ಕಾರವಾರ: ಪೊಲೀಸ್ ಅಧಿಕಾರಿ ವರ್ಗಾವಣೆಗೆ ವಿರೋಧ, ಸಮುದ್ರದಲ್ಲಿ ಅರೆನಗ್ನ ಪ್ರತಿಭಟನೆ
ಕಾರವಾರ, ನವೆಂಬರ್, 05: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನ್ ಪೆನ್ನೇಕರ್ ವರ್ಗಾವಣೆ ಖಂಡಿಸಿ ನಗರದ ಟ್ಯಾಗೋರ ಕಡಲತೀರದ ಬಳಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಅರೆನಗ್ನ ಸ್ಥಿತಿಯಲ್ಲಿ ಸಮುದ್ರಕ್ಕಿಳಿದು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ನೇಮಕಗೊಂಡಿದ್ದ ಡಾ. ಸುಮನ್ ಪೆನ್ನೇಕರ್ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಟ್ಯಾಗೋರ ಕಡಲತೀರದ ಬಳಿ ಅರೆನಗ್ನರಾಗಿ ಸಮುದ್ರಕ್ಕೆ ಇಳಿದ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಜನ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಲಾಯಿತು.
Breaking: ಹೊಸ ಜಿಲ್ಲೆ ವಿಜಯನಗರದ ಡಿಸಿ, ಎಸ್ಪಿ ಬದಲಾವಣೆ
ಬಳಿಕ ಮಾತನಾಡಿದ ರಾಘು ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಡಾ. ಸುಮನ್ ಫೆನ್ನೇಕರ್ ಜಿಲ್ಲೆಯಲ್ಲಿ ವ್ಯಾಪಾಕವಾಗಿ ನಡೆಯುತ್ತಿದ್ದ ಮಟ್ಕಾ ಜೂಜು, ಇಸ್ಪೀಟ್, ಗಾಂಜಾ, ಕೋಳಿ ಅಂಕ ಸೇರಿದಂತೆ ಇನ್ನಿತರ ಕಾನೂನು ಬಾಹೀರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಯಾವ ರಾಜಕಾರಣಿಗಳಿಗೂ ಬಗ್ಗದೆ ಅಕ್ರಮ ಚಟುವಟಿಕೆ ನಿಲ್ಲಿಸಿ ಉತ್ತಮ ಆಡಳಿತವನ್ನು ನಡೆಸಿದ್ದರು. ಆದರೆ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಉತ್ತಮ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಬರುವ ಚುನಾವಣೆಯಲ್ಲಿ ತಮ್ಮ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದು ಈ ರೀತಿಯ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಕರವೇ ಕಾರ್ಯಕರ್ತರಿಂದಲೂ ಪ್ರತಿಭಟನೆ
ಎಸ್ಪಿ ವರ್ಗಾವಣೆಯಿಂದ ಸಾಕಷ್ಟು ಜನರು ಬೇಸರಗೊಂಡಿದ್ದು, ಮಹಿಳೆಯರು ಹಾಗೂ ಯುವಕರು ಪ್ರತಿಭಟನೆಗೆ ಮುಂದಾಗಿದ್ದರು. ಹೀಗಾಗಿ ಸರ್ಕಾರ ಅವರ ವರ್ಗಾವಣೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಡಾ. ಸುಮನ್ನಾ ಪೆನ್ನೇಕರ್ ವರ್ಗಾವಣೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ದಾಂಡೇಲಿ ಘಟಕದ ಪದಾಧಿಕಾರಿಗಳು ಕೂಡ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದರು. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿಭಾಯಿಸಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಜು, ಪಬ್ಗಳಿಗೆ ಬ್ರೇಕ್ ಹಾಕಿದ್ದರು. ಇದರಿಂದ ಅನೇಕ ಯುವಕರು ದುಶ್ಚಟಕ್ಕೆ ಬಲಿ ಆಗುವುದು ತಪ್ಪುವಂತಾಗಿತ್ತು. ಇದರಿಂದ ಬಡ ಜನರು ನಿಷ್ಠೆಯಿಂದ ಜೀವನ ನಡೆಸಲು ದಾರಿ ಆಗಿತ್ತು. ಇಂತಹ ನಿಷ್ಠಾವಂತ ಅಧಿಕಾರಿಯನ್ನು ಕೆಲ ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್ ಎಂ. ಆರ್. ಅಧಿಕಾರ ಸ್ವೀಕಾರ
ಕೂಡಲೇ ಸರ್ಕಾರ ಡಾ.ಸುಮನ್ ಪೆನ್ನೇಕರ್ ವರ್ಗಾವಣೆಯನ್ನು ಹಿಂಪಡೆಯಬೇಕು. ಒಂದು ವೇಳೆ ಸರ್ಕಾರ ಸ್ಪಂದಿಸದೆ ಇದ್ದರೆ ಮುಂದಿನ ದಿನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಬಣದ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪ್ರವೀಣ ಕೊಠಾರಿ, ಕಾರವಾರ ತಾಲೂಕು ಅಧ್ಯಕ್ಷ ಅಕ್ಷಯ ಎಸ್.ಪಿ. ಮಂಜುನಾಥ ಪಂತೋಜಿ, ಸಂದೀಪ್ ಭಂಡಾರಿ, ಪ್ರಸಾದ ಮಡಿವಾಳ, ಅಜಯ್ ಬಾನಾವಳಿ, ಗಗನ ಗೋವೇಕರ್, ಪ್ರಸಾದ್ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.