ಕಾರವಾರದಲ್ಲಿ ನಿರ್ಮಾಣವಾಗಲಿದೆಯಾ ಅಂತರಾಷ್ಟ್ರೀಯ ಕ್ರೀಡಾಂಗಣ?
ಕಾರವಾರ, ಮಾರ್ಚ್ 04: ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಜಿಲ್ಲಾ ಕ್ರೀಡಾಂಗಣವೊಂದನ್ನು ನಿರ್ಮಿಸಬೇಕು ಎನ್ನುವುದು ಬಹು ಬೇಡಿಕೆಯ ಹಾಗೂ ಕಾರವಾರಿಗರ ಹಲವು ದಿನದ ಕನಸಾಗಿತ್ತು. ಇದೀಗ ಆ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ತಾಲ್ಲೂಕಿನ ಶಿರವಾಡದ 10 ಎಕರೆ ಜಾಗದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣವಿದ್ದು, ಕಾರವಾರದಲ್ಲಿ ಮಾತ್ರ ಜಾಗದ ಸಮಸ್ಯೆಯಿಂದ ಈವರೆಗೂ ಕ್ರೀಡಾಂಗಣ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ.
ನಗರದ ಮಧ್ಯಭಾಗದಲ್ಲಿರುವ ಮಾಲಾದೇವಿ ಮೈದಾನವನ್ನೇ ಜಿಲ್ಲಾ ಕ್ರೀಡಾಂಗಣದ ರೀತಿಯಲ್ಲಿ ಇಲ್ಲಿಯವರೆಗೂ ಬಳಕೆ ಮಾಡಿಕೊಳ್ಳಲಾಗುತ್ತಿತ್ತು.

ಇಲ್ಲಿಯವರೆಗೂ ದೊಡ್ಡ ಕ್ರೀಡಾಕೂಟ ನಡೆದಿಲ್ಲ
ಮಾಲಾದೇವಿ ಮೈದಾನ ಸಹ ಸಣ್ಣದಾಗಿರುವುದರಿಂದ, ಜೊತೆಗೆ ರಸ್ತೆ ಪಕ್ಕದಲ್ಲಿಯೇ ಕ್ರೀಡಾಂಗಣ ಇದ್ದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಈ ಹಿಂದೆ ರಾಜ್ಯ ಕ್ರೀಡಾ ಪ್ರಾಧಿಕಾರ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಐದು ಕೋಟಿ ರೂ, ಹಣ ಮಂಜೂರು ಮಾಡಿತ್ತು.
ಆದರೆ, ಕಾರವಾರದಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಈವರೆಗೂ ಕ್ರೀಡಾಂಗಣ ನಿರ್ಮಿಸುವ ಕಾರ್ಯಕ್ಕೆ ಮಾತ್ರ ಮುಂದಾಗಿರಲಿಲ್ಲ. ಗಡಿ ಹಾಗೂ ಕರಾವಳಿ ಜಿಲ್ಲೆಯಾದ ಕಾರವಾರದಲ್ಲಿ ಜಿಲ್ಲಾ ಕ್ರೀಡಾಂಗಣವೇ ಇಲ್ಲದಿದ್ದರಿಂದ ದೊಡ್ಡ ದೊಡ್ಡ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತಿರಲಿಲ್ಲ. ಹಲವು ಸಂಘಟನೆಯವರು, ಕ್ರೀಡಾಪಟುಗಳು ಸರ್ಕಾರಕ್ಕೆ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಮನವಿ ನೀಡಿದ್ದರು.

ಭೂಮಿ ನೀಡಲು ಅರಣ್ಯ ಇಲಾಖೆಗೆ ಮನವಿ
ಆದರೆ ಯಾರೂ ಈ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಸದ್ಯ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲಾ ಕ್ರೀಡಾಂಗಣವೊಂದನ್ನು ನಿರ್ಮಾಣ ಮಾಡುವ ಚಿಂತನೆಗೆ ಮುಂದಾಗಿದ್ದಾರೆ.
ಈಗಾಗಲೇ ಶಿರವಾಡ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಹತ್ತು ಎಕರೆ ಅರಣ್ಯ ಭೂಮಿಯನ್ನು ಕ್ರೀಡಾಂಗಣ ನಿರ್ಮಿಸಲು ಕ್ರೀಡಾ ಇಲಾಖೆಗೆ ಕೊಡುವಂತೆ ಅರಣ್ಯ ಇಲಾಖೆಗೆ ಜಿಲ್ಲಾಡಳಿತದ ವತಿಯಿಂದ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಅರಣ್ಯ ಇಲಾಖೆ ಭೂಮಿ ನೀಡಿದ ನಂತರ ಜಿಲ್ಲಾ ಕ್ರೀಡಾಂಗಣ ನಿರ್ಮಿಸುವ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಕಾಳಿ ಸಂಗಮದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಈ ಬಗ್ಗೆ ಮಾತನಾಡಿರುವ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ, ""ಜಿಲ್ಲಾಡಳಿತ ಅರಣ್ಯ ಭೂಮಿಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಪರ್ಯಾಯವಾಗಿ ತಾಲೂಕಿನ ದೇವಕಾರ್ ಬಳಿ ಕಂದಾಯ ಭೂಮಿಯನ್ನೂ ಅರಣ್ಯ ಇಲಾಖೆಗೆ ಕೊಡಲು ಜಿಲ್ಲಾಡಳಿತ ಮುಂದಾಗಿದೆ. ಶೀಘ್ರದಲ್ಲಿ ಭೂಮಿ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು'' ಎಂದಿದ್ದಾರೆ.
ಕಾರವಾರ ತಾಲೂಕಿನ ಸದಾಶಿವಗಡದಲ್ಲಿ ಕಾಳಿ ನದಿ ಹಾಗೂ ಅರಬ್ಬೀ ಸಮುದ್ರ ಸಂಗಮ ಆಗುವ ಪ್ರದೇಶದ ಬಳಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಕುರಿತು ಈಗಾಗಲೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಜೊತೆ ಮಾತುಕತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಭೂಮಿ ಲೀಸ್ ಪಡೆಯಲು ರೋಜರ್ ಬಿನ್ನಿಗೆ ಮನವಿ
ನದಿ ಮತ್ತು ಸಮುದ್ರ ಸಂಗಮ ಆಗುವ ಸ್ಥಳದಲ್ಲಿ ಕ್ರಿಕೆಟ್ ಕ್ರೀಡಾಂಗಣ ಇರುವುದು ಜಗತ್ತಿನಲ್ಲಿ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಕಾರವಾರದ ಸದಾಶಿವಗಡ ಇದಕ್ಕೆ ಸೂಕ್ತ ಪ್ರದೇಶವಾಗಿರುವುದರಿಂದ ಬಿಸಿಸಿಐ ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಆಸಕ್ತಿ ವಹಿಸಿದೆ.
ನಾವು ಕ್ರೀಡಾಂಗಣ ನಿರ್ಮಾಣ ಮಾಡಲು ಜಾಗವನ್ನು ಲೀಸ್ ಗೆ ಕೊಡಲು ಸಿದ್ದರಿದ್ದೇವೆ. ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಜರ್ ಬಿನ್ನಿಯವರಿಗೆ ಮನವಿ ಮಾಡಿದ್ದು, ಕಾರವಾರಕ್ಕೆ ಬಂದು ಭೂಮಿಯನ್ನು ಲೀಸ್ ಗೆ ಪಡೆಯುವುದರ ಜೊತೆಗೆ, ಎಷ್ಟು ಸಮಯದಲ್ಲಿ ಕ್ರೀಡಾಂಗಣ ನಿರ್ಮಿಸುತ್ತೇವೆ ಎಂದು ತಿಳಿಸಿ ಹೋಗುವಂತೆ ಹೇಳಲಾಗಿದೆ. ಶೀಘ್ರದಲ್ಲಿಯೇ ಈ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.












Click it and Unblock the Notifications