ಬಿಜೆಪಿಯಂಥ ಸಂಸ್ಕೃತಿ ಇಲ್ಲದ ಜನ ಬೇರೆ ಯಾರೂ ಇಲ್ಲ: ಸಿದ್ದರಾಮಯ್ಯ
ಕಾರವಾರ, ಆಗಸ್ಟ್ 02; "ಭಾರತೀಯ ಜನತಾ ಪಾರ್ಟಿಯವರಂಥ ಸಂಸ್ಕೃತಿ ಇಲ್ಲದ ಜನ ಬೇರೆ ಯಾರೂ ಇಲ್ಲ. ಅವರು ಕಳ್ಳನ ಮನಸು ಹುಳ್ಳುಳುಗೆ ಎಂಬಂತೆ ಹೆಗಲು ಮುಟ್ಟಿ ನೋಡಿಕೊಳ್ಳುವವರು" ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸೋಮವಾರ ಕಾರವಾರ ಪ್ರವಾಸದಲ್ಲಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಮಾನಹಾನಿಕರ ಸುದ್ದಿಗಳನ್ನ ಪ್ರಕಟಿಸಬಾರದು ಎಂದು ಕೋರ್ಟ್ ಮೊರೆ ಹೋಗಿರುವ ಬಗ್ಗೆ ಮಾತನಾಡಿದರು.
"ಇದು ಏನನ್ನು ಸೂಚಿಸುತ್ತದೆ?. ಇವರು ಯಾವುದೋ ಸ್ಕ್ಯಾಂಡಲ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದೇ ಅರ್ಥ ತಾನೆ? ಅವರು ಯಾವುದೋ ಸೆಕ್ಸ್ ಸ್ಕ್ಯಾಂಡಲ್, ಭ್ರಷ್ಟಾಚಾರ ಅಥವಾ ಬೇರೆ ಯಾವುದೇ ಅಪರಾಧಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹೀಗಾಗಿ ಕೋರ್ಟ್ ಮೊರೆ ಹೋಗುತ್ತಿದ್ದಾರೆ" ಎಂದರು.
"ವಿಡಿಯೋಗಳಲ್ಲಿ ಗ್ರಾಫಿಕ್ಸ್ ಮಾಡುವುದಾದರೆ ರೇಣುಕಾಚಾರ್ಯ, ಸದಾನಂದಗೌಡರದ್ದೇ ಯಾಕೆ ಮಾಡಬೇಕು? ಬೇರೆಯವರನ್ನು ಯಾಕೆ ಮಾಡಲ್ಲ?. ಇವರದ್ದು ಕಳ್ಳರ ಮನಸು ಹುಳ್ಳುಳುಗೆ ಎಂಬಂತೆ. ಕಳ್ಳ ಹೆಗಲುಮುಟ್ಟಿ ನೋಡಿಕೊಂಡಂತೆ ಇವರದ್ದು" ಎಂದು ಟೀಕಿಸಿದರು.

"ಭಾರತೀಯ ಜನತಾ ಪಾರ್ಟಿಯವರು ತಾವು ಬಹಳ ಸುಸಂಸ್ಕೃತರು, ಸಂಸ್ಕಾರವಂತರು ಎಂದುಕೊಂಡಿದ್ದಾರೆ. ಅವರಂಥ ಸಂಸ್ಕೃತಿ ಇಲ್ಲದ ಜನ ಬೇರಾರೂ ಇಲ್ಲ" ಎಂದು ಸಿದ್ದರಾಮಯ್ಯ ವಾಗ್ದಾಳಿಯನ್ನು ನಡೆಸಿದರು.
ಬೊಮ್ಮಾಯಿ ತಮ್ಮವರೇ ಎಂದು ಜೆಡಿಎಸ್ನವರು ಹೇಳಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿಗೆ ಸೇರಿದವರನ್ನೂ ಈಗ ನಮ್ಮವರು, ನಮ್ಮವರು ಎಂದರೆ ಆಗತ್ತಾ? ನಾನು ಕೂಡ ಜೆಡಿಎಸ್ ನಲ್ಲಿದ್ದವನು, ದೇಶಪಾಂಡೆ ಜನತಾ ದಳದಿಂದ ಬಂದವರು. ಹಾಗಂತ ನಮ್ಮವರು ಅಂದ್ರೆ ಆಗತ್ತಾ?" ಎಂದು ಪ್ರಶ್ನಿಸಿದರು.
"ಜೆಡಿಎಸ್ ಈಗ ಜಾತ್ಯಾತೀತ ಪಕ್ಷ ಅಲ್ಲ. ಜೆಡಿಎಸ್ ಸೆಕ್ಯುಲರಿಸಮ್ಗೆ ತರ್ಪಣ ಬಿಟ್ಟು ಬಹಳ ದಿನವಾಗಿದೆ. ಹೀಗಾಗಿ ನಾವಿದ್ದ ಪಾರ್ಟಿ ಈಗ ಅಲ್ಲಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
ದೇವೇಗೌಡರು ತಮ್ಮ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆಂಬಂತೆ ಕಾಣಿಸುತ್ತಿದೆ. ತಮ್ಮ ಬಗ್ಗೆ ಅವರು ಏನನ್ನೂ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ನಾನು ಕೂಡ ಅವರ ಬಗ್ಗೆ ಏನನ್ನೂ ಮಾತನಾಡಲ್ಲ" ಎಂದರು.
ಸರ್ಕಾರದ ಕರ್ತವ್ಯವಾಗಿದೆ; ಮತ್ತೆ ಕೋವಿಡ್ ಹೆಚ್ಚಳವಾಗುತ್ತಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಕೋವಿಡ್ ಮೂರನೇ ಅಲೆ ಬರದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಗೋವಾ, ಕೇರಳದಲ್ಲಿ ಕೋವಿಡ್ ಹೆಚ್ಚಳವಾಗಿದೆ. ಇಲ್ಲೂ ಕೂಡ ಹೆಚ್ಚಾಗೋ ಸಾಧ್ಯತೆ ಇದೆ. ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು" ಎಂದರು.
"ಮುಖ್ಯವಾಗಿ ಕೇರಳದಿಂದ ಕೊಡಗು, ಚಾಮರಾಜನಗರ, ಮೈಸೂರು, ಮಂಗಳೂರಿಗೆ ಬರುತ್ತಾರೆ. ಈ ಎಲ್ಲಾ ಗಡಿಯಲ್ಲೂ ಬಹಳ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು. ಯಾರು ಎರಡು ಡೋಸ್ ಲಸಿಕೆ ತೆಗೆದುಕೊಂಡಿಲ್ಲ, ಅವರನ್ನು ಒಳಗೆ ಬಿಡಬಾರದು. ಆರ್ಟಿಪಿಸಿಆರ್, ಆಂಟಿಜೆನ್ ಪರೀಕ್ಷೆ ಮಾಡಿ ಕೋವಿಡ್ ನೆಗೆಟಿವ್ ಇದ್ದವರನ್ನು ಮಾತ್ರ ಬಿಡಬೇಕು. ಕೋವಿಡ್ ಮೂರನೇ ಅಲೆ ತಡೆಗಟ್ಟಲು ಎಲ್ಲಾ ಕ್ರಮ ತೆಗೆದುಕೊಳ್ಳಬೇಕು" ಎಂದು ಸಲಹೆ ನೀಡಿದರು.
"ಈಗಾಗಲೇ ನಾವು ಕೋವಿಡ್ನ ಮೊದಲ ಹಾಗೂ ಎರಡನೇ ಅಲೆಯಿಂದ ಸಮಸ್ಯೆಗಳನ್ನು ಅನುಭವಿಸಿದ್ದೇವೆ. ಐಸಿಯು ಹಾಸಿಗೆಗಳು, ಆಕ್ಸಿಜನ್ ಗಳಿಲ್ಲದೇ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಇದು ಮತ್ತೆ ಮರುಕಳಿಸಬಾರದು. ಅದಕ್ಕೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಮಂತ್ರಿ ಮಂಡಲು ಮಾಡಲು ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಕೆಲಸ ಏನು? ಇದನ್ನು ಮೊದಲು ಮಾಡಬೇಕು. ಮಂತ್ರಿ ಮಂಡಲ ಮಾಡಲಿ, ಬೇಡ ಎನ್ನಲ್ಲ. ಆದರೆ ಪದೇ ಪದೇ ದೆಹಲಿಗೆ ಯಾಕೆ ಹೋಗಬೇಕು? ಒಮ್ಮೆ ಹೋಗಿ ಮಾಡಿಸ್ಕೊಂಡು ಬರಬೇಕು" ಎಂದು ಹೇಳಿದರು.
"ಹೈಕಮಾಂಡ್ ಕೂಡ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಸದ್ಯ ಮಂತ್ರಿಗಳಿಲ್ಲ. ಎಲ್ಲಾ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಯಾರೂ ತಮ್ಮ ಕ್ಷೇತ್ರಕ್ಕೆ ಹೋಗುತ್ತಿಲ್ಲ. ಅವರಿಗೆ ಜನರ ಹಿತ ಮುಖ್ಯವಲ್ಲ. ಅಧಿಕಾರ ಬಹಳ ಮುಖ್ಯ. ಬಸವರಾಜ ಬೊಮ್ಮಾಯಿ ಈಗಷ್ಟೇ ಮುಖ್ಯಮಂತ್ರಿ ಆಗಿದ್ದಾರೆ. ಅದಕ್ಕೆ ಟೀಕೆ ಮಾಡಲ್ಲ. ಆದರೆ ಈ ಬಗ್ಗೆಯೂ ಗಮನ ಕೊಡಬೇಕು" ಎಂದು ತಿಳಿಸಿದರು.












Click it and Unblock the Notifications