ಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆ
ಕಾರವಾರ, ಜನವರಿ 16: ಇಲ್ಲಿನ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ವಿರುದ್ಧದ ಬೃಹತ್ ಹೋರಾಟ ನಾಲ್ಕನೇ ದಿನವಾದ ಇಂದು ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಪ್ರತಿಭಟನಾ rally ನಡೆಸುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಳಿಸಲಾಗಿದೆ.
ಕಾರವಾರದಲ್ಲಿ ಏನಿದು ಸಾಗರ ಮಾಲಾ ಯೋಜನೆ?; ಮೀನುಗಾರರ ವಿರೋಧ ಏಕೆ?
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಮೀನುಗಾರ ಮುಖಂಡರು ಬಂದರು ವಿಸ್ತರಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಸದ್ಯ ಕಾಮಗಾರಿ ಸ್ಥಗಿತಗೊಳಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಹೇಳುವುದೇನು?
'ಬಂದರು ಎರಡನೇ ಹಂತದ ವಿಸ್ತರಣೆ ಕಾಮಗಾರಿಯ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಬಂದರು ಹಾಗೂ ಒಳನಾಡು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಇಲ್ಲಿನ ಶಾಸಕಿ ರೂಪಾಲಿ ನಾಯ್ಕ ಅವರು ಬೆಂಗಳೂರಿನಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದಾರೆ. ಬಂದರು ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ, ಯೋಜನೆಯ ಮರು ಪರಿಶೀಲನೆ ಮಾಡಿಸುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲಿಯವರೆಗೆ ಕಾಮಗಾರಿ ನಿಲ್ಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಆದರೆ, ಈ ವಿಚಾರ ನಮ್ಮ ಕೈಯಲ್ಲಿಲ್ಲ. ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಲಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ' ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್.
ಶಾಸಕಿ ರೂಪಾಲಿ ನಾಯ್ಕ ಭರವಸೆ
'ಸಾಗರಮಾಲಾ ಯೋಜನೆಯಿಂದ ಕಾರವಾರದ ಕಡಲತೀರ ಕಳೆದುಕೊಳ್ಳುತ್ತೇವೆ ಎಂಬ ಭಯ ನಿಮ್ಮಲ್ಲಿದೆ. ಖಡಾಖಂಡಿತವಾಗಿ ಹೇಳುತ್ತಿದ್ದೇನೆ, ಈ ಯೋಜನೆಯಿಂದ ಕಾರವಾರದ ಕಡಲತೀರಕ್ಕೆ ಏನೂ ಅಪಾಯವಾಗುವುದಿಲ್ಲ. ಯಾರೋ ಹೇಳಿದ ಸುಳ್ಳು ಮಾತಿಗೆ ಕಿವಿಗೊಡಬೇಡಿ' ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.
ನಾಲ್ಕನೇ ದಿನಕ್ಕೆ ಮೀನುಗಾರರ ಪ್ರತಿಭಟನೆ; ಇಂದು ‘ಕಾರವಾರ ಬಂದ್'
ಈ ಬಗ್ಗೆ ಶಾಸಕಿ ಕಚೇರಿಯಿಂದ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, 'ಮೀನುಗಾರರಿಗೆ ತೊಂದರೆಯಾದರೆ ನಾನು ಸಹಿಸುವುದಿಲ್ಲ. ನಾನು ಸದಾ ನಿಮ್ಮೊಂದಿಗಿದ್ದೇನೆ. ಕಾರವಾರ ಕಡಲತೀರ ನಿಮಗೆಷ್ಟು ಮುಖ್ಯವೋ ನಮಗೂ ಅಷ್ಟೇ ಮುಖ್ಯವಾಗಿದೆ" ಎಂದು ಹೇಳಿದ್ದಾರೆ.
ಬಂದರು ಕಾಮಗಾರಿ ಕುರಿತಂತೆ ಸರಣಿ ಸಭೆ
ಈ ವಿಷಯವಾಗಿ ಮೊದಲು ಮುಖ್ಯಮಂತ್ರಿಗಳ ಧವಳಗಿರಿ ನಿವಾಸದಲ್ಲಿ ಮೀನುಗಾರಿಕಾ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಸುರೇಶ ಅಂಗಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲರವರೊಂದಿಗೆ ಸಭೆ ನಡೆಸಲಾಗಿದೆ. ನಂತರದಲ್ಲಿ ವಿಧಾನಸೌಧದಲ್ಲಿ ಕೋಟಾ ಶ್ರೀನಿವಾಸ ಪೂಜಾರಿರವರೊಂದಿಗೆ ಸಾಗರಮಾಲಾ ಸಿಇಒ ಉಜ್ವಲಕುಮಾರ ಘೋಷ್ ಅವರನ್ನು ಭೇಟಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಪಶುಸಂಗೋಪನೆ ಹಾಗೂ ಮೀನುಗಾರಿಕಾ ಇಲಾಖಾ ಕಾರ್ಯದರ್ಶಿಗಳಾದ ರಶ್ಮೀ ಮಹೇಶ, ಕೆ.ಎಸ್.ಆರ್.ಟಿ.ಸಿ. ನಿಗಮ ಅಧ್ಯಕ್ಷ ವಿ.ಎಸ್.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಜಿ. ನಾಯ್ಕ ಅವರೊಂದಿಗೆ ಸರಣಿ ಸಭೆ ನಡೆಸಿದ್ದೇವೆ. ಮೀನುಗಾರರಿಗೆ ಹಾಗೂ ಕಾರವಾರ ಕಡಲ ತೀರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ' ಭರವಸೆ ನೀಡಿದ್ದಾರೆ.
ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದ ಪ್ರತಿಭಟನೆ
ಇಲ್ಲಿನ ವಾಣಿಜ್ಯ ಬಂದರು ಎರಡನೇ ಹಂತದ ಕಾಮಗಾರಿಗೆ ಮೀನುಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆ ನಾಲ್ಕನೇ ದಿನವೂ ಮುಂದುವರಿದಿತ್ತು. ಜಿಲ್ಲೆಯ ವಿವಿಧೆಡೆಯಿಂದ ಬಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಜಿಲ್ಲಾ ಕೇಂದ್ರ ಕಾರವಾರದ ಮಿತ್ರ ಸಮಾಜ ಮೈದಾನದಲ್ಲಿ ಸೇರಿ, ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್, ಮಾಜಿ ಸಚಿವ ಆನಂದ ಅಸ್ನೋಟಿಕರ್ ಕೂಡ ಹಾಜರಿದ್ದು, ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಬೆಂಬಲಿಗರು ದೂರವುಳಿದಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಂಜಾಗ್ರತೆಯ ಕ್ರಮವಾಗಿ ಪೊಲೀಸರು ಗೋವಾ- ಕಾರವಾರ ಗಡಿಭಾಗವಾದ ಮಾಜಾಳಿ ಚೆಕ್ ಪೋಸ್ಟ್ ಅನ್ನು ಬಂದ್ ಮಾಡಿದ್ದರು.