ರಾಜ್ಯಪಾಲರ ಉತ್ತರ ಕನ್ನಡ ಪ್ರವಾಸ: ಗೋಕರ್ಣ, ಮುರುಡೇಶ್ವರದಲ್ಲಿ ವಿಶೇಷ ಪೂಜೆ
ಕಾರವಾರ ಡಿಸೆಂಬರ್ 15: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ಪ್ರವಾಸ ಕೈಗೊಂಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಹಾಗೂ ಮುರುಡೇಶ್ವರಕ್ಕೆ ತೆರಳಿ ದೇವರ ದರ್ಶನ ಪಡೆದರು. ನೌಕಾ ದಿನಾಚರಣೆ ಅಂಗವಾಗಿ ನೌಕಾನೆಲೆಗೆ ಆಗಮಿಸಿದ್ದ ಅವರು ಗುರುವಾರ ಮೊದಲು ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ತೆರಳಿ ಆತ್ಮಲಿಂಗದ ದರ್ಶನ ಪಡೆದರು.
ಇನ್ನು ಗೋಕರ್ಣಕ್ಕೆ ರಾಜ್ಯಪಾಲರು ಆಗಮಿಸುತ್ತಿದ್ದಂತೆ ದೇವಸ್ಥಾನದ ಆಡಳಿತ ಸಮಿತಿಯಿಂದ ಪಂಚವಾದ್ಯಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಇದೇ ವೇಳೆ ನವಧಾನ್ಯಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ ನೆರವೇರಿಸಿದ ರಾಜ್ಯಪಾಲರು ಆತ್ಮಲಿಂಗ ಸ್ಪರ್ಶಿಸಿ, ಪೂಜೆ ಸಲ್ಲಿಸಿದರು.

ಇನ್ನು ಎರಡನೇಯ ಬಾರಿಗೆ ಮಹಾಬಲೇಶ್ವರನ ದರ್ಶನ ಪಡೆದ ರಾಜ್ಯಪಾಲರ ಜೊತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕೂಡ ಉಪಸ್ಥಿತರಿದ್ದರು. ಇನ್ನು ರಾಜ್ಯಪಾಲರ ಆಗಮನದ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಅಲ್ಲದೆ ರಾಜ್ಯಪಾಲರ ನಿರ್ಗಮನದವರೆಗೂ ದೇವಸ್ಥಾನಕ್ಕೆ ಸಾರ್ವಜನಿಕರ ದರ್ಶನ ಸ್ಥಗಿತಗೊಳಿಸಲಾಗಿತ್ತು.
ಇನ್ನು ಗೋಕರ್ಣದಲ್ಲಿ ಮಹಾಬಲೇಶ್ವರ ದೇವರ ದರ್ಶನದ ಬಳಿಕ ರಸ್ತೆ ಮಾರ್ಗದ ಮೂಲಕ ಭಟ್ಕಳ ತಾಲ್ಲೂಕಿನ ಮುರುಡೇಶ್ವರಕ್ಕೆ ತೆರಳಿ ದೇವರ ದರ್ಶನ ಪಡೆದರು. ಮುರುಡೇಶ್ವರದಲ್ಲಿಯೂ ರಾಜ್ಯಪಾಲರು ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನದ ಊಟದ ಬಳಿಕ ಮಂಗಳೂರಿಗೆ ರಾಜ್ಯಪಾಲರು ತೆರಳಿದ್ದಾರೆ.

ಶಿರಸಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ದುರಂತ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಳಗಿಬೀಸ್ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಮಾನ್ಯ ಪಾಲಿಟೆಕ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಮಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಅಂದಾಜಿಸಲಾಗಿದ್ದು, ಅದೃಷ್ಟವಶಾತ್ ಕಾರ್ಖಾನೆಯೊಳಗಿದ್ದ 22 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೋಡ ನೋಡುತ್ತಿದ್ದಂತೆ ಸಂಪೂರ್ಣ ಕಾರ್ಖಾನೆ ಹೊತ್ತಿ ಉರಿದಿದ್ದು, ಕಾರ್ಖಾನೆಯೊಳಗಿದ್ದ ಸಂಪೂರ್ಣ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ರಾಘವ ವಿಶ್ವೇಶ್ವರ ಹೆಗಡೆ ಮಶೀಗದ್ದೆ ಅವರಿಗೆ ಸೇರಿದ ಫ್ಯಾಕ್ಟರಿ ಇದಾಗಿದೆ. ಫೈಬರ್ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ಆರಿಸಿದ್ದಾರೆ.











Click it and Unblock the Notifications