ಭಟ್ಕಳದಲ್ಲಿ ಸುನೀಲ್ ನಾಯ್ಕ್ ಅಭಿಮಾನಿ-ವಿರೋಧಿಗಳ ಹಗ್ಗಜಗ್ಗಾಟ
ಕಾರವಾರ, ನವೆಂಬರ್ 14: ಬಿಜೆಪಿಯ ಪರಿವರ್ತನಾ ಯಾತ್ರೆ ನಿನ್ನೆ(ನ.13) ಭಟ್ಕಳ ಪ್ರವೇಶಿಸುತ್ತಿದ್ದಂತೆಯೇ ಒಂದ ಕ್ಷಣ ಜನ ತುಂಬು ಅಭಿಮಾನದಿಂದ ಬಿಜೆಪಿ ನಾಯಕರನ್ನು ಬರಮಾಡಿಕೊಂಡರೆ, ಕೆಲವೇ ಹೊತ್ತಿನಲ್ಲಿ ಅಸಮಾಧಾನದ ಹೊಗೆ ಮನೆಮಾಡಿತ್ತು.
ಬಿಜೆಪಿಯ ರಾಜ್ಯ ಮುಖಂಡರುಗಳು ಸಮಾವೇಶದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಯನ್ನು ಉದ್ದೇಶಿಸಿ ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ಸಂಜೆ ಭಾಷಣ ಮಾಡಿದರು.
ಈ ವೇಳೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಉತ್ತರಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚ ಪ್ರಧಾನಕಾರ್ಯದರ್ಶಿ ಸುನೀಲ್ ನಾಯ್ಕರಿಗೆ ಸಮಾವೇಶದಲ್ಲಿ ನೆರೆದಿದ್ದ ಜನ ಶಿಳ್ಳೆ, ಚಪ್ಪಾಳೆಯೊಂದಿಗೆ ಸ್ವಾಗತಿಸಿದ್ದರು. ಬಿಎಸ್ ಯಡಿಯೂರಪ್ಪ ಕೂಡ ತಮ್ಮ ಸ್ವಾಗತ ಭಾಷಣದಲ್ಲಿ ಸುನೀಲ್ ನಾಯ್ಕರ ಹೆಸರು ಹೇಳುತ್ತಿದ್ದಂತೆ ಜನರಿಂದ ಮತ್ತಷ್ಟು ಶಿಳ್ಳೆ, ಚಪ್ಪಾಳೆ ಕೇಳಿಬಂದಿದೆ. ಇದರ ಬೆನ್ನಲ್ಲೇ ಈಗ ಭಟ್ಕಳದಲ್ಲಿ ಅತೃಪ್ತಿಯ ಹೊಗೆಯಾಡಲು ಶುರುವಾಗಿದೆ!

ಬ್ಯಾನರ್ಗಳಿಗೆ ಬಣ್ಣಬಳಿದ ಕಿಡಿಗೇಡಿಗಳು
ಭಟ್ಕಳಕ್ಕೆ ಆಗಮಿಸುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಸ್ವಾಗತ ಕೋರಿ ಸ್ಥಳೀಯ ಬಿಜೆಪಿ ಮುಖಂಡರು, ಆಕಾಂಕ್ಷಿಗಳು ಬ್ಯಾನರ್, ಕಟೌಟ್ ಗಳನ್ನು ನಗರದೆಲ್ಲೆಡೆ ಹಾಕಿದ್ದರು. ಅಂತೆಯೇ ಸುನೀಲ್ ನಾಯ್ಕ ಅವರ ಫೋಟೋವಿದ್ದ ಸ್ವಾಗತ ಬ್ಯಾನರ್ ಅನ್ನು ಕೂಡ ನಗರಾದ್ಯಂತ ಹಾಕಲಾಗಿತ್ತು. ಆದರೆ ಕಿಡಿಗೇಡಿಗಳು ಅವರ ಬ್ಯಾನರ್ನಲ್ಲಿನ ಫೋಟೋಗಳಿಗೆ ರಾತ್ರೋರಾತ್ರಿ ಬಣ್ಣಬಳಿದು ವಿವಾದ ಸೃಷ್ಟಿಸಿದ್ದಾರೆ. ಭಟ್ಕಳದ ಶಂಸುದ್ದೀನ್ ಸರ್ಕಲ್, ಶಿರಾಲಿ ಹಾಗೂ ಮುರುಡೇಶ್ವರಗಳಲ್ಲಿ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು.

ಅನುಮಾನ ಹುಟ್ಟಿಸಿದ ಹಸಿರು ಬಣ್ಣ!
ಶಂಸುದ್ದೀನ್ ಸರ್ಕಲ್ ಹಾಗೂ ಶಿರಾಲಿಯಲ್ಲಿನ ಬ್ಯಾನರ್ಗಳಿಗೆ ಕಿಡಿಗೇಡಿಗಳು ಬಣ್ಣ ಬಳಿದಿದ್ದಾರೆ. ಜತೆಗೆ, ಎರಡೂ ಕಡೆಯಲ್ಲಿಯೂ ಹಸಿರು ಬಣ್ಣವನ್ನೇ ಬಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕೃತ್ಯವನ್ನೇ ಹೊಂಚು ಹಾಕಿಯೇ ಮಾಡಲಾಗಿದೆ ಅಂತ ಕೆಲವು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸುನೀಲ್ ನಾಯ್ಕ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಾಗ
'ಸುನೀಲ್ ಅಣ್ಣನ ಜನಪ್ರಿಯತೆಯ ಅಲೆಯನ್ನು ಎದುರಿಸಲಾಗದೇ, ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಜಿಸಿರುವ ವಿರೋಧಿಗಳು ಖಿನ್ನತೆಗೊಳಗಾಗಿರುವುದಕ್ಕೆ ಈ ಬ್ಯಾನರ್ಗಳು ಸಾಕ್ಷಿಯಾಗಿವೆ. ಇದನ್ನು ನೋಡಿದಾಗ ನಮಗೆ ಕೋಪ ಖಂಡಿತಾ ಬಂದಿಲ್ಲ. ಬದಲಾಗಿ ವಿರೋಧಿಗಳ ಪರಿಸ್ಥಿತಿ ನೋಡಿ ದುಃಖವಾಗಿದೆ. ಸುನೀಲ್ ಅವರ ಜನಪ್ರಿಯತೆ ಪಾಪ ಇವರನ್ನು ಇಷ್ಟು ಬೇಗ ಖಿನ್ನತೆಗೆ ದೂಡಿತೇ' ಎಂದು ಸುಬ್ರಹ್ಮಣ್ಯ ಪಟಗಾರ ಭಟ್ಕಳ ಎಂಬುವವರು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಮನುಷ್ಯತ್ವ ಇಲ್ಲದ ಅನಾಗರಿಕರು!
ಸಂತೋಷ ನಾಯ್ಕ್ ದೇವಿಕಾನ್ ಎಂಬುವವರು ಸುಬ್ರಹ್ಮಣ್ಯ ಎಂಬುವವರು ಸುನೀಲ್ ನಾಯ್ಕ ಅವರ ಪರ ಹಾಕಿದ ಪೋಸ್ಟ್ಗೆ 'ಮನುಷ್ಯತ್ವ ಇಲ್ಲದ ಅನಾಗರಿಕರು' ಎಂದು ಕಮೆಂಟ್ ಮಾಡಿದರೆ, 'ಸುನೀಲ ನಾಯ್ಕರ ಪಕ್ಷ ಸಂಘಟನೆ, ಪ್ರಚಾರ ಅವರ ಜನ ಬೆಂಬಲ ನೋಡಿ ಸಹಿಸಿಕಳ್ಳಲಾಗದೆ ಮಾಡಿದ ಕೆಲಸವಿದು. ಅವರು ಮಾಡಿದ ಕೆಲಸದಿಂದ ಬಿಟ್ಟಿ ಪ್ರಚಾರ ನೀಡುತ್ತಿದ್ದಾರೆ' ಎಂದು ಪಾಂಡು ನಾಯ್ಕ ಎಂಬುವವರು ಕಮೆಂಟ್ ಮಾಡಿದ್ದಾರೆ.

ಅತೃಪ್ತ ಆತ್ಮಗಳಿವೆ!
ಕೇಶವ ನಾಯ್ಕ ಎಂಬುವವರು 'ನಮ್ಮ ಭಟ್ಕಳ ಬಿಜೆಪಿಯಲ್ಲಿಯೇ ಅತೃಪ್ತ ಆತ್ಮಗಳಿವೆ....!!!' ಎಂದು ಕಮೆಂಟ್ ಮಾಡಿ ಸುನೀಲ್ ನಾಯ್ಕರಿಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕರೇ ಆಗಬೇಕು ಎನ್ನುವ ಸೂಚನೆ 'ಭಟ್ಕಳ ಬಿಜೆಪಿಯಲ್ಲಿ ಇತ್ತಿಚೆಗೆ ಕಾಂಗ್ರೇಸ್ ನಿಂದ ಬಿಜೆಪಿ ಪಕ್ಷಾಂತರಗೊಂಡ ಸುನೀಲ್ ನಾಯ್ಕರ ಹವಾ ಇದೆ ಎನ್ನುವುದು ಭಟ್ಕಳದಲ್ಲಿ ಜರುಗಿದ ಯಡಿಯೂರಪ್ಪರ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಮನವರಿಕೆಯಾಯಿತು.

ಸುನೀಲ್ ನಾಯ್ಕ್ ಅಭ್ಯರ್ಥಿಯಲ್ಲ!
ಯಾತ್ರೆಯಲ್ಲಿ ಯಡಿಯೂರಪ್ಪನವರ ಮುಂದೆ ಸುನೀಲ್ ಅಭಿಮಾನಿಗಳು ಚಪ್ಪಾಳೆ, ಕೇಕೆ, ಸಿಳ್ಳು ಹಾಕುವುದರ ಮೂಲಕ ಮುಂಬರುವ ಚುನಾವಣೆಯಲ್ಲಿ ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕರೇ ಆಗಬೇಕು ಎನ್ನುವ ಸೂಚನೆ ನೀಡಿದ್ದಂತೋ ಸತ್ಯ' ಎಂದು ರಾಜಾ ಮಾನ್ವಿ ಎಂಬುವವರು ಹಾಕಿದ ಪೋಸ್ಟ್ಗೆ, 'ಸಿಳ್ಳೆ ಕೇಕೆ ಹೊಡೆದಿದ್ದು ಅಭಿಮಾನದಿಂದ ಅಲ್ಲ, ಹಣದ ಕೇಕೆ. ಕುಂದಾಪುರದಲ್ಲಿ ನಮ್ಮ ಹಾಲಾಡಿ ಅವರೆ ಅಭ್ಯರ್ಥಿ ಅಂತ ಘೋಷಣೆ ಮಾಡಿರುವ ಮಾನ್ಯ ಯಡಿಯೂರಪ್ಪನವರು ಭಟ್ಕಳದಲ್ಲಿ ಅದು ಯಾಕೆ ಮಾಡಿಲ್ಲ. ಭಟ್ಕಳದಲ್ಲಿ ಇನ್ನು ಹಿರಿಯ ಬಿಜೆಪಿ ಮುಖಂಡರುಗಳು ಇದ್ದಾರೆ' ಅಂತ ಲೋಕೇಶ ನಾಯ್ಕ ಎಂಬುವವರು ಕಮೆಂಟ್ ಮಾಡುವ ಮೂಲಕ ಸುನೀಲ್ ನಾಯ್ಕ ಬಿಜೆಪಿ ಅಭ್ಯರ್ಥಿ ಅಲ್ಲ ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications