ಕಾರವಾರ ಮೀನುಗಾರರಿಂದ ಸಂಸದ, ಶಾಸಕಿ ಫೋಟೋಗೆ ಚಪ್ಪಲಿ ಏಟು
ಕಾರವಾರ, ಜನವರಿ 14: ಸಾಗರಮಾಲ ಯೋಜನೆಯಡಿ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ವಿರೋಧಿ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಕಾರವಾರ ನಗರ ಹಾಗೂ ತಾಲ್ಲೂಕಿನ ವಿವಿದೆಡೆಯ ಮೀನು ಮಾರುಕಟ್ಟೆಗಳು ಬಂದ್ ಆಗಿದ್ದು, ನಗರ ಭಾಗದ ಮುಖ್ಯ ಮೀನು ಮಾರುಕಟ್ಟೆಯ ಬಳಿ ಜನ ಜಮಾವಣೆಗೊಂಡಿದ್ದಾರೆ.
ಮುಂದುವರಿದ ಮೀನುಗಾರರ ಪ್ರತಿಭಟನೆ: ಕಾರವಾರದಲ್ಲಿ ಅಘೋಷಿತ ಬಂದ್
ಮಾರುಕಟ್ಟೆಯ ಬಳಿ ಜಮಾವಣೆಗೊಂಡ ಮೀನುಗಾರರನ್ನೂ ಒಳಗೊಂಡ ಸ್ಥಳೀಯರು, ಪ್ರತಿಭಟನೆ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹಾಗೂ ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಹಾಕುತ್ತಿದ್ದಾರೆ. ಕಾಮಗಾರಿ ಸ್ಥಗಿತಗೊಳಿಸುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾರೆವು ಎಂದು ಹಠ ಹಿಡಿದ್ದಾರೆ.
ಪ್ರತಿಭಟನಕಾರರು ಶಾಸಕಿ ರೂಪಾಲಿ ನಾಯ್ಕ್ ಹಾಗೂ ಸಂಸದ ಅನಂತ ಕುಮಾರ್ ಹೆಗಡೆ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಚಪ್ಪಲಿ ಏಟು ನೀಡಿದ್ದಾರೆ. "ಸಂಸದ ಹೇಳಿದಂತೆ ಕುಣಿಯುವ ರೂಪಾಲಿ' ಎಂದು ಇಬ್ಬರ ವಿರುದ್ಧವೂ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಬ್ಯಾರಿಕೇಡ್ ಮುರಿದು ಕಾಮಗಾರಿಗೆ ತಡೆವೊಡ್ಡಲು ಯತ್ನ; ನೂರಾರು ಮೀನುಗಾರರು ಪೊಲೀಸರ ವಶಕ್ಕೆ
16 ಕ್ಕೆ ಬೃಹತ್ ಪ್ರತಿಭಟನೆ
ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆಯಿಂದ ಮೀನುಗಾರರು ಜನವರಿ 16 ರಂದು ಜಿಲ್ಲಾ ಕೇಂದ್ರ ಕಾರವಾರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಅಲ್ಲಿಯವರೆಗೂ ಮೀನು ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
ಯಾಕೆ ವಿರೋಧ?
ಸಾಗರಮಾಲ ಯೋಜನೆಯಡಿ ಬಂದರು ವಿಸ್ತರಣೆ ಕೈಗೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಟ್ಯಾಗೋರ್ ಕಡಲತೀರದಲ್ಲಿ ಈ ಕಾಮಗಾರಿ ನಡೆಯುವುದರಿಂದ ಮೀನುಗಾರಿಕೆಗೆ ತೊಂದರೆಯಾಗಲಿದೆ. ಜತೆಗೆ, ತೀರದ ಸೌಂದರ್ಯ ಹಾಳಾಗಲಿದೆ ಎಂದು ಹೇಳುತ್ತಾರೆ ಸ್ಥಳೀಯ ಮೀನುಗಾರರು.
ವಿವಿಧ ಯೋಜನೆಯ ಹೆಸರಿನಲ್ಲಿ ಈಗಾಗಲೇ ಕಾರವಾರದ 12 ತೀರಗಳನ್ನು ಕಳೆದುಕೊಳ್ಳಲಾಗಿದೆ. ಈಗಿರುವ ಏಕೈಕ ಟ್ಯಾಗೋರ್ ತೀರವನ್ನೂ ಈ ಬಂದರು ವಿಸ್ತರಣೆಯಿಂದ ಕಳೆದುಕೊಳ್ಳುವಂತಾಗಲಿದ್ದು, ಇದರಿಂದ ಮೀನುಗಾರರು ಸೇರಿದಂತೆ ಸ್ಥಳೀಯರಿಗೂ ನಷ್ಟ ಉಂಟಾಗಲಿದೆ ಎಂದು ಕಾಮಗಾರಿ ವಿರುದ್ಧ ಪ್ರತಿಭಟನೆ ಮುಂದುವರಿದಿದೆ.
ಸಹಿ ಅಭಿಯಾನ
ಸಾಗರಮಾಲ ಯೋಜನೆ ಕೈಬಿಟ್ಟು ಕಾರವಾರದ ಕಡಲತೀರಗಳನ್ನು ಉಳಿಸಬೇಕು ಎಂದು ಕೇಂದ್ರ ಸರ್ಕಾರದ ಗಮನ ಸೆಳೆಯಲು Changed.org ನಲ್ಲಿ ಆನ್ಲೈನ್ ಅಭಿಯಾನ ಚಳವಳಿ ಕೂಡ ಆರಂಭವಾಗಿದೆ.
ಪರಿಸರವಾದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಈಗಾಗಲೇ ನೂರಾರು ಜನರು ಈ ಚಳಿವಳಿಗೆ ಸಹಿ ಹಾಕಿದಾರೆ.