ಕಾರವಾರ: ಪ್ಲಾಸ್ಟಿಕ್ ಬಾಟಲಿಯ ನೀರನ್ನು ತಿರಸ್ಕರಿಸಿದ ಜಿಲ್ಲಾಧಿಕಾರಿ ನಕುಲ್
ಕಾರವಾರ, ಜುಲೈ.19: ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿದ ನೀರು ಬೇಡವೆಂದು, ಗಾಜಿನ ಲೋಟದಲ್ಲಿ ನೀರು ತರಿಸಿಕೊಂಡು ಕುಡಿದಿದ್ದಾರೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ .
ಹೌದು, ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತಿತ್ತು. ಈ ವೇಳೆ ಎಲ್ಲರಿಗೂ ನೀರು ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ಇಡಲಾಗುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ನಕುಲ್, ನನಗೆ ಬಾಟಲ್ ನೀರು ಬೇಡ. ಲೋಟದಲ್ಲಿ ನೀರು ಕೊಡಿ ಎಂದು ಹೇಳಿ ಪ್ಲಾಸ್ಟಿಕ್ ಬಾಟಲಿಯ ನೀರನ್ನು ತಿರಸ್ಕರಿಸಿದರು.
ಹಾಸನದ ಸರ್ಕಾರಿ ಶಿಕ್ಷಕರಿಗೆ ಪರೀಕ್ಷೆ ಹಮ್ಮಿಕೊಂಡ ರೋಹಿಣಿ ಸಿಂಧೂರಿ
ಬಳಿಕ ಮಾತನಾಡಿದ ಅವರು, ಪ್ಲಾಸ್ಟಿಕ್ ಬಾಟಲಿ ಬಳಸಬೇಡಿ ಎಂದು ನಾವೇ ಎಲ್ಲೆಡೆ ಭಾಷಣ ಬಿಗಿಯುತ್ತೇವೆ. ಜತೆಗೆ, ಆರೋಗ್ಯ ಇಲಾಖೆಯ ಸಭೆಗೇ ಪ್ಲಾಸ್ಟಿಕ್ ಬಾಟಲಿ ತಂದಿದ್ದೀರಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳತ್ತ ನಗುತ್ತ ಹೇಳಿದರು.
ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕುಮಾರ್, ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಪ್ಲಾಸ್ಟಿಕ್ ಬಾಟಲಿಯ ನೀರು ತರುವುದಿಲ್ಲ ಎಂದು ಸಮಜಾಯಿಷಿ ಹೇಳಿದರು.
ಈ ಬಗ್ಗೆ 'ಒನ್ ಇಂಡಿಯಾ ಕನ್ನಡ'ದ ಜತೆ ಮಾತನಾಡಿರುವ ನಕುಲ್, ಸದ್ಯ ಜಿಲ್ಲಾಡಳಿತ ನಡೆಸುವ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸುತ್ತೇವೆ. ಪರ್ಯಾಯವಾಗಿ ನೀರಿನ ಜಗ್ ಹಾಗೂ ಗಾಜಿನ ಲೋಟಗಳನ್ನು ತರಿಸುತ್ತೇವೆ. ಬಳಿಕ ಎಲ್ಲ ಇಲಾಖೆಗಳಿಗೂ ಒಂದನ್ನು ಕ್ರಮೇಣ ವಿಸ್ತರಿಸಲಾಗುವುದು ಎಂದಿದ್ದಾರೆ.