ಸೀಬರ್ಡ್ 2ನೇ ಹಂತದ ಕಾಮಗಾರಿ; 5 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ
ಕಾರವಾರ, ಜುಲೈ 27: "ಏಷ್ಯಾದ ಅತಿದೊಡ್ಡ ನೌಕಾನೆಲೆ, ಕಾರವಾರದ ಸೀಬರ್ಡ್ ನೌಕಾನೆಲೆಯ 2ನೇ ಹಂತದ ವಿಸ್ತರಣೆ ಯೋಜನೆಗೆ 20 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. 2023ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ನೌಕಾಪಡೆಯ ಕರ್ನಾಟಕ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ ಸಿಂಗ್ ತಿಳಿಸಿದರು.
ತಾಲೂಕಿನ ಅರಗಾದ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಪ್ರಸ್ತುತ ನೌಕಾನೆಲೆಯಲ್ಲಿ 32 ಯುದ್ಧನೌಕೆ ಹಾಗೂ ಸಬ್ ಮರಿನ್ ನಿಲ್ಲುವ ಸಾಮರ್ಥ್ಯ ಇದೆ. ಎರಡನೇ ಹಂತದ ವಿಸ್ತರಣೆ ಬಳಿಕ ಒಟ್ಟು 50 ಯುದ್ಧ ನೌಕೆಗಳು ಹಾಗೂ ಸಬ್ಮರಿನ್ ನಿಲ್ಲಲು ಸಾಧ್ಯವಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ 100 ಯುದ್ಧನೌಕೆಗಳು ನಿಲ್ಲುವಷ್ಟು ವಿಸ್ತರಣೆ ಮಾಡಿಕೊಳ್ಳಲು ಅವಕಾಶವಿದೆ" ಎಂದು ಮಾಹಿತಿ ನೀಡಿದರು.
ನೌಕಾನೆಲೆ ನೋಡಲು ಬಂದರು ಸಾವಿರಾರು ಜನರು
ಎರಡನೇ ಹಂತದ ವಿಸ್ತರಣೆ ಬಳಿಕ ನೌಕಾನೆಲೆಯು ಈಗಿರುವುದಕ್ಕಿಂತ ಮೂರು ಪಟ್ಟು ಅಧಿಕವಾಗಲಿದೆ. ಸುಮಾರು 4500 ರಿಂದ 5000 ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಬಳಿಕ ಸುಮಾರು 5 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಇದರ ಜೊತೆಗೇ ಪರೋಕ್ಷವಾಗಿ ಮತ್ತಷ್ಟು ನೌಕರಿ, ಉದ್ಯಮಗಳಿಗೆ ಅವಕಾಶ ಸೃಷ್ಟಿಯಾಗಲಿದೆ. ನೌಕಾನೆಲೆಗೆ ಅಗತ್ಯವಿರುವ ಸಲಕರಣೆಗಳನ್ನು ಪೂರೈಕೆ ಮಾಡುವಂಥ ಹಲವು ಕೈಗಾರಿಕೆಗಳ ಸ್ಥಾಪನೆಗೂ ಇಲ್ಲಿ ಅವಕಾಶಗಳಿವೆ ಎಂದು ತಿಳಿದುಬಂದಿದೆ.
"ಸೀಬರ್ಡ್ ನೌಕಾನೆಲೆಯ 'ಕ್ಲಾಸ್ 4' ಹುದ್ದೆಗಳಿಗೆ ಸ್ಥಳೀಯವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ನೌಕಾಪಡೆ ಕೇಂದ್ರ ಕಚೇರಿಯಿಂದ ಅನುಮತಿ ಸಿಕ್ಕಿದ್ದು, ಲಿಖಿತ ಆದೇಶ ಬಂದ ಕೂಡಲೇ ಇದನ್ನು ಜಾರಿಗೆ ತರಲಾಗುತ್ತದೆ. ಕೆಳಹಂತದ ಸಿಬ್ಬಂದಿ ನೇಮಕಾತಿ ಪರೀಕ್ಷೆಯನ್ನು ಕಾರವಾರದಲ್ಲೇ ಆಯೋಜಿಸುವಂತೆ ನಾವು ಕಳುಹಿಸಿದ್ದ ಪ್ರಸ್ತಾವವನ್ನು ಕೇಂದ್ರ ಕಚೇರಿ ಸ್ವೀಕರಿಸಿದೆ" ಎಂದು ಮಹೇಶ್ ಸಿಂಗ್ ತಿಳಿಸಿದರು.
ಕಾರವಾರ ನೌಕಾನೆಲೆ ಮುಂದೆ ಸ್ಥಳೀಯರ ಪ್ರತಿಭಟನೆ
ಎರಡನೇ ಹಂತದ ವಿಸ್ತರಣೆಗೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಇರುವುದಿಲ್ಲ. ಈಗಾಗಲೇ ಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿಯೇ ಯೋಜನೆ ಸಿದ್ಧವಾಗಲಿದ್ದು 2023ರಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಯೋಜನೆಯು ವಿಮಾನ ನಿಲ್ದಾಣವನ್ನೂ ಒಳಗೊಂಡಿದೆ. ಆದರೆ ವಿಮಾನ ನಿಲ್ದಾಣವು 2025ರ ವೇಳೆಗೆ ಪೂರ್ಣಗೊಳ್ಳಲಿದೆ. ನಿಲ್ದಾಣವನ್ನು ಸಾರ್ವಜನಿಕರಿಗಾಗಿಯೂ ಬಳಸಲು ಅವಕಾಶವಿದೆ. ಈ ಹಿನ್ನಲೆಯಲ್ಲಿ 1 ಕಿ.ಮೀ. ರನ್ ವೇ ಅನ್ನು ಹೆಚ್ಚುವರಿ ನಿರ್ಮಿಸುವ ಅವಶ್ಯಕತೆ ಇರುವುದರಿಂದ ಸುಮಾರು 40 ಎಕರೆ ಪ್ರದೇಶವನ್ನು ರಾಜ್ಯ ಸರಕಾರವು ನೀಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೌಕಾ ಸೇನೆಯ ಪ್ರಮುಖ ಅಧಿಕಾರಿಗಳಾದ ಎ.ಪಿ.ಕುಲಕರ್ಣಿ, ಎ ಕಿರಣ ಕುಮಾರ ರೆಡ್ಡಿ, ಕೆ.ಪಿ.ಶ್ರೀಸಾನ್, ಶಾಂತನು ಶರ್ಮಾ, ಅಜಯ ಕಪೂರ ಹಾಗೂ ಉತ್ಪಾಲ ಬೋರಾ ಇದ್ದರು.