ಬಿಎಸ್ವೈ ಗೆ ತೊಂದರೆ ಕೊಟ್ಟರೆ 'ಮಹಾ' ಸ್ಥಿತಿನೇ ರಾಜ್ಯಕ್ಕೂ: ಯತ್ನಾಳ್
ಕಾರವಾರ, ಡಿಸೆಂಬರ್ 11: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಏನಾದರೂ ಸ್ವಪಕ್ಷದವರು ಅಥವಾ ಮೇಲಿನವರು ತೊಂದರೆ ಕೊಟ್ಟರೆ ಮಹಾರಾಷ್ಟ್ರಕ್ಕಾದ ಸ್ಥಿತಿ ಕರ್ನಾಟಕಕ್ಕೂ ಆಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪಕ್ಷದವರ ವಿರುದ್ದವೇ ಸಿಡಿದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾತನಾಡಿದ ಅವರು ಉಪ ಚುನಾವಣೆ ಫಲಿತಾಂಶದಿಂದ ಸಿಎಂ ಯಡಿಯೂರಪ್ಪ ಅವರು ಕರ್ನಾಟಕದ ಜನನಾಯಕ ಎಂಬುದನ್ನು ಮತದಾರರು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿದ್ದಾರೆ ಎಂದರು.
ಯಡಿಯೂರಪ್ಪನವರಿಗೆ ಸರ್ಕಾರ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕು, ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಅದು ರಾಜ್ಯ ನಾಯಕರಾಗಲಿ ಅಥವಾ ಕೇಂದ್ರ ನಾಯಕರಾಗಲಿ ಎಂದು ಗುಡುಗಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತೊಂದರೆ ಕೊಟ್ಟರೆ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಪರಿಸ್ಥಿತಿ ರಾಜ್ಯಕ್ಕೂ ಬರಬಹುದು. ಹತ್ತು ಮತಗಳನ್ನು ಪಡೆಯಲಾಗದವರು ಮೇಲೆ ಹತ್ತಿ ಕೂತು ಮಾತನಾಡುತ್ತಾರೆ. ಯಾರನ್ನೋ ಅಧಿಕಾರದಿಂದ ಕೆಳಗೆ ಇಳಿಸುತ್ತೇನೆ, ಯಾರನ್ನೋ ಕರೆ ತಂದು ಪ್ರಚಾರ ಮಾಡಿಸುತ್ತೇನೆ ಎನ್ನುವ ಕಾಲ ಹೋಗಿದೆ ಎಂದರು.
ಡಿಸೆಂಬರ್ 09 ರಂದು ಪ್ರಕಟವಾದ ಫಲಿತಾಂಶದಲ್ಲಿ ಎಲ್ಲವೂ ಗೊತ್ತಾಗಿದೆ. ರಾಜ್ಯ ನಾಯಕರು ಫೀಲ್ಡ್ ಗೆ ಇಳಿದು ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿ.ಎಲ್.ಸಂತೋಷ್ ಅವರಿಗೆ ಟಾಂಗ್ ನೀಡಿದರು.
ಸಚಿವ ಸ್ಥಾನ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದಿಲ್ಲ, ಲಾಭಿ ಮಾಡಲ್ಲ, ನಾನು ಮಂತ್ರಿಗಿರಿ ಆಕಾಂಕ್ಷಿಯಲ್ಲ ಎಂದರು. 12 ಜನ ಗೆದ್ದಿದ್ದು ಖುಷಿಯಾಗಿದೆ, ಅವರಿಂದಾನೆ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಹೀಗಾಗಿ ಶಾಸಕನಾಗಿಯೇ ನಾನು ಅಭಿವೃದ್ದಿ ಮಾಡುತ್ತೇನೆ ಎಂದರು.












Click it and Unblock the Notifications