ಮತ ಚಲಾಯಿಸದ ಅನಂತ ಹೆಗಡೆ ವಿರುದ್ಧ ಬಿಜೆಪಿಯಲ್ಲೇ ಭರ್ತಿ ಆಕ್ರೋಶ
ಕಾರವಾರ, ಸೆಪ್ಟೆಂಬರ್ 1: 'ಮತದಾನ ನಮ್ಮೆಲ್ಲರ ಹಕ್ಕು. ಬಿಜೆಪಿಗೆ ಮತ ನೀಡಿ' ಎಂದು ಪ್ರಜಾಪ್ರಭುತ್ವದ ಆಶಯಗಳ ಬಗ್ಗೆ ಭಾಷಣ ಮಾಡುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಿಲ್ಲ!
ಹೌದು, ಸಮಾಜದ ಜವಾಬ್ದಾರಿಯುತ ಸಮಾಜದಲ್ಲಿದ್ದೂ ಚುನಾವಣೆಯಲ್ಲಿ ಮತ ಚಲಾಯಿಸದ ಅನಂತಕುಮಾರ್ ಹೆಗಡೆ ಅವರ ನಡೆಯ ಬಗ್ಗೆ ಬಿಜೆಪಿಯವರೇ ಅಸಮಾಧಾನ ಹೊರಹಾಕಿದ್ದಾರೆ. ಮತದಾನಕ್ಕೆ ಗೈರಾಗಿರುವ ಅವರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ- ಟಿಪ್ಪಣಿಗಳು ಪ್ರಾರಂಭವಾಗಿವೆ.

ಶಿರಸಿಯ ನಗರಸಭೆ ಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ ವಾರ್ಡ್ ಸಂಖ್ಯೆ 8ರ ಕೆಎಚ್ ಬಿ ಕಾಲೋನಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರು ಮತದಾನ ಮಾಡಬೇಕಿತ್ತು. ಆದರೆ ಸಚಿವರು ಶಿರಸಿಗೇ ಬಂದಿಲ್ಲ. ಮೂಲಗಳ ಪ್ರಕಾರ ಸಚಿವರು ದೆಹಲಿಯಲ್ಲೇ ಇದ್ದಾರೆ. ಹೀಗಾಗಿ ನಗರಕ್ಕೆ ಬಂದಿಲ್ಲ. 'ಹಾಗಿದ್ದರೆ, ಪ್ರಚಾರಕ್ಕೆ ಅಲ್ಲಿಂದ ಇಲ್ಲಿಗೆ ಬರಲಾಯಿತೆ?' ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಅನಂತಕುಮಾರ್ ಹೆಗಡೆ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಕಾರವಾರದವರೆಗೂ ಬಂದು ಬಿರುಸಿನಿಂದ ಚುನಾವಣೆ ಪ್ರಚಾರ ನಡೆಸಿದ್ದರು. ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದರು. ಆದರೆ ಮತದಾನಕ್ಕೆ ಮಾತ್ರ ಬಾರದಿರುವುದು ಚರ್ಚೆಗೆ ಗ್ರಾಸವಾಗಿದೆ. ಸಚಿವರೇ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಸದಾ ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿದ್ದ ಸಚಿವರು, ಈ ಬಾರಿ ಮುಸ್ಲಿಂ ಅಭ್ಯರ್ಥಿ ಪರ ಕಾರವಾರದಲ್ಲಿ ಪ್ರಚಾರ ಕೂಡ ಮಾಡಿದ್ದರು. ಕಾರವಾರ ನಗರಸಭೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಗರದ ವಾರ್ಡ್ ನಂಬರ್ 15 ರಿಂದ ಬಿಜೆಪಿಯು ಶಗುಫ್ತಾ ಸಿದ್ದಿಖಿ ಎಂಬ ಮುಸ್ಲಿಂ ಮಹಿಳೆಗೆ ಟಿಕೆಟ್ ನೀಡಿತ್ತು. ಅವರ ಪರ ಅನಂತಕುಮಾರ್ ಹೆಗಡೆ ಪ್ರಚಾರ ನಡೆಸಿಯೂ ಸದ್ದು ಮಾಡಿದ್ದರು.












Click it and Unblock the Notifications