ಈ ಬಾರಿ ಉಳವಿಯ ಚನ್ನಬಸವೇಶ್ವರ ಜಾತ್ರೆಯಲ್ಲಿ ಕಾವಿಧಾರಿಗಳಿಗೆ ನಿರ್ಬಂಧ
ಕಾರವಾರ, ಫೆಬ್ರವರಿ 11: ಜೊಯಿಡಾ ತಾಲೂಕಿನ ಉಳವಿಯ ಶ್ರೀಚನ್ನಬಸವೇಶ್ವರ ಜಾತ್ರಾ ಮಹೋತ್ಸವವು ಫೆ.12ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದ್ದು, ಫೆ.19ರ ಸಂಜೆ 4ಕ್ಕೆ ಮಹಾರಥೋತ್ಸವ ಜರುಗಲಿದೆ. ಆದರೆ, ಈ ವೇಳೆ 'ಕಾವಿಧಾರಿ'ಗಳಿಗೆ ನಿರ್ಬಂಧ ಹೇರಲಾಗಿದೆಯಂತೆ.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಗಂಗಾಧರ ಚೆನ್ನಪ್ಪ ಕಿತ್ತೂರ ಈ ಕುರಿತು ಖುದ್ದು ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮಿಗಳು ರಥೋತ್ಸವದ ವೇಳೆ ರಥವನ್ನು ಏರುತ್ತೇನೆಂದು ಪಟ್ಟು ಹಿಡಿದಿದ್ದರು. ಸಂಭ್ರಮದ ಉತ್ಸವಕ್ಕೆ ಅಡಚಣೆ ಮಾಡಿದ್ದರು. ಇದರಿಂದಾಗಿ ಈ ಬಾರಿಯೂ ಇದೇ ರೀತಿ ಘಟನೆ ಮರುಕಳಿಸಬಾರದು ಎಂದು ದೇವಸ್ಥಾನದಿಂದ ಯಾವುದೇ ಕಾವಿಧಾರಿಗಳಿಗೆ ಆಮಂತ್ರಣ ನೀಡಿಲ್ಲ.

ಆದರೂ ರಥೋತ್ಸವಕ್ಕೆ ಬರುವವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿಕೊಳ್ಳಲಾಗುವುದು. ಮುರುಘಾ ಮಠದ ಸ್ವಾಮಿಗಳಿಗೆ ಅವಕಾಶ ನೀಡುವುದು ಭಕ್ತರಿಗೆ ಬಿಟ್ಟಿದ್ದು. ಅವರು ಬಂದು ಅಡಚಣೆ ಉಂಟು ಮಾಡಿ, ಭಕ್ತರ ನಡುವೆ ಹೊಡೆದಾಟವಾದರೆ ಅದಕ್ಕೆ ಅವರೇ ಜವಾಬ್ದಾರರು ಎಂದು ಹೇಳಿದ್ದಾರೆ.

ಉಳವಿಯ ಶ್ರೀಚೆನ್ನಬಸವೇಶ್ವರ ಕ್ಷೇತ್ರ ಮತ್ತು ಚಿತ್ರದುರ್ಗ ಶ್ರೀಮುರುಘಾ ಮಠದ ನಡುವೆ 12ನೇ ಶತಮಾನದಿಂದಲೂ ಸಾಂಸ್ಕೃತಿಕ ಸಂಬಂಧ ಬೆಸೆದು ಬಂದ ಪರಂಪರೆಯಾಗಿದೆ. ಲಿಂಗೈಕ್ಯ ಜಗದ್ಗುರು ಶ್ರೀಜಯದೇವ ಜಗದ್ಗುರುಗಳ ಕಾಲದಿಂದ ಇಲ್ಲಿ ರಥೋತ್ಸವ ಸಂದರ್ಭಕ್ಕೆ ಖುದ್ದಾಗಿ ಮುರುಘಾಶ್ರೀಗಳು ಚಾಲನೆ ನೀಡುವ ಸಂಪ್ರದಾಯವಿತ್ತು.
ಆದರೆ, ಇದೇ ವಿಚಾರವಾಗಿ ದೇವಸ್ಥಾನವನ್ನು ತಮ್ಮ ಹತೋಟಿಗೆ ಪಡೆಯಲು ಶರಣರು ಯತ್ನ ನಡೆಸಿದ್ದರು. ಅದರಂತೆ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ.












Click it and Unblock the Notifications