ಉತ್ತರಕನ್ನಡದಲ್ಲಿ ಪಂಚರತ್ನ ಯಾತ್ರೆ: ತರಕಾರಿ, ಅಡಿಕೆ ಹಾರ ಹಾಕಿ ಕುಮಾರಸ್ವಾಮಿ ಬರಮಾಡಿಕೊಂಡ ಜನ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಮುಂದುವರೆದಿದ್ದು, ಇಲ್ಲಿನ ಜನರು ಎಚ್.ಡಿ. ಕುಮಾರಸ್ವಾಮಿಯವರನ್ನು ಯಾವ ರೀತಿ ಬರಮಾಡಿಕೊಂಡಿದ್ದಾರೆ ನೋಡಿ.
ಕಾರವಾರ, ಫೆಬ್ರವರಿ, 09: ಉತ್ತರಕನ್ನಡದಲ್ಲಿ 2ನೇ ದಿನವೂ ಪಂಚರತ್ನ ರಥಯಾತ್ರೆ ಮುಂದುವರೆದಿದೆ. ಕುಮಟಾದ ತಲಗೇರಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಂದಾವರದಿಂದ- ಹೊನ್ನಾವರ ಹಾಗೂ ಭಟ್ಕಳದತ್ತ ಯಾತ್ರೆ ಆರಂಭಿಸಿದ್ದಾರೆ.
ತಲಗೇರಿ ಗ್ರಾಮದ ವನದುರ್ಗ ದೇವಾಲಯದಲ್ಲಿ ಕುಮಾರಸ್ವಾಮಿ ಹಾಗೂ ಗ್ರಾಮದ ಮುಖಂಡರ ಜೊತೆ ಅವರು ಪೂಜೆ ಸಲ್ಲಿಸಿದರು. ಅವರು ಸಿಎಂ ಆಗಿದ್ದ ವೇಳೆ ಗ್ರಾಮ ವಾಸ್ತವ್ಯ ಮಾಡಿರುವ ಸಂದರ್ಭವನ್ನು ನೆನೆಪು ಮಾಡಿಕೊಂಡರು. ಇನ್ನು ಬುಧವಾರ (ಫೆಬ್ರವರಿ 08) ಪಂಚರತ್ನ ರಥಯಾತ್ರೆಗೆ ಭಾರಿ ಜನಬೆಂಬಲ ವ್ಯಕ್ತವಾದ ಬೆನ್ನಲ್ಲೆ ಇಂದು (ಗುರುವಾರ) ಕುಮಟಾದ ಚಂದಾವರ, ಹೊನ್ನಾವರ ತಾಲೂಕಿನಲ್ಲಿ ಸಂಚರಿಸಿ ಕುಮಟಾ ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ಪರ ಪ್ರಚಾರ ಕೈಗೊಂಡಿದ್ದಾರೆ.
ಅಡಿಕೆ, ತರಕಾರಿ ಹಾರ ಹಾಕಿ ಸ್ವಾಗತ
ಇನ್ನು ಪಂಚರತ್ನ ಯಾತ್ರೆಯಲ್ಲಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕುಮಟಾದ ಕಾಗಲ್ ಬಾಗದ ಜನರು ಬುಧವಾರ ರಾತ್ರಿ ಬೃಹತ್ ಗಾತ್ರದ ಅಡಿಕೆ ಹಾರ ಹಾಕಿ ಸ್ವಾಗತ ಮಾಡಿದರು. ಬಳಿಕ ವಿವಿಧ ಬಗೆಯ ತರಕಾರಿಗಳಿಂದ ಮಾಡಿದ ಯಕ್ಷಗಾನ ಕಿರೀಟದ ಹಾರವನ್ನು ಸಹ ಹಾಕಿ ಸ್ವಾಗತಿಸಿದರು.

ಅಧಿಕಾರಕ್ಕೆ ಬಂದ್ರೆ ಸುಗ್ಗಿ ಕುಣಿತಕ್ಕೆ ಪ್ರೋತ್ಸಾಹ
ಕುಮಟಾ ತಾಲೂಕಿನಲ್ಲಿ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ವಾಸ್ತವ್ಯಕ್ಕೆ ಆಗಮಿಸಿದ್ದ ಅವರನ್ನು ಅಘನಾಶಿನಿ ಗ್ರಾಮದಲ್ಲಿ ಸುಗ್ಗಿ ಕುಣಿತದ ಮೂಲಕ ಮಕ್ಕಳು ಸ್ವಾಗತ ಕೋರಿದರು. ಕುಮಾರಸ್ವಾಮಿ ಸುಗ್ಗಿ ಕುಣಿತ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಈ ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದರೆ ಅಘನಾಶಿನಿಯ ಸುಗ್ಗಿ ಕುಣಿತಕ್ಕೆ ಅಗತ್ಯ ಪ್ರೋತ್ಸಾಹ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಅತಿಕ್ರಮಣ ಜಾಗದಲ್ಲಿ ಮನೆ ಕಟ್ಟಲು ಅವಕಾಶ
ಇನ್ನು ತಲಗೇರಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಟಾ ಕ್ಷೇತ್ರದಲ್ಲಿ ಜನತೆ ಅಭೂತಪೂರ್ವವಾವಿ ಸ್ಪಂದನೆ ನೀಡಿದ್ದಾರೆ. ಜನತೆಗೆ ಜನತಾದಳ ಬೆಂಬಲಿಸಲು ಮನಸ್ಸಿನಲ್ಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಎಂ ಆದಾಗ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಜಿಲ್ಲೆಯ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಅರಣ್ಯ ಅತಿಕ್ರಮಣ ಜಾಗದಲ್ಲಿ ಆಶ್ರಯ ಮನೆ ಕಟ್ಟಲು ಆಗುತ್ತಿಲ್ಲ. ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ತಯಾರಾಯ್ತು ಬಿಸಿ.. ಬಿಸಿ ಮುದ್ದೆ ಊಟ
ಕುಮಾರಸ್ವಾಮಿ ಹಾಗೂ ಯಾತ್ರೆ ತಂಡದವರಿಗೆ ಊಟಕ್ಕಾಗಿ ತಲಗೇರಿ ಗ್ರಾಮದಲ್ಲಿ ಬಾಣಸಿಗರಿಂದ ಮುದ್ದೆ ತಯಾರಿ ಮಾಡಲಾಗುತ್ತಿದೆ. ಪ್ರತಿನಿತ್ಯ ಕುಮಾರಸ್ವಾಮಿ ಮುದ್ದೆ ಊಟ ಮಾಡುವ ಕಾರಣ ಮುದ್ದೆ ತಯಾರಿಸಿದ್ದು, ಕುಮಟಾ ಹಾಗೂ ಭಟ್ಕಳ ಕ್ಷೇತ್ರದಲ್ಲಿ ಸಂಚರಿಸುವಾಗ ಊಟಕ್ಕೆ ಮುದ್ದೆ ತಯಾರಿ ಮಾಡಲಾಗಿದೆ.












Click it and Unblock the Notifications