ಅಪರಿಚಿತರಿಂದ ಬೆದರಿಕೆ: ರಕ್ಷಣೆಗೆ ಶಾಸಕಿ ರೂಪಾಲಿ ನಾಯ್ಕ ಮನವಿ
ಕಾರವಾರ, ಮಾರ್ಚ್ 01: ಕೆಲವು ಅಪರಿಚಿತರಿಂದ ಬೆದರಿಕೆ ಬಂದಿದ್ದು, ತಮ್ಮ ರಕ್ಷಣೆಗೆ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕಿ ರೂಪಾಲಿ ನಾಯ್ಕ ಪತ್ರ ಬರೆದಿದ್ದಾರೆ.
ರಾಜ್ಯಪಾಲರು, ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗೂ ಈ ಬಗ್ಗೆ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಮೊದಲು ಹಾಗೂ ನಂತರದ ದಿನಗಳಲ್ಲಿ ಬೆದರಿಕೆ ಕರೆಗಳು ಬಂದಿರುವುದಲ್ಲದೇ ಅಪರಿಚಿತ ವಾಹನಗಳು ತಮ್ಮ ವಾಹನವನ್ನು ಹಿಂಬಾಲಿಸುತ್ತಿವೆ. ಅಲ್ಲದೇ ಮನೆಯ ಬಳಿ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದು, ಕುಟುಂಬಸ್ಥರು ಹಾಗೂ ಸಹಚರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರು ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ನವೆಂಬರ್ 30 ರಂದು ಅಂಕೋಲಾ ಸಂಭ್ರಮ ಕಾರ್ಯಕ್ರಮವನ್ನು ಮುಗಿಸಿ ವಾಪಸ್ ಬರುವಾಗ ರಾತ್ರಿ 12 ಗಂಟೆಗೆ ಡಸ್ಟರ್ ಕಾರು ಹಾಗೂ ಮಾರುತಿ ಕಂಪನಿಯ ಬ್ರೀಜಾ ಕಾರು ಹಿಂಬಾಲಿಸುತ್ತಿತ್ತು. ತಕ್ಷಣ ನೆವೆಲ್ ಗೆಟ್ ಬಳಿ ನಮ್ಮ ಕಾರನ್ನು ನಿಲ್ಲಿಸಿ ಪೊಲೀಸ್ ಭದ್ರತೆಯಲ್ಲಿ ಮನೆಗೆ ತೆರಳಿದ್ದೇನೆ.
ಅಲ್ಲದೇ ತಮ್ಮ ಮನೆ ಬಳಿ ಎರಡು ಪಲ್ಸರ್ ಬೈಕ್ಗಳು ತಮ್ಮ ವಾಹನಕ್ಕೆ ದಾರಿ ನೀಡದೆ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗಳಿಂದ ನನಗೆ ಜೀವ ಬೆದರಿಕೆ ಇರುವ ಆತಂಕ ಇದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನನ್ನ ಬೆಂಗಾವಲಿಗೆ ಸಶಸ್ತ್ರ ಪೊಲೀಸ್ ಪೇದೆಯನ್ನು ನೇಮಕ ಮಾಡುವಂತೆ ರೂಪಾಲಿ ನಾಯ್ಕ ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications