'ರಾಹುಲ್ ‘ಗಾಂಧಿ’ಯಾದದ್ದು ಮೆಣಸಿನಕಾಯಿ ಗಿಡದಲ್ಲಿ ಟೊಮೊಟೊ ಬೆಳೆದಂತೆ'
Recommended Video

ಕಾರವಾರ, ಫೆಬ್ರವರಿ 07:ಮಂಗನಿಂದ ಮಾನವ ಹೇಗಾದ ಎನ್ನುವುದಕ್ಕೆ ಡಾರ್ವಿನ್ನ ಸಿದ್ಧಾಂತವಿದೆ. ಆದರೆ, ರಾಹುಲ್ ಮಾತ್ರ ಗಾಂಧಿ ಹೇಗಾದ ಎನ್ನುವುದ್ನು ತಿಳಿಯಲು ಯಾವ ಸಿದ್ಧಾಂತವೂ ಇಲ್ಲ. ಒಂಥರಾ ಮೆಣಸಿನಕಾಯಿ ಗಿಡದಲ್ಲಿ ಟೊಮೆಟೊ ಬೆಳೆದಂತೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಸರ್ಕಾರ ಒಂಥರಾ ನೂಲಲ್ಯಾಕ ಚೆನ್ನಿ, ನೂಲಲ್ಯಾಕ ಚೆನ್ನಿ ಎನ್ನುವಂತಿದೆ. ರಾಟಿ ಇದ್ದರೆ, ನೂಲು ಇಲ್ಲ. ನೂಲು ಇದ್ದರೆ ಸೂಜಿ ಇಲ್ಲ ಎನ್ನುತ್ತ ನೆಪಗಳನ್ನು ಹೇಳುತ್ತಿದೆ.
ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿಯವರು ಏನೂ ಮಾಡುತ್ತಿಲ್ಲ. ಕುದುರೆ ವ್ಯಾಪಾರ ಮತ್ತೊಂದು ಏನೂ ಇಲ್ಲ. ಯಡಿಯೂರಪ್ಪ ನಿದ್ದೆಯಲ್ಲಿ ಗೊರಕೆ ಹೊಡೆದ್ರೂ ರಾಜ್ಯ ಸರ್ಕಾರ ಅಲುಗಾಡುತ್ತಿದೆ. ಇನ್ನು ಎದ್ದು ನಿಂತರೆ ಉಳಿದೀತೇ? ಎಂದು ಹೇಳಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರ ಇಚ್ಛಾಮರಣದ ವರವನ್ನು ಪಡೆದಿದೆ. ಇವತ್ತು ಹಾವು, ಏಣಿ ಆಟ ಮುಂದುವರಿದಿದೆ. ಕಾಂಗ್ರೆಸ್ನವರು ತುಳಸಿ ನೀರು ಬಿಡುತ್ತೇವೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಇರಲೋ ಬೇಡವೋ ಎಂದು ಚಿಂತಿಸುತ್ತಿದ್ದಾರೆ. ಸದ್ಯದ ಭವಿಷ್ಯದಲ್ಲಿ ಇಚ್ಛಾಮರಣದ ಸರ್ಕಾರ ಏನಾಗುತ್ತದೆ ಕಾದು ನೋಡಿ. ಹೆಚ್ಚಿನದನ್ನು ಹೇಳುವುದಿಲ್ಲ ಎಂದರು.
ಕಳೆದ 70 ವರ್ಷಗಳಿಂದ ಗರೀಬಿ ಹಠಾವೋ ಎನ್ನುತ್ತಿದ್ದವರು ಈಗ ಮೋದಿ ಹಠಾವೋ ಎನ್ನುತ್ತಿದ್ದಾರೆ. ನೀರಲ್ಲಿ ಬಿದ್ದವನನ್ನು ಮೇಲೆತ್ತಲು ಒಬ್ಬರಿಗೊಬ್ಬರು ಕೈ ಹಿಡಿದಿದ್ದಾರೆ. ಮೂರು ತಿಂಗಳಲ್ಲಿ ಸಾಮೂಹಿಕ ಘಟ ಶ್ರದ್ಧಾ ನಡೆಯಲಿದೆ. ಅಂದು ಭಗವಂತ ದೇಶ ಲೂಟಿ ಮಾಡಿದವರಿಗೆ ಪ್ರಾಯಶ್ಚಿತ ನೀಡಲಿದ್ದಾನೆ ಎಂದು ಕುಟುಕಿದ್ದಾರೆ.
ವಿಷ ಕುಡಿದೇ ಬದುಕಿದವರು ನಾವು, ಅಮೃತ ಕೊಟ್ಟರೆ ಬದುಕುವುದಿಲ್ಲ. ಮಾಧ್ಯಮಗಳು ಏನು ಬೇಕಾದರೂ ಬರೆಯಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅನಂತಕುಮಾರ ಏನೂ ಹೇಳಿದರೂ ವಿವಾದಾತ್ಮಕ ಎಂದೇ ಬಿಂಬಿಸುತ್ತಿದ್ದಾರೆ ಎಂದರು.
ಬಿಜೆಪಿ ಕಾರ್ಯಕರ್ತರು ಕಾಲಿಟ್ಟರೆ ಜಗತ್ತು ಅಲುಗಾಡಬೇಕು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸು ಎಂದರೂ ಆಗ ಗೆಲ್ಲುವ ತಾಕತ್ತು ನನಗಿರಲಿಕ್ಕಿಲ್ಲ. ಆದರೆ, ಐದು ಸಲ ಎಂಪಿ ಮಾಡಿದ್ದು ಕಾರ್ಯಕರ್ತರ ಶ್ರಮ ಹಾಗೂ ಸಂಘಟನೆಯಿಂದ ಮಾತ್ರ. ಇದಕ್ಕಾಗಿ ಕಾರ್ಯಕರ್ತರ ಕಾಲು ಮುಟ್ಟಿ ನಮಸ್ಕರಿಸುವೆ. ಈ ಕ್ಷೇತ್ರದಲ್ಲಿ (ಉತ್ತರ ಕನ್ನಡ) ಬೇಕಾದರೆ ರಾಹುಲ್, ಪ್ರಿಯಾಂಕಾ ಯಾರೇ ಸ್ಪರ್ಧಿಸಲಿ ಎಂದು ಸವಾಲೆಸೆದರು.











Click it and Unblock the Notifications