ಹೊನ್ನಾವರ ಮೀನುಗಾರರ ಸಮಸ್ಯೆಗೆ ಸದನದಲ್ಲಿ ಹೋರಾಟ: ಡಿಕೆಶಿ
ಕಾರವಾರ, ಜುಲೈ 07; "ಮೀನುಗಾರರ ಸಮಸ್ಯೆಗೆ ಸದನದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡುವ ಮೂಲಕ ಧ್ವನಿಯಾಗುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭರವಸೆ ನೀಡಿದರು.
ಬುಧವಾರ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶಕ್ಕೆ ಅವರು ಭೇಟಿ ನೀಡಿದರು. ಸ್ಥಳೀಯ ಮೀನುಗಾರರ ಅಳಲು ಆಲಿಸಿದರು. "ಖಾಸಗಿಯವರಿಗೆ ಬೇರೆ ಎಲ್ಲಿ ಬೇಕಾದರೂ ಜಾಗ ಕೊಡಬಹುದು. ಆದರೆ ತಲೆಮಾರುಗಳಿಂದ ವಾಸ್ತವ್ಯದಲ್ಲಿದ್ದು, ಜೀವನ ಕಟ್ಟಿಕೊಂಡಿರುವ ಮೀನುಗಾರರನ್ನು ಒಕ್ಕಲೆಬ್ಬಿಸಬಾರದು" ಎಂದರು.
"ಕಾಸರಕೋಡ ವಾಣಿಜ್ಯ ಬಂದರಿನ ಕುರಿತು ಕಾಗದ ಪತ್ರಗಳನ್ನು ತರಿಸಿಕೊಂಡು ಅಧ್ಯಯನ ಮಾಡಿ ಮೀನುಗಾರರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ವಾಣಿಜ್ಯ ಬಂದರು ನಿರ್ಮಾಣಕ್ಕೆ ಅವಕಾಶ ನೀಡಲ್ಲ. ಮೀನುಗಾರರ ಬದುಕನ್ನು ಕಸಿದು ಬಂದರು ನಿರ್ಮಾಣಕ್ಕೆ ಸರಕಾರಕ್ಕೆ ಬಿಡಲ್ಲ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

"ಮೀನುಗಾರರನ್ನು ಒಕ್ಕಲೆಬ್ಬಿಸಲು ಮುಂದಾದಲ್ಲಿ ಸಿದ್ದರಾಮಯ್ಯ, ದೇಶಪಾಂಡೆ ಜತೆ ಬಂದರು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬಂದು ಧರಣಿ ನಡೆಸಲಿದ್ದೇವೆ" ಎಂದು ಡಿ. ಕೆ. ಶಿವಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಏನಿದು ವಿವಾದ?; ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಪ್ರದೇಶದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿದೆ. ಸುಮಾರು 93 ಎಕರೆ ಪ್ರದೇಶದಲ್ಲಿ 650 ಕೋಟಿ ವೆಚ್ಚದಲ್ಲಿ ಖಾಸಗಿ ಬಂದರು ನಿರ್ಮಾಣವಾಗುತ್ತಿದೆ. ವಾಣಿಜ್ಯ ಬಂದರಿಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಂದರು ನಿರ್ಮಾಣವಾದರೆ ಶರಾವತಿ ಟೊಂಕಾ ಪ್ರದೇಶದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗಲಿದೆ. ನೂರಾರು ಕುಟುಂಬ ಬೀದಿಗೆ ಬೀಳಲಿದೆ ಎಂದು ಮೀನುಗಾರರು ಕಾಮಗಾರಿ ವಿರೋಧಿಸುತ್ತಿದ್ದಾರೆ.

ಕೆಲವು ದಿನದ ಹಿಂದೆ ಈ ಬಂದರು ಕಾಮಗಾರಿಗಾಗಿ ಮನೆಗಳ ತೆರವಿಗೆ ಅಧಿಕಾರಿಗಳು ಆಗಮಿಸಿದ್ದರು. ಆಗ ಮೀನುಗಾರ ಯುವಕರು ಸಮುದ್ರಕ್ಕೆ ಹಾರಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿ, ಪ್ರತಿಭಟನೆ ನಡೆಸಿದ್ದರು.
ಕುಟುಂಬಕ್ಕೆ ಸಾಂತ್ವನ; ಡಿ. ಕೆ. ಶಿವಕುಮಾರ್ ಇತ್ತೀಚೆಗೆ ಮೃತಪಟ್ಟ ಮೀನುಗಾರ ಉದಯ ತಾಂಡೇಲ್ ಕುಟುಂಬದವರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ಧನಸಹಾಯ ಮಾಡಿದರು.












Click it and Unblock the Notifications