ಕಪ್ಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದ ರವೀಂದ್ರನಾಥ ಟ್ಯಾಗೋರ್ ಕಡಲತೀರ
Recommended Video

ಕಾರವಾರ, ಜೂನ್.14 : ಎರಡ್ಮೂರು ಬಾರಿ ಹಸಿರು ಬಣ್ಣಕ್ಕೆ ತಿರುಗಿದ್ದ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರ ಇಂದು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದೆ.
ಕಾರವಾರದ ಅಲಿಗದ್ದಾದಿಂದ ಕೋಡಿಬಾಗದವರೆಗಿನ ಕಡಲತೀರ ಸಂಪೂರ್ಣ ಕಪ್ಪಾಗಿದೆ.
ಜತೆಗೆ, ಕಡಲತೀರದಲ್ಲಿ ಕಸಕಡ್ಡಿಗಳು ಬಿದ್ದು ಗಲೀಜಾಗಿದೆ. ಇತ್ತೀಚೆಗಷ್ಟೆ ಕಡಲತೀರದಲ್ಲಿ ಹೂಳೆತ್ತಲಾಗಿತ್ತು. ಚೆನ್ನೈನ ಇಂಟರ್ ನ್ಯಾಶನಲ್ ಸೀಫೋರ್ ಎಂ ಕಂಪನಿಯ ಬೃಹತ್ ಹಡಗುಗಳು 2017 ಡಿ.28 ರಂದು ಮೂರು ತಿಂಗಳ ಕಾಲ ಹೂಳೆತ್ತಿದ್ದವು.
ವಾಣಿಜ್ಯ ಹಡಗು ಚಲಿಸುವ ಚಾನೆಲ್ಗಳಲ್ಲಿ ತುಂಬಿಕೊಂಡಿದ್ದ ಸುಮಾರು 150 ಮೀಟರ್ ಅಗಲ ಹೂಳನ್ನು ಒಟ್ಟು 33 ಕೋಟಿ ರೂ. ವೆಚ್ಚದಲ್ಲಿ ತೆರವುಗೊಳಿಸಲಾಗಿತ್ತು.

ಕಾರವಾರದ ವಾಣಿಜ್ಯ ಬಂದರಿನ ಮಾರ್ಗ ಹಾಗೂ ಬಂದರು ಧಕ್ಕೆ ಪ್ರದೇಶದಲ್ಲಿದ್ದ 17 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ಅರಬ್ಬೀ ಸಮುದ್ರದಲ್ಲಿ 20 ನಾಟಿಕಲ್ ಮೈಲ್ ಚಲಿಸಿ ಸಮುದ್ರದ ಆಳದಲ್ಲಿ ಸುರಿಯಲಾಗಿತ್ತು.
ಇದೇ ಹೂಳು ಈಗ ದಡಕ್ಕೆ ಬಂದಿದ್ದು, ಇದರಿಂದಲೇ ನೀರು ಕಪ್ಪಾಗಿದೆ ಎನ್ನಲಾಗುತ್ತಿದೆ.

ಜತೆಗೆ, ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಬೇಸಿಗೆ ಕಾಲದಲ್ಲಿ ಬೆಂಕಿ ಹಾಕಿದ್ದರು. ಹೀಗಾಗಿ, ಅಲ್ಲಿ ಸುಟ್ಟಿದ್ದ ಗಿಡಗಳು, ಪ್ಲಾಸ್ಟಿಕ್ ವಸ್ತುಗಳು ಮಳೆಯಿಂದಾಗಿ ಕಾಳಿ ನದಿ ಸೇರಿದಂತೆ ಪಶ್ಚಿಮ ಘಟ್ಟದಿಂದ ಸಮುದ್ರಕ್ಕೆ ಸೇರಿಕೊಂಡಿತ್ತು. ಅವುಗಳು ಕೂಡ ಈಗ ದಡಕ್ಕೆ ಬಂದಿದೆ ಎನ್ನಲಾಗಿದೆ.
ಪರಿಣಾಮ ಏನು?
ಈ ಕುರಿತು ಕಡಲ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಮಾತನಾಡಿ, ಈ ಕಸಗಳಿಂದ ಸಮುದ್ರದಲ್ಲಿ ಆಲ್ಗೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಆಲ್ಗೆಗಳು ಹೆಚ್ಚಾದರೆ ಕಡಲ ಜೀವಿಗಳಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಕಸದಿಂದ ಆಲ್ಗೆಗಳಿಗೆ ಅಗತ್ಯ ಪೋಷಕಾಂಶಗಳು ಲಭ್ಯವಾಗುವುದು ಅವುಗಳ ಬೆಳವಣಿಗೆಗೆ ಕಾರಣವಾಗಿದೆ ಎನ್ನುತ್ತಾರೆ.











Click it and Unblock the Notifications