ ಹೆಚ್ಚಾಗಿದ್ದು, ಡೀಸೆಲ್ ಬೆಲೆ ಎರಡು ದಿನದಿಂದ ಇನ್ನೂ ಹೆಚ್ಚಾಗಿರುವುದರಿಂದ ದರದಲ್ಲಿ ಇನ್ನಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಅಡುಗೆ ಎಣ್ಣೆಯ ಬೆಲೆ ಸಹ ಏರಿಕೆಯಾಗಿ ನಂತರ ಬೆಲೆ ಇಳಿಕೆಯಾಗಿತ್ತು. ಇದೀಗ ಕಳೆದ ಕೆಲ ದಿನಗಳಿಂದ ಮತ್ತೆ ಏರಿಕೆ ಕಂಡಿದ್ದು, ಇನ್ನೂ ಹೆಚ್ಚಾಗಲಿದೆ ಎನ್ನಲಾಗಿದೆ.

ಇಷ್ಟೇ ಅಲ್ಲದೇ, ಮೈದಾ, ರವೆ, ಶೇಂಗಾ, ಬೇಳೆ ಕಾಳುಗಳ ಬೆಲೆಯಲ್ಲಿ ಸಹ ಬದಲಾವಣೆಯಾಗಿದ್ದು, ಇದಲ್ಲದೇ ಇತರೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯಲ್ಲಿ ಸಹ ಬದಲಾವಣೆಯಾಗಿದೆ. ಈ ಹಿಂದೆ ಸಾವಿರ ರೂಪಾಯಿಗೆ ಖರೀದಿ ಮಾಡುತ್ತಿದ್ದ ವಸ್ತುಗಳ ಬೆಲೆ ಸದ್ಯ ಒಂದೂವರೆ ಸಾವಿರಕ್ಕೆ ತಲುಪಿದ್ದು, ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ದುಡಿಮೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಬೆಲೆ ಏರಿಕೆಯ ಪರಿಣಾಮ ಜೀವನ ಸಾಗಿಸುವುದು ಕಷ್ಟವಾಗುವಂತಾಗಿದೆ. ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ಉಳಿತಾಯಕ್ಕಿಂತ ಹೆಚ್ಚು ದಿನಸಿ ವಸ್ತುಗಳಿಗೇ ಖರ್ಚಾಗತೊಡಗಿದೆ. ಪೆಟ್ರೋಲ್ ಬೆಲೆ ಲೀಟರ್ಗೆ 106.40 ರೂಪಾಯಿಗೆ ಬಂದು ಕೆಲ ದಿನಗಳ ಕಾಲ ಬೆಲೆ ತಟಸ್ಥವಾಗಿತ್ತು. ಇನ್ನು ಸರ್ಕಾರ ಬೆಲೆ ಏರಿಕೆಯ ವಿರೋಧ ಎದುರಿಸಬೇಕಾಗಿದ್ದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸಲಿದೆ ಎನ್ನಲಾಗಿತ್ತು.

ಆದರೆ ಎರಡು ಬೆಲೆಯಲ್ಲೂ ಇಳಿಕೆಯಾಗದೇ ಏರಿಕೆಯಾಗುತ್ತಿದ್ದು, ಹೀಗೆ ಇನ್ನಷ್ಟು ಏರಿಕೆ ಕಂಡರೆ ದಿನನಿತ್ಯ ಬಳಕೆಯ ವಸ್ತುಗಳ ಸದ್ಯ ಇರುವ ಬೆಲೆಯ ಅರ್ಧದಷ್ಟು ಮತ್ತೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎನ್ನುವುದು ಅಂಗಡಿಕಾರರ ಅಭಿಪ್ರಾಯ.
ಪ್ರವಾಸಿ ಟ್ಯಾಕ್ಸಿಗಳ ಮೇಲೂ ಪರಿಣಾಮ
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಜನರು ಪ್ರವಾಸಿ ಟ್ಯಾಕ್ಸಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸದ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಟ್ಯಾಕ್ಸಿ ಉದ್ಯಮದ ಮೇಲೂ ಪರಿಣಾಮ ಬೀಳತೊಡಗಿದೆ.

ಈ ಹಿಂದೆ ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗುವಾಗ ಪಡೆಯುತ್ತಿದ್ದ ಹಣಕ್ಕಿಂತ ಹೆಚ್ಚಿನ ಹಣವನ್ನು ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಕೇಳಬೇಕಾಗಿದೆ. ಅದಲ್ಲದೇ ಉತ್ತರ ಕನ್ನಡ ಜಿಲ್ಲೆಯ ಎರಡೂ ಕಡೆ ಟೋಲ್ ಸಂಗ್ರಹ ಸಹ ಮಾಡುತ್ತಿರುವುದರಿಂದ ಬಾಡಿಗೆ ಹಣ ಹೆಚ್ಚಿಸಬೇಕಾಗಿದೆ.
ಇದರಿಂದ ಗ್ರಾಹಕರು ಪ್ರವಾಸಿ ಟ್ಯಾಕ್ಸಿ ಪಡೆಯುವುದಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ. ಅಲ್ಲದೇ ಬಾಡಿಗೆ ದರದಲ್ಲಿ ಚೌಕಾಸಿ ಮಾಡುವಂತಾಗಿದ್ದು, ಹಲವರು ಇದರಿಂದ ಕೆಲಸ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಹಕರು ನೀಡುವ ಬಾಡಿಗೆ ಹಣದಲ್ಲಿ ಪೆಟ್ರೋಲ್, ಡಿಸೇಲ್ ಹಾಕಿಸಿಕೊಂಡು, ವಾಹನದ ನಿರ್ವಹಣೆ ಮಾಡಿಕೊಂಡು, ಉಳಿದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಸರ್ಕಾರ ಯಾವಾಗ ಬೆಲೆ ಏರಿಕೆ ಕಡಿಮೆ ಮಾಡುತ್ತಾರೋ ಎಂದು ವಾಹನ ಚಾಲಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications