ನಾನು ಮುಸ್ಲಿಮರ ವಿರೋಧಿಯಲ್ಲ ಅಂದರಪ್ಪೋ ಅನಂತಕುಮಾರ್ ಹೆಗಡೆ
Recommended Video
ಕಾರವಾರ, ಮೇ 1: "ನಾನು ಮುಸಲ್ಮಾನರ ವಿರೋಧಿ ಅಲ್ಲ. ಆದರೆ ಮತ್ತೊಂದು ಸಮಾಜವನ್ನು ನಾಶ ಮಾಡಿ ಬದುಕಬೇಕೆಂಬ ಸಂಸ್ಕೃತಿಯನ್ನು ಒಪ್ಪಿಕೊಳ್ಳಲು ನಾನು ತಯಾರಿಲ್ಲ. ನಾವು ಎಲ್ಲರೂ ಒಟ್ಟಿಗೆ ಬದುಕಬೇಕು ಎಂಬ ಸಂಸ್ಕೃತಿ ನಮ್ಮದು. ಮತ್ತೊಬ್ಬರನ್ನು ತುಳಿದು, ನಾಶ ಮಾಡಿ ಬದುಕಬೇಕು ಎಂಬ ಸಂಸ್ಕೃತಿ ನಮ್ಮದಲ್ಲ" ಎಂದು ಕೇಂದ್ರ ಕೌಶಾಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.
ತಾಲೂಕಿನ ಶೇಜವಾಡದ ಸದಾನಂದ ಸಭಾಂಗಣದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ವೇಳೆ ಮಾತನಾಡಿ, ಕಳೆದ 70 ವರ್ಷಗಳಲ್ಲಿ ನಮ್ಮ ಧರ್ಮವನ್ನು ಕಾಂಗ್ರೆಸ್ ಅವಹೇಳನ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ 4- 5 ಪ್ರತಿಶತ ಮುಸಲ್ಮಾನರು ಈಗ ಅನಧಿಕೃತವಾಗಿ ಹದಿನೈದರಿಂದ ಇಪ್ಪತ್ತು ಪ್ರತಿಶತಕ್ಕೆ ತಲುಪಿದ್ದಾರೆ ಎಂದರು.
ಕಾಂಗ್ರೆಸ್ ಒಂದು ನಾಟಕದ ಕಂಪನಿ: ಅನಂತ ಕುಮಾರ್ ಹೆಗಡೆ
ಯಾವ ದೇಶ ಮೂವತ್ತು ಪ್ರತಿಶತ ಮುಸಲ್ಮಾನರನ್ನು ಹೊಂದುತ್ತದೋ ಆ ದೇಶ ಸಂಪೂರ್ಣ ಇಸ್ಲಾಂ ದೇಶವಾಗಿ ಪರಿವರ್ತನೆಯಾಗುತ್ತದೆ. ಇದಕ್ಕೆ ಇತಿಹಾಸ ಸಾಕ್ಷಿ. ಭಯೋತ್ಪಾದಕರ ಜತೆ ಕಾಂಗ್ರೆಸ್ ರಾಜಿ ಮಾಡಿಕೊಳ್ಳುತ್ತಿದೆ. ದೇಶಭಕ್ತರನ್ನು ದಮನ ಮಾಡುತ್ತಿದೆ. ನಮ್ಮ ದೇಶದಲ್ಲಿ ನಾವು ನಾವಾಗಿ ಬದುಕಲು ಚಿತ್ರಹಿಂಸೆ ಅನುಭವಿಸಬೇಕಾಗಿದೆ ಎಂದರು.
ಧರ್ಮಕ್ಕಾಗಿ ಕೆಲಸ ಮಾಡುವವರ ರಕ್ತ ತೆಗೆಯುತ್ತಿದೆ
ಭಯೋತ್ಪಾದಕರು, ಕೊಲೆಗಡುಕರನ್ನು ಇಟ್ಟುಕೊಂಡು ಸಭೆ ನಡೆಸುವ ಕಾಂಗ್ರೆಸ್, ಧರ್ಮಕ್ಕಾಗಿ ಕೆಲಸ ಮಾಡುವವರ ರಕ್ತ ತೆಗೆಯುತ್ತಿದೆ. ನಮ್ಮ ರಕ್ತಕ್ಕೆ ಆದ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ. ನಮ್ಮ ಧರ್ಮವನ್ನು ಕಡೆಗಣಿಸಿದ ಕಾಂಗ್ರೆಸ್ ನಂಥ ಪಕ್ಷ ದೇಶದಲ್ಲಿ ಇರಬಾರದು. ಅದು ಐತಿಹಾಸಿಕವಾಗಿ ಸೋಲು ಕಾಣಬೇಕು. ದೇಶದಲ್ಲಿ ಭಗವಧ್ವಜ ಹಾರಾಡಲು ಹಾಗೂ ಧರ್ಮವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಬೇಕು. ಆ ವಿಶ್ವಾಸ ನಮಗಿದೆ.
ಆತ್ಮವಿಶ್ವಾಸ ಕೊಡುವ ಸರಕಾರ ಬರಬೇಕು
ಎಲ್ಲಿಯವರೆಗೆ ಆತ್ಮವಿಶ್ವಾಸ ಕೊಡುವ ಸರಕಾರ ಅಧಿಕಾರಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಯಾರೂ ಬದುಕಿನಲ್ಲಿ ಬೆಳವಣಿಗೆ ಕಾಣಲ್ಲ. ಇನ್ನು ಮುಂದೆ ಕಾಂಗ್ರೆಸ್ ಕಾರವಾರದಲ್ಲಿ ತಲೆ ಎತ್ತಬಾರದು. ಸಂಪೂರ್ಣ ನಿರ್ನಾಮವಾಗಬೇಕು. ಅದರ ವಿಚಾರ ಈ ನೆಲದಲ್ಲಿ ಇರಬಾರದು. ಅದು ಒಂದು ರೋಗವಿದ್ದಂತೆ. ಅದನ್ನು ಶಾಶ್ವತವಾಗಿ ಮನೆಗೆ ಕಳುಹಿಸಬೇಕು ಎಂದರು.
ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಬಲಾಬಲದ ಚಿತ್ರಮಾಹಿತಿ
ಎಪ್ಪತ್ತು ವರ್ಷಗಳವರೆಗೆ ಯಾಕೆ ಪಾಪ ಮಾಡಿದ್ದೀರಿ?
ಕಾಂಗ್ರೆಸ್ ನವರು ಮನೆಗೆ ಮತ ಯಾಚಿಸಲು ಬಂದರೆ ಮತ ಕೊಡಲ್ಲ ಅನ್ನಬೇಡಿ. ಕಳೆದ ಎಪ್ಪತ್ತು ವರ್ಷಗಳವರೆಗೆ ಯಾಕೆ ಪಾಪ ಮಾಡಿದ್ದೀರಿ. ನಮ್ಮ ಕಣ್ಣಲ್ಲಿ ಯಾಕೆ ನೀರು ಹರಿಸಿದಿರಿ ಅಂತ ಕೇಳಿ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ನಂಬಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಅದರೆ ರಾಜೇಂದ್ರ ನಾಯ್ಕರನ್ನು ನೋಡಿದರೆ ದುಃಖ ಉಂಟಾಗುತ್ತದೆ. ಕಳೆದ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಅವರ ಭಾವನೆಗಳನ್ನು ದಮನ ಮಾಡಿಟ್ಟಿದ್ದಕ್ಕೆ ನೋವುಂಟಾಗತ್ತದೆ. ಕಳೆದ ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ನಮ್ಮನ್ನು ನಡೆಸಿಕೊಂಡಿದ್ದು ಹೀಗೆ. ಅದು ಇತ್ತೀಚೆಗೆ ನಮ್ಮ ಅನುಭವಕ್ಕೆ ಬರುತ್ತಿದೆ. ಕಾಂಗ್ರೆಸ್ ಗೆಲ್ಲಬಾರದು. ಅದು ಭಾರತದ ಮಣ್ಣಿನಲ್ಲಿ ಸೋಲನ್ನು ಕಾಣಬೇಕು. ಆದರೆ ಇದು ರಾಜಕೀಯ ಮೇಲಾಟದ ವಿಷಯವಲ್ಲ. ಕಳೆದು ಎಪ್ಪತ್ತು ವರ್ಷಗಳಿಂದ ನಾವು ಅಭಿವೃದ್ಧಿಯ ಬಗ್ಗೆ ಕಂಡ ಕನಸನ್ನು ರಾಜಕೀಯ ದೊಂಬರಾಟದಲ್ಲಿ ಕಾಂಗ್ರೆಸ್ ಹೊಸಕಿ ಹಾಕಿದೆ ಎಂದರು.
ರಾಜಕೀಯ ಪಕ್ಷವಲ್ಲ, ಅದು ಒಂದು ಸಂಸ್ಕೃತಿ
ಕಾಂಗ್ರೆಸ್ ಎನ್ನುವುದು ರಾಜಕೀಯ ಪಕ್ಷವಲ್ಲ. ಅದು ಒಂದು ಸಂಸ್ಕೃತಿ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಆ ಸಂಸ್ಕೃತಿ ಇರುತ್ತದೋ ಅಲ್ಲಿಯವರೆಗೆ ನಾವು ಉದ್ಧಾರ ಆಗಲ್ಲ. ಈಗ ಕಾಂಗ್ರೆಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಎಪ್ಪತ್ತು ವರ್ಷಗಳವರೆಗೆ ಮಾಡಿದ ಕರ್ಮದ ಫಲವಾಗಿ ಕಾಂಗ್ರೆಸ್ ಇವತ್ತು ತನ್ನ ಮನೆಯಲ್ಲೇ ಸಮಾಧಿಯಾಗುತ್ತಿದೆ. ಅದು ಕೇವಲ ಹಿಂದುಳಿದವರು, ಮೀಸಲಾತಿ ಎಂಬ ಭಾಷೆಯನ್ನು ಹೇಳಿಕೊಟ್ಟಿದೆ ಹೊರತು ಅಭಿವೃದ್ಧಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಾವು ಹೊಸ ಕ್ರಾಂತಿಯ ಹೆಜ್ಜೆ ಇಡಲಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಇಂಟರ್ನೆಟ್, ಫೋನ್ ಇಲ್ಲದ ಹಳ್ಳಿಗಳಿಗೆ ಅದನ್ನು ಉಚಿತವಾಗಿ ನೀಡುವ ಯೋಜನೆಯನ್ನು ಕೇಂದ್ರ ಸರಕಾರ ತರುತ್ತಿದೆ ಎಂದರು.