ಉತ್ತರ ಕನ್ನಡ ಜಿ.ಪಂ ನೂತನ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಯುವತಿ!
ಕಾರವಾರ, ಜನವರಿ 29: ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಜಿಲ್ಲೆಯ ಹಳಿಯಾಳ ಮೂಲದ ಶಾಲಿನಿ ಸಿದ್ದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಎಂ.ಪ್ರಿಯಾಂಗಾ ಅವರು ಶಾಲಿನಿ ಸಿದ್ದಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ಅರೆ, ಇತ್ತೀಚೆಗಷ್ಟೆ ಎಂ.ಪ್ರಿಯಾಂಗಾ ಅವರು ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕವಾಗಿದ್ದಾರೆ ಅಲ್ವಾ? ನಿಕಟಪೂರ್ವ ಸಿಇಒ ಮೊಹಮ್ಮದ್ ರೋಶನ್ ಅವರು ಪ್ರಿಯಾಂಗಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು ಅಲ್ವಾ?
ಎರಡು ತಿಂಗಳಲ್ಲೇ ಎಂ.ಪ್ರಿಯಾಂಗಾ ಅವರನ್ನು ವರ್ಗಾವಣೆ ಮಾಡಿದ್ದಾರೆಯೇ ಎಂದು ನಿಮಗೆ ಅನಿಸುತ್ತಿರಬಹುದು. ಆದರೆ ನಿಮ್ಮ ಯೋಚನೆ ತಪ್ಪಾಗಿದೆ. ಯಾಕೆಂದರೆ, ಇಲ್ಲಿ ಸಿಇಒ ಪ್ರಿಯಾಂಗಾ ಅವರು ವರ್ಗಾವಣೆಗೊಂಡಿಲ್ಲ.

ಬದಲಿಗೆ, ಜಿಲ್ಲಾ ಪಂಚಾಯತಿಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೇರೇಪಿಸುವ ಮತ್ತು ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪ್ರಿಯಾಂಗ ಅವರು, ವಿದ್ಯಾರ್ಥಿನಿ ಶಾಲಿನಿ ಸಿದ್ದಿ ಅವರಿಗೆ ಒಂದು ದಿನದ ಮಟ್ಟಿಗೆ ಅಧಿಕಾರ ಹಸ್ತಾಂತರಿಸಿದ್ದರು. ಅಲ್ಲದೆ, ನೂತನ ಸಿಇಒ ಅವರನ್ನು ತಮ್ಮ ಖುರ್ಚಿಯ ಮೇಲೆ ಕೂರಿಸಿ ಸತ್ಕರಿಸಿದರು.
ಯಾರೀಕೆ ಶಾಲಿನಿ?
ಹಳಿಯಾಳ ಮೂಲದ ಶಾಲಿನಿ, ಕುಸ್ತಿಪಟುವಾಗಿದ್ದು, ಕಾರವಾರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ನೈತಿಕ ಸ್ಥೈರ್ಯ ತುಂಬಲು ಸರಕಾರ ಮುಂದಾಗಿದ್ದು, ಇದರ ಅಂಗವಾಗಿ ಓರ್ವ ಹೆಣ್ಣು ಮಕ್ಕಳನ್ನು ಸಿಇಒ ಆಗಿ ನೇಮಿಸಿ ಅಧಿಕಾರದ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಧಿಕಾರ ಸ್ವೀಕರಿಸಿದ ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿನಿಗೆ ಶುಭಕೊರಿದರು. ಅಲ್ಲದೆ ಸಿಇಒ ಪ್ರಿಯಾಂಗ.ಎಂ ಅವರು ಪಂಚಾಯಿತಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಬಗ್ಗೆ ಎಂ.ಪ್ರಿಯಾಂಗ ಕಿವಿಮಾತು ಹೇಳಿದರು. ಇದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ ಉಪಸ್ಥಿತರಿದ್ದರು.












Click it and Unblock the Notifications