ಧಾರವಾಡ-ದಾಂಡೇಲಿ ನಡುವೆ ಮತ್ತೆ ರೈಲು ಸಂಚಾರ
ಕಾರವಾರ, ಸೆಪ್ಟೆಂಬರ್ 28: ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ವಿವಿಧ ರೈಲು ಯೋಜನೆಗಳ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಂಸದರು ಧಾರವಾಡ-ದಾಂಡೇಲಿ ನಡುವೆ ಮತ್ತೆ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. 'ಅಂಬೇವಾಡಿ' ರೈಲು ನಿಲ್ದಾಣವನ್ನು ಈಗಾಗಲೇ 'ದಾಂಡೇಲಿ' ಎಂದು ಬದಲಾವಣೆ ಮಾಡಿ ರೈಲ್ವೆ ಇಲಾಖೆ ಆದೇಶವನ್ನು ಹೊಡಿಸಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ರೈಲುಸೌಧದಲ್ಲಿ ನೈಋತ್ಯ ರೈಲ್ವೆ ಪ್ರದಾನ ವ್ಯವಸ್ಥಪಕ ಅರವಿಂದ ಶ್ರೀವಾಸ್ತವ್ ಹಾಗೂ ಇತರೆ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಕ್ಷೇತ್ರದ ಪ್ರಮುಖ ರೈಲ್ವೆ ಯೋಜನೆಗಳಿಗೆ ಮಾತುಕತೆಯನ್ನು ನಡೆಸಿದರು.

ಈ ಸಭೆಯಲ್ಲಿಯೇ ಧಾರವಾಡ-ದಾಂಡೇಲಿ ನಡುವೆ ರೈಲು ಸೇವೆ ಪುನರಾರಂಭಿಸುವುದರ ಕುರಿತು ಚರ್ಚಿಸಲಾಯಿತು. 2019ರಲ್ಲಿ ಅಳ್ನಾವರ-ಅಂಬೇವಾಡಿ (ದಾಂಡೇಲಿ) ರೈಲು ಸಂಚಾರ ಆರಂಭಗೊಂಡಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತು. ಬಳಿಕ ರೈಲುಗಳು ಸಂಚಾರ ನಡೆಸುತ್ತಿಲ್ಲ. ಆದ್ದರಿಂದ ಪುನಃ ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಕರ್ನಾಟಕದಲ್ಲಿ ಬ್ರಿಟಿಷರು ಸ್ಥಾಪನೆ ಮಾಡಿದ ರೈಲು ಮಾರ್ಗದಲ್ಲಿ ಅಂಬೇವಾಡಿ ರೈಲು ನಿಲ್ದಾಣವೂ ಒಂದು. ಕೆಲವು ದಿನಗಳ ಹಿಂದೆ ಈ ನಿಲ್ದಾಣದ ಹೆಸರನ್ನು 'ದಾಂಡೇಲಿ' ಎಂದು ಬದಲಾವಣೆ ಮಾಡಲಾಗಿದೆ. ಇಲ್ಲಿಗೆ ಪ್ರಯಾಣಿಕರ ರೈಲು ಬರುವುದಿಲ್ಲ. ಆದ್ದರಿಂದ ರೈಲು ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗುತ್ತಿದೆ.
ದಾಂಡೇಲಿ ದಟ್ಟ ಕಾಡನ್ನು ಹೊಂದಿರುವ ಪ್ರದೇಶ, ಕಾಳಿ ನದಿಯೂ ಇಲ್ಲಿ ಹರಿಯುತ್ತದೆ. ನೂರಾರು ಪ್ರವಾಸಿಗರು ದಾಂಡೇಲಿಗೆ ಆಗಮಿಸುತ್ತಾರೆ. ಬ್ರಿಟಿಷರು ದಾಂಡೇಲಿಯಿಂದ ಮರದ ದಿಮ್ಮಿಗಳನ್ನು ಸಾಗಣೆ ಮಾಡಲು ರೈಲು ಮಾರ್ಗವನ್ನು ನಿರ್ಮಾಣ ಮಾಡಿದ್ದರು. ಈ ಮಾರ್ಗ ಗೋವಾ ರಾಜ್ಯದಲ್ಲಿರುವ ವಾಸ್ಕೋ ಬಂದರಿಗೆ ಸಹ ಸಂಪರ್ಕ ಕಲ್ಪಿಸುತ್ತದೆ.
ಕೆಲವು ದಿನಗಳ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಧಾರವಾಡ-ದಾಂಡೇಲಿ ನಡುವೆ ರೈಲು ಸಂಪರ್ಕ ಆರಂಭಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣಗೆ ಮನವಿ ಸಲ್ಲಿಸಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಪ್ರಯತ್ನದಿಂದ ಧಾರವಾಡ-ದಾಂಡೇಲಿ ರೈಲು ಸೇವೆ ಆರಂಭವಾಗಿತ್ತು. ಆದರೆ ಕೋವಿಡ್ ಪರಿಸ್ಥಿತಿ ಬಳಿಕ ರೈಲು ಸೇವೆಯನ್ನು ನಿಲ್ಲಿಸಲಾಗಿದೆ ಎಂದು ಪತ್ರದಲ್ಲಿ ಸಂಸದರು ವಿವರಿಸಿದ್ದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚಿಸಿದ ರೈಲಯ ಯೋಜನೆಗಳು
* ಹುಬ್ಬಳ್ಳಿ-ತಾಳಗುಪ್ಪ ರೈಲ್ವೆ ಹಳಿಯ ಅಂತಿಮ ಸ್ಥಳ ಸಮೀಕ್ಷೆ
* ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ಅನ್ನು ಕಾರವಾರದವರೆಗೆ ವಿಸ್ತರಣೆ ಕುರಿತು
* ಬೆಳಗಾವಿಯ ಖಾನಾಪುರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಕುರಿತು
* ಬೆಳಗಾವಿ-ಬೆಂಗಳೂರು ಎಕ್ಸ್ಪ್ರೆಸ್ಗೆ ಬೆಳಗಾವಿಯ ಖಾನಾಪುರದಲ್ಲಿ ನಿಲುಗಡೆ ಕುರಿತು
* ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲ್ವೆ ಪ್ರಗತಿಯ ಕುರಿತು
* ಲೋಂಡಾ ಹಾಗೂ ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣಗಳ ಕಾಮಗಾರಿ ಪೂರ್ಣಗೊಳಿಸುವ ಕುರಿತು
* ಬೆಳಗಾವಿ-ಖಾನಾಪುರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕುರಿತು
* ತಾಳಗುಪ್ಪ-ಹೊನ್ನಾವರ ನಡುವಿನ ರೈಲ್ವೆ ಯೋಜನೆ ಕುರಿತು
* ಧಾರವಾಡ -ಕಿತ್ತೂರು-ಬೆಳಗಾವಿ ನಡುವೆ ಹೊಸ ರೈಲ್ವೆ ಯೋಜನೆ ಕುರಿತು












Click it and Unblock the Notifications