ಸಿದ್ದರಾಮಯ್ಯ ಕಾನೂನು ಓದಿದ್ದೂ ನಾಲಾಯಕ್; ಸಿ.ಟಿ. ರವಿ ಮತ್ತೆ ತಿರುಗೇಟು
ಕಾರವಾರ, ಅಕ್ಟೋಬರ್ 19: ವೀರ ಸಾವರ್ಕರ್ ಗೆ ಭಾರತ ರತ್ನ ನೀಡುವುದರ ಕುರಿತು ಸಿದ್ದರಾಮಯ್ಯ ಹಾಗೂ ಸಿ.ಟಿ.ರವಿ ನಡುವೆ ಏರ್ಪಟ್ಟಿರುವ ಟ್ವೀಟ್ ವಾದ ಮುಂದುವರೆಯುತ್ತಲೇ ಇದೆ. "ಸಿದ್ದರಾಮಯ್ಯ ಮನಸ್ಥಿತಿ ಇಷ್ಟು ಕೆಳಗೆ ಹೋಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಕುಡಿದು ಯಾರು ತೂರಾಡುತ್ತಾರೆ ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ' ಎಂದು ಸಚಿವ ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೆ ಟೀಕಿಸಿದ್ದಾರೆ.
ಸಿದ್ದರಾಮಯ್ಯಗೆ ಇತಿಹಾಸ ಓದಲು ಹೇಳಿದ ಕೇಂದ್ರ ಸಚಿವ
ಸಿದ್ದರಾಮಯ್ಯ ಅವರ ಟ್ವೀಟ್ ಗೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, 'ನನಗೆ ಕುಡಿಯುವ ಅಭ್ಯಾಸವೇ ಇಲ್ಲ. ನಾನು ಡ್ರೈವಿಂಗ್ ಮಾಡುವುದಿಲ್ಲ. ನನ್ನ ಕಾರು ಅಪಘಾತವಾದ ವೇಳೆ ಡ್ರೈವರ್ ಬೇರೆಯವರು ಇದ್ದರು. ಈ ಬಗ್ಗೆ ಟೋಲ್ ನಲ್ಲಿ ನನ್ನ ಕಾರು ಸಾಗಿದಾಗ ಡ್ರೈವರ್ ಬೇರೆಯವರು ಇದ್ದ ಫೋಟೋ ದಾಖಲೆ ಇದೆ. ಡ್ರೈವರ್ ಮಾಡಿದ ಅಪಘಾತಕ್ಕೆ ಪ್ಯಾಸೆಂಜರ್ ಹೊಣೆ ಎಂದು ಯಾವ ಕಾನೂನು ಹೇಳಿಲ್ಲ. ಅದು ಅಪಘಾತ ಮಾತ್ರ; ಕೊಲೆಯಲ್ಲ. ಇದು ತಿಳಿಯದವರು ಇಂತಹ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ' ಎಂದರು.
ಅಮಾಯಕರನ್ನು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿಯಾದರೂ ಕೊಡಿ: ಸಿದ್ದರಾಮಯ್ಯ Vs ಸಿಟಿ ರವಿ
'ಹಾಗೇ ಹೇಳುವುದಾದರೆ ಸಿದ್ದರಾಮಯ್ಯ ಕಾನೂನು ಓದಿದ್ದೂ ನಾಲಾಯಕ್. ಸಿದ್ದರಾಮಯ್ಯನವರಿಗೆ ಯಾವ ಯಾವ ರೀತಿ ಚಟ ಇದೆ ಎಂದು ಅವರು ಮನನ ಮಾಡಿಕೊಳ್ಳಲಿ' ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪ! ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ' ಎಂದು ಟ್ವೀಟ್ ಮಾಡಿ ಸಿ.ಟಿ.ರವಿ ಅವರಿಗೆ ಟೀಕಿಸಿದ್ದರು.