ಈ ಸರ್ಕಾರ ಮುಂದುವರೆದರೆ ಕಸಬ್ ಜಯಂತಿಯನ್ನೂ ಆಚರಿಸುತ್ತೆ: ಹೆಗಡೆ
ಉಡುಪಿ, ನವೆಂಬರ್ 13 : ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಠಮಾಡಿ ಟಿಪ್ಪು ಜಯಂತಿ ಆಚರಣೆ ಮಾಡಿದೆ. ಇದೇ ಸರ್ಕಾರ ರಾಜ್ಯದಲ್ಲಿ ಮುಂದುವರೆದರೆ ಉಗ್ರ ಕಸಬ್ ಜಯಂತಿಯನ್ನೂ ಆಚರಿಸುತ್ತಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆಯ ಕುಂದಾಪುರ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ನಾಡು ನುಡಿಯ ಕಲ್ಪನೆಯಿಲ್ಲ. ಟಿಪ್ಪು ಜಯಂತಿಯನ್ನು ಹಠಮಾಡಿ ಆಚರಣೆ ಮಾಡಿದರು. ಇದೇ ರೀತಿ ಸಿದ್ದರಾಮಯ್ಯ ಸರ್ಕಾರ ಮುಂದುವರೆದರೆ ಕಸಬ್ ಜಯಂತಿಯನ್ನು ಆಚರಿಸುತ್ತಾರೆ. ಇವರು ದೇಶದ್ರೋಹಿಗಳ ಜಯಂತಿಯನ್ನೂ ಆಚರಿಸಲು ಸಿದ್ಧರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕೇವಲ ಫ್ಲೆಕ್ಸ್, ಬ್ಯಾನರ್ಗಳಲ್ಲಿ ಅಭಿವೃದ್ದಿ ಎಂದು ತೋರಿಸಿದ ತಕ್ಷಣ ಅದು ಕ್ಷೇತ್ರದ ಅಭಿವೃದ್ದಿ ಅಲ್ಲ. ಆಗಲೂ ಸಾಧ್ಯವೂ ಇಲ್ಲ. ಇದನ್ನು ಭಟ್ಕಳದ ಶಾಸಕರು ಅರಿತುಕೊಳ್ಳಬೇಕು. ಉತ್ತರಕನ್ನಡ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಮೊಳಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಟ್ಕಳಕ್ಕೆ ಸುನೀಲ್ ನಾಯ್ಕ ಅಭ್ಯರ್ಥಿ?: ಸೋಮವಾರ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಅನಂತಕುಮಾರ ಹೆಗಡೆ ಬಳಿಕ ಹೆಚ್ಚಿನ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ಭಟ್ಕಳದ ಬಿಜೆಪಿ ಮುಖಂಡ ಸುನೀಲ್ ನಾಯ್ಕ. ಇದು ಇತರೆ ಆಕಾಂಕ್ಷಿಗಳಿಗೆ ಸ್ವಲ್ಪ ಆತಂಕ ಉಂಟು ಮಾಡಿತು.
ಸುನೀಲ್ ನಾಯ್ಕರಿಗೆ ಬಿದ್ದ ಚಪ್ಪಾಳೆ, ಶಿಳ್ಳೆಯನ್ನ ಕಂಡು ಯಡಿಯೂರಪ್ಪ ಸುನೀಲ್ ಅವರನ್ನೇ ಭಟ್ಕಳ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಅಂತಿಮ ಮಾಡಬಹುದಾದ ಲಕ್ಷಣಗಳು ಕಂಡು ಬರುತ್ತಿವೆ ಅಂತ ಕೆಲವರು ಸಾಮಾಜಿಕ ಜಾಲತಾಣದಲ್ಲಿಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications