ಹಳಿಯಾಳ: ಎಪಿಎಂಸಿ ಚುನಾವಣೆಗಾಗಿ ಸದಸ್ಯರೇ ಕಿಡ್ನಾಪ್?
ಕಾರವಾರ, ಜೂನ್ 22: ಹಳಿಯಾಳ ತಾಲೂಕಿನ ಎಪಿಎಂಸಿ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಕಿಡ್ನಾಪ್ ಆದ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ.
ಹಳಿಯಾಳ ಎಪಿಎಂಸಿ ವ್ಯಾಪ್ತಿಗೆ ಬರುವ ರಾಮನಗರ ಭಾಗದ ಕಾಂಗ್ರೆಸ್ ಬೆಂಬಲಿತ ಎಪಿಎಂಸಿ ಸದಸ್ಯ ವಸಂತ್ ಸಗುಣ ಹರಿಜನ ಎಂಬಾತನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆಕೆಯ ಪತ್ನಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಬಿಜೆಪಿ ಬೆಂಬಲಿತ ಸದಸ್ಯ ಕೃಷ್ಣಮೂರ್ತಿ ರಾಮಚಂದ್ರ ಪಾಟೀಲ್ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಆತನ ತಂದೆ ದೂರು ನೀಡಿದ್ದಾರೆ.
ಬುಧವಾರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲೇಬೇಕೆಂದು ಪೈಪೋಟಿ ನಡೆಸಿದ್ದು ಚುನಾವಣೆ ಹಿನ್ನಲೆಯಲ್ಲಿ ಕಿಡ್ನಾಪ್ ಪ್ರಸಂಗ ಸಹ ನಡೆದಿದೆ ಎನ್ನಲಾಗಿದೆ.

ಯಾತಕ್ಕಾಗಿ ಈ ಜಿದ್ದಿನ ಹೋರಾಟ?
ಒಟ್ಟು 13 ಸದಸ್ಯ ಬಲದ ಹಳಿಯಾಳ ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನದಲ್ಲಿ ಗೆದ್ದಿದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನದಲ್ಲಿ ಗೆಲುವು ಪಡೆದಿದ್ದರು. 3 ಜನ ಸರ್ಕಾರದಿಂದ ನಾಮನಿರ್ದೇಶನ ಮಾಡಲಿದ್ದು, ಒಟ್ಟು 16 ಸದಸ್ಯ ಬಲದಲ್ಲಿ ಕಳೆದ ಬಾರಿ 11 ಸದಸ್ಯರ ಬೆಂಬಲದಿಂದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ಪುತ್ರ ಶ್ರೀನಿವಾಸ್ ಘೋಟ್ನೇಕರ್ ಅಧ್ಯಕ್ಷರಾಗಿದ್ದರು.
ಈ ಬಾರಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದ್ದು ಸರ್ಕಾರದ ಪರವಾಗಿ ಬಿಜೆಪಿ ಬೆಂಬಲಿತ ಮೂವರನ್ನು ಎಪಿಎಂಸಿಗೆ ನಾಮನಿರ್ದೇಶನ ಮಾಡಿದೆ. ಬಿಜೆಪಿ ಎಪಿಎಂಸಿಯಲ್ಲಿ 8 ಸದಸ್ಯ ಬಲವಾದ ಹಿನ್ನಲೆಯಲ್ಲಿ ಅಧ್ಯಕ್ಷಗಾದಿ ತಮ್ಮ ಬೆಂಬಲಿಗರೇ ಪಡೆಯಬೇಕು ಎಂದು ಮಾಜಿ ಶಾಸಕ ಸುನಿಲ್ ಹೆಗಡೆ ನಿರಂತರ ಪ್ರಯತ್ನ ನಡೆಸಿದ್ದಾರೆ.
ಇನ್ನು ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಆಯ್ಕೆ ಬಯಸಿ ಶ್ರೀನಿವಾಸ್ ಘೋಟ್ನೇಕರ್ ಪ್ರಯತ್ನ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಎಪಿಎಂಸಿ ಚುನಾವಣೆ ಅನ್ನುವುದು ಮಿನಿ ಸಮರದಂತಾಗಿದ್ದು ಬುಧವಾರ ನಡೆಯುವ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವುದು ಇದೀಗ ಕ್ಷೇತ್ರದ ಜನರ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications