ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದಾರುಣ ಸಾವು
ಕಾರವಾರ, ಡಿಸೆಂಬರ್ 18: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೊಮ್ನಳ್ಳಿ ಗ್ರಾಮ ವ್ಯಾಪ್ತಿಯ ಕಾಳಿನದಿಯಲ್ಲಿ ನಡೆದಿದೆ.
ಗ್ರಾಮದ ದೂಳು ದುಂಡು ಗಾವಡೆ (42), ಗಾಯತ್ರಿ ದೂಳು ಗಾವಡೆ (9), ಕೃಷ್ಣಾ ದೂಳು ಗಾವಡೆ (6) ಮತ್ತು ಅವರ ಕುಟುಂಬದ ಸತೀಶ ಬೀರು ಗಾವಡೆ (7) ಮೃತರು.
ಚಾಮರಾಜನಗರದಲ್ಲಿ ಆಡಳಿತ ಮಂಡಳಿ ಕಿತ್ತಾಟಕ್ಕೆ ಬಲಿಯಾಯಿತಾ 7 ಜೀವ?
ದೂಳು ದುಂಡು ಗಾವಡೆ ಅವರ ಪತ್ನಿ ರಾಮಿಬಾಯಿ ಸೋಮವಾರ ಸಂಜೆ (ಡಿಸೆಂಬರ್ 17) ಕಾಳಿ ನದಿಯ ದಂಡೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದರು. ಅವರ ಜತೆಗೆ ಬಂದಿದ್ದ ಮೂವರು ಮಕ್ಕಳು ಆಟವಾಡುತ್ತ ಕಾಲುಜಾರಿ ನದಿಗೆ ಬಿದ್ದಾಗ ಅವರನ್ನು ರಕ್ಷಿಸಲು ರಾಮಿಬಾಯಿ ನೀರಿಗೆ ಹಾರಿದರು.
ಸಮೀಪದಲ್ಲಿದ್ದ ದೂಳು ದುಂಡು ಗಾವಡೆ ಕೂಡ ನೀರಿನಲ್ಲಿ ಮುಳುಗುತ್ತಿದ್ದವರನ್ನು ಮೇಲೆತ್ತಲು ನದಿಗೆ ಹಾರಿದರು. ರಾಮಿಬಾಯಿಯನ್ನು ರಕ್ಷಿಸಿದ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ರಾಮಿಬಾಯಿಯನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಲಾಗಿದೆ. ನದಿಯಲ್ಲಿ ಮುಳುಗಿದ್ದ ನಾಲ್ಕೂ ಶವವನ್ನ ಹೊರತೆಗೆಯಲಾಗಿದೆ.
ಕಿಚ್ಚುಗತ್ತಿ ಮಾರಮ್ಮನ 'ಅನ್ನ ಪ್ರಸಾದ' ತಿಂದ ಭಕ್ತರು ದುರ್ಮರಣ
ಆರ್.ವಿ.ಡಿ ಭೇಟಿ ಮೃತರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಅವರು, ಮಂಗಳವಾರ ಹಳಿಯಾಳಕ್ಕೆ ಬಂದು ಕುಟುಂಬಸ್ಥರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.