ದಲಿತರನ್ನು ತುಳಿದಿದ್ದೇ ಸಿದ್ದರಾಮಯ್ಯ: ಛಲವಾದಿ ನಾರಾಯಣ ಸ್ವಾಮಿ ಟೀಕೆ
ಕಾರವಾರ, ಏಪ್ರಿಲ್ 2; "ಮಾಜಿ ಸಿಎಂ ಸಿದ್ದರಾಮಯ್ಯರಿಂದ ದಲಿತರಿಗಾದಷ್ಟು ಅನ್ಯಾಯ ಬೇರೆ ಯಾರಿಂದಲೂ ಆಗಿಲ್ಲ. ನಮ್ಮನ್ನು ಸಂಪೂರ್ಣವಾಗಿ ತುಳಿದಿದ್ದೇ ಅವರು. ಜನತಾದಳದಿಂದ ಬಂದು ಕಾಂಗ್ರೆಸ್ನಲ್ಲಿದ್ದ ದಲಿತರನ್ನು ದಮನ ಮಾಡಿದ್ದೇ ಅವರು" ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ 70 ವರ್ಷ ದಲಿತರನ್ನು ಮತದಾರರನ್ನಾಗಿ ಮಾಡಿಕೊಂಡಿತು. ದೊಡ್ಡ-ದೊಡ್ಡ ನಾಯಕರು ತಮಗೆ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಕೇಳಿಕೊಂಡರು. ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂಬ ನಮ್ಮ ಒತ್ತಾಯವೂ ಇತ್ತು" ಎಂದರು.
"ಕಾಂಗ್ರೆಸ್ನಲ್ಲಿ ನಾನು 20 ವರ್ಷಗಳ ಕಾಲ ಹೋರಾಟಗಾರನಾಗೇ ಉಳಿದುಬಿಟ್ಟೆ. ಹೀಗಾಗಿ ನನ್ನನ್ನು ಅಲ್ಲಿ ತುಳಿದರು. ಕಾಂಗ್ರೆಸ್ನಲ್ಲಿ ಓರ್ವ ದಲಿತನನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು 70 ವರ್ಷ ತೆಗೆದುಕೊಂಡರು. ಪರಮೇಶ್ವರ್ ಅವರು ತುಂಬಿದ ಸಭೆಯಲ್ಲಿ ಕಣ್ಣೀರು ಹಾಕಿ ಕೇಳಿದರೂ ಕೊಟ್ಟಿರಲಿಲ್ಲ. ಐದು ವರ್ಷ ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದರು. ಹೀಗಾಗಿ ಇಲ್ಲಿ ಭವಿಷ್ಯ ಇಲ್ಲವೆಂದು, ದಲಿತ ಸಮುದಾಯದ ಏಳ್ಗೆಗಾಗಿ ಅವರನ್ನು ವಿರೋಧಿಸಿ ಬಿಜೆಪಿಗೆ ಬಂದೆ" ಎಂದು ಹೇಳಿದರು.

"ಬಿಜೆಪಿ ದಲಿತರಿಗೆ ಗೌರವ ಕೊಡುತ್ತದೆ ಹೊರತು ಅವರಿಗೆ ಅನ್ಯಾಯ ಮಾಡುವುದಿಲ್ಲ. ಕಾಂಗ್ರೆಸ್ನವರು ತಪ್ಪು ಅಭಿಪ್ರಾಯ ಮೂಡಿಸುವ ಕುತಂತ್ರಗಳನ್ನು ಮಾಡಬಾರದು. ದಲಿತರಿಗೆ ನ್ಯಾಯ ಕೊಡಿಸಲಿಕ್ಕೆ ಸಾಧ್ಯವಿದ್ದರೆ ಅದು ಬಿಜೆಪಿಯಿಂದ ಮಾತ್ರ. ಇದಕ್ಕೆಲ್ಲ ತಾರ್ಕಿಕ ಅಂತ್ಯ ಕಾಣುವುದಿದ್ದರೆ ಅದು ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ. ದಲಿತರ ವಿಚಾರದಲ್ಲಿ ಬಿಜೆಪಿಗೆ ಹೆಚ್ಚಿನ ಕಾಳಜಿ ಇದೆ" ಎಂದರು.
ಜಾತಿ ಗಣತಿ ವರದಿಯನ್ನು ಬಿಜೆಪಿ ಸರ್ಕಾರ ಯಾಕೆ ಬಹಿರಂಗಪಡಿಸಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಯಾವ ಜಾತಿ ಎಷ್ಟಿದೆ ಎನ್ನುವುದು ಸತ್ಯ. ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆಯಾ ಜಾತಿಗಳು ನಾವು ಹೆಚ್ಚು ನಾವು ಹೆಚ್ಚು ಎನ್ನುತ್ತವೆ. ಸತ್ಯ ಯಾವತ್ತಿದ್ದರೂ ಹೊರ ಬರಲೇ ಬೇಕು. ಜಾತಿ ಗಣತಿ ಮಾಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಅವರಿಗೆ ಅದನ್ನು ಬಿಡುಗಡೆ ಮಾಡಲು ಎರಡು ವರ್ಷಗಳ ಅವಧಿ ಇತ್ತು. ಆದರೂ ಅವರು ಅದನ್ನು ಹೊರತರದಿರುವುದಕ್ಕೆ ಕಾರಣವೇನು? ದೋಷ ಇರುವುದು ಅವರ ಕಡೆಯಲ್ಲಿ, ನಮ್ಮಲ್ಲಲ್ಲ. ತಾವು ಮಾಡಲಾಗದ್ದನ್ನ ತಾಕತ್ತಿದ್ದರೆ ನೀವು ಹೊರ ತನ್ನಿ ಎಂದು ಈಗ ಹೇಳುತ್ತಿದ್ದಾರೆ" ಎಂದು ದೂರಿದರು.
"ಸದಾಶಿವ ಆಯೋಗದ ವರದಿಯನ್ನೂ ಜಗದೀಶ್ ಶೆಟ್ಟರ್ ಕಾಲದಲ್ಲಿ ಕೊಟ್ಟರು. ಅವರ ನಂತರ ಆರೂವರೆ ವರ್ಷಗಳ ಕಾಲ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರವಿದ್ದರೂ ವರದಿ ಜಾರಿಗೆ ತಂದಿಲ್ಲ. ಈಗ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಇವರು ನಮ್ಮ ತಾಕತ್ತು ನೋಡಲು ಮಾತ್ರ ಇರುವುದಾ?" ಎಂದು ಪ್ರಶ್ನಿಸಿದರು.












Click it and Unblock the Notifications