ಸಾಮಾನ್ಯನಂತೆ ಕುಮಟಾಕ್ಕೆ ಬಂದು ಹೋದ ಗೋವಾ ಸಿಎಂ ಪರಿಕ್ಕರ್
ಕಾರವಾರ, ಡಿಸೆಂಬರ್ 25: ಮಹಾದಾಯಿ ವಿವಾದ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದರ ನಡುವೆಯೇ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭಾನುವಾರ ಕುಮಟಾಕ್ಕೆ ಬಂದಿದ್ದರು.
ಸಾಮಾನ್ಯರಂತೆ ರೈಲಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಪರಿಕ್ಕರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುವ ಮೂಲಕ ಸುದ್ದಿಯಾಗಿದ್ದಾರೆ.
ಮಡಗಾಂವ್ ನಿಂದ ಲೋಕಲ್ ರೈಲಿನಲ್ಲಿ ಸುಮಾರು 3:05ಕ್ಕೆ ಕುಮಟಾಕ್ಕೆ ಬಂದಿಳಿದ ಅವರು, ಜಿಎಸ್'ಬಿ ಯುವ ವಾಹಿನಿ ಸಮಾವೇಶದಲ್ಲಿ ಪಾಲ್ಗೊಂಡರು. ಬಳಿಕ ವೆಂಕಟರಮಣ ದೇವಸ್ಥಾನಕ್ಕೆ ಹಾಗೂ ಬಿಜೆಪಿ ಕಾರ್ಯಾಲಯಕ್ಕೂ ಭೇಟಿ ನೀಡಿದರು.

ಕೌಂಟರಿನಲ್ಲಿ ಟಿಕೆಟ್ ಪಡೆದ ಸಿಎಂ
ನಂತರ ಕುಮಟಾ ರೈಲ್ವೆ ನಿಲ್ದಾಣಕ್ಕೆ ಮರಳಿದ ಅವರು, ಸ್ವತಃ ತಾವೇ ಟಿಕೆಟ್ ಕೌಂಟರಿಗೆ ತೆರಳಿ ಮಡಗಾಂವ್ ಗೆ ಹೋಗುವ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಟಿಕೆಟ್ ಪಡೆದರು.

ಸಾಮಾನ್ಯರಲ್ಲಿ ಅಸಮಾನ್ಯ
ಬಳಿಕ ಹತ್ತರಿಂದ ಹದಿನೈದು ನಿಮಿಷಗಳವರೆಗೆ ನಿಲ್ದಾಣದಲ್ಲಿ ಸಾಮಾನ್ಯರಂತೆ ರೈಲಿಗಾಗಿ ಕಾದು, 6.20ಕ್ಕೆ ಮತ್ಸ್ಯಗಂಧ ರೈಲಿನಲ್ಲಿ ಗೋವಾಕ್ಕೆ ಮರಳಿದರು.

ಭಾರೀ ಪೊಲೀಸ್ ಬಂದೋಬಸ್ತ್
ಮಹಾದಾಯಿ ವಿವಾದ ರಾಜ್ಯದಲ್ಲಿ ಇತ್ತೀಚೆಗೆ ಮತ್ತೆ ಚರ್ಚೆಯಾಗುತ್ತಿರುವುದರಿಂದ ರಾಜ್ಯ ಸರ್ಕಾರ ಗೋವಾ ಸಿಎಂ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಅಧಿಕ ಪೊಲೀಸರೇ ತುಂಬಿದ್ದರು. ಅದನ್ನು ಕಂಡ ಪರಿಕ್ಕರ್, "ಯಾಕೆ ಇಷ್ಟೆಲ್ಲ ಪೊಲೀಸ್ ಬಂದೋಬಸ್ತ್ ಬೇಕಿತ್ತು?" ಎಂದು ಪ್ರಶ್ನಿಸಿದರು.

ಮಹಾದಾಯಿ ಪ್ರತಿಕ್ರಿಯೆಗೆ ನಕಾರ
ಬಳಿಕ ಕುಮಟಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಿಎಸ್ ಟಿಯಿಂದ ಜನರಿಗೆ ಆರಂಭದಲ್ಲಿ ತೊಂದರೆ ಉಂಟಾಗಿದೆ ನಿಜ. ಆದರೆ ಅದು ಭವಿಷ್ಯದಲ್ಲಿ ಆರ್ಥಿಕತೆಯಲ್ಲಿ ಶಿಸ್ತು ಮೂಡಿಸಲಿದೆ," ಎಂದ ಅವರು, ಮಹಾದಾಯಿ ವಿಚಾರವಾಗಿ ಮಾತನಾಡಲು ನಿರಾಕರಿಸಿದರು.












Click it and Unblock the Notifications