ಶಿವಮೊಗ್ಗವಾಯ್ತು ಇದೀಗ ಉತ್ತರ ಕನ್ನಡಕ್ಕೂ ಹಬ್ಬಿದ ಮಂಗನ ಕಾಯಿಲೆ: ನಿಯಂತ್ರಣ ಹೇಗೆ?
ಉತ್ತರ ಕನ್ನಡ, ಜನವರಿ 31: ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್ಡಿ) ಈಗ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕಬಂಧಬಾಹುಗಳನ್ನು ಚಾಚುತ್ತಿದೆ. ಶಿವಮೊಗ್ಗದ ಜನರು ಮಂಗನ ಕಾಯಿಲೆಯಿಂದ ಹೈರಾಣಾಗಿದ್ದಾರೆ. ಇದೀಗ ಈ ಕಾಯಿಲೆ ಉತ್ತರ ಕನ್ನಡ ಜಿಲ್ಲೆಗೂ ಹಬ್ಬಿದ್ದು, ಆತಂಕ ಹೆಚ್ಚಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ 8 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಸಿದ್ದಾಪುರದ ಕೊರ್ಲಕೈದ ಒಂದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 7 ಪ್ರಕರಣಗಳು ಬೆಳಕಿಗೆ ಬಂದಿದೆ. ದಿನೇ ದಿನೇ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿದ್ದು, ಕೇವಲ 10 ದಿನದಲ್ಲಿ 16 ಜನರಲ್ಲಿ ಕಾಯಿಲೆ ಕಾಣಿಸಿಕೊಂಡಿದೆ.

ಕಳೆದ ಕೆಲ ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ ಜಿಲ್ಲೆಯಲ್ಲಿ ಇತ್ತೀಚಿಗೆ ಕಡಿಮೆಯಾಗಿತ್ತು. ಇದೀಗ ಮತ್ತೆ ಮಂಗನ ಕಾಯಿಲೆ ಆವರಿಸುತ್ತಿದ್ದು, ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಕಳೆದ ಐದು ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದ್ದು, ಈ ಪೈಕಿ 8 ಜನ ಕಾಯಿಲೆ ಉಲ್ಬಣಗೊಂಡು ಸಾವನ್ನಪ್ಪಿದ್ದರು.
ಇದೀಗ ಮತ್ತೆ ಈ ಕಾಯಿಲೆ ಜಿಲ್ಲೆಗೆ ಲಗ್ಗೆ ಇಟ್ಟಿದ್ದು, ಹಲವು ಜನರಲ್ಲಿ ಲಕ್ಷಣಗಳು ಕಾಣಿಸಿಕೊಂಡಿದೆ. ಇನ್ನು ಮಂಗನ ಕಾಯಿಲೆಯಿಂದ 10 ವರ್ಷದ ಓರ್ವ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾಡಳಿತಕ್ಕೆ ಹೊಸ ಸಮಸ್ಯೆ ಎದುರಾಗಿದ್ದು ಜಿಲ್ಲಾ ಆರೋಗ್ಯ ಇಲಾಖೆ ಮಂಗನ ಕಾಯಿಲೆಗೆ ಆರಂಭದಲ್ಲೇ ಬ್ರೇಕ್ ಹಾಕಲು ಸಜ್ಜಾಗುತ್ತಿದೆ.

ಮಂಗನ ಕಾಯಿಲೆ ಎಂದರೇನು..?
ಮಂಗನ ಕಾಯಿಲೆ ಕೆ ಎಫ್ ಡಿವಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್ ವೈರಸ್) ಎಂಬ ವೈರಸ್ನಿಂದ ಹರಡುವ ಕಾಯಿಲೆಯಾಗಿದೆ. 1957ರಲ್ಲಿ ಮರಣ ಹೊಂದಿದ ಕೋತಿಯಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ರೋಗಗ್ರಸ್ತ ಕೋತಿಯ ದೇಹದಲ್ಲಿದ್ದ ಉಣ್ಣಿ ಅಥವಾ ಉಣುಗು(Tick) ಕೋತಿ ಮರಣ ಹೂಂದಿದ ನಂತರ ಉದುರಿ ಗಾಳಿಯ ಮೂಲಕ, ಅಥವಾ ಜಾನುವಾರುಗಳ ಮೂಲಕ ಇಲ್ಲವೇ ನೇರವಾಗಿ ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತದೆ.
ಅದು ಕಚ್ಚುವುದರಿಂದ ವೈರಾಣು ಮನುಷ್ಯನ ದೇಹ ಪ್ರವೇಶಿಸಿ, ರೋಗ ಉಂಟು ಮಾಡುತ್ತದೆ. ಸೂಕ್ತವಾದ ಲಸಿಕೆ ಚಿಕಿತ್ಸೆ ಇಲ್ಲದಿರುವ ಕಾರಣ ಈಗೀಗ ಇದು ಮಾರಣಾಂತಿಕ ಕಾಯಿಲೆಯಂತಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಮೊದಲು ಕಾಣಿಸಿಕೊಂಡ ಮಂಗನ ಜ್ವರಕ್ಕೆ ಕಾರಣವಾದ ಈ ವೈರಸ್ಗೆ ಕ್ಯಾಸನೂರು ಎಂದು ಹೆಸರಿಡಲಾಗಿದೆ.












Click it and Unblock the Notifications