ಅಂಕೋಲಾ; ಅಲಗೇರಿ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಪ್ಪಿಗೆ
ಕಾರವಾರ, ಆಗಸ್ಟ್ 27; ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಾಗರಿಕ ವಿಮಾನ ನಿಲ್ದಾಣ ಕಾಮಗಾರಿಗೆ ಸಂಭಂದಿಸಿದಂತೆ ಒಂದು ಹೆಜ್ಜೆ ಸರ್ಕಾರ ಮುಂದೆ ಸಾಗಿದೆ. ವಿಮಾನ ನಿಲ್ದಾಣಕ್ಕೆ ಬೇಕಾಗುವ ಖಾಸಗಿ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ.
ನೌಕಾನೆಲೆಯ ಸಹಭಾಗಿತ್ವದಲ್ಲಿ ಅಲಗೇರಿ ಗ್ರಾಮದಲ್ಲಿ ನಾಗರಿಕ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಿತ್ತು. ಈ ಯೋಜನೆಗೆ ಅಲಗೇರಿ, ಭಾವಿಕೇರಿ ಹಾಗೂ ಬೇಲೇಕೆರಿ ಗ್ರಾಮದ ಜನರ ಜಮೀನುಗಳು ಅಗತ್ಯವಿದ್ದು ಸುಮಾರು 87 ಎಕರೆ 14 ಗುಂಟೆ ಜಾಗ ವಿಮಾನ ನಿಲ್ದಾಣದ ರನ್ ವೇ ನಿರ್ಮಿಸಲು ಅಗತ್ಯವಿದ್ದು, ಭೂ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯಕ್ಕೆ ಸರ್ಕಾರ ಮುಂದಾಗಿತ್ತು.
ನಾಗರಿಕ ವಿಮಾನ ನಿಲ್ದಾಣ ನಿರ್ಮಾಣ ಬೇಡ, ತಮ್ಮ ಜಮೀನುಗಳನ್ನು ವಶಕ್ಕೆ ಪಡೆಯಬಾರದು ಎಂದು ಹೋರಾಟ ಸಹ ಅಂಕೋಲಾದಲ್ಲಿ ನಡೆದಿತ್ತು. ಇನ್ನು ಭೂ ಸ್ವಾಧೀನ ಪಡಿಸಿಕೊಳ್ಳುವುದಾದರೆ ಸಮೀಪದಲ್ಲಿಯೇ ಪರ್ಯಾಯ ಜಾಗವನ್ನು ಕೊಡುವಂತೆ ಜನರು ಬೇಡಿಕೆಯನ್ನು ಸಹ ಜಿಲ್ಲಾಡಳಿತದ ಮುಂದೆ ಇಟ್ಟಿದ್ದು ಇದರ ನಡುವೆ ಜಿಲ್ಲಾಡಳಿತ ಗ್ರಾಮದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಿತ್ತು.

ಈ ಹಿನ್ನಲೆಯಲ್ಲಿ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಅಧಿಸೂಚನೆ ಪ್ರಕಟಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಖಾಸಗಿ ಜಮೀನಿನ ಅಗತ್ಯವಿರುವ ಹಿನ್ನಲೆಯಲ್ಲಿ 2013ರ ಕಲಂ19(1) ಮತ್ತ 19(2) ರಡಿಯಲ್ಲಿನ ಅವಕಾಶದ ಅನ್ವಯ ಭೂ ಸ್ವಾಧೀನ ಪಡಿಸಿಕೊಳ್ಳುವಂತೆ ಆದೇಶಿಸಲಾಗಿದೆ.
ಇದಲ್ಲದೇ ಅಲಗೇರಿ ನಾಗರಿಕ ವಿಮಾನ ನಿಲ್ದಾಣದ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಕುಮಟಾ ಉಪವಿಭಾಗಾಧಿಕಾರಿಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವ ಅಧಿಕಾರವನ್ನು ಸಹ ನೀಡಿದ್ದು, ಭೂ ಸ್ವಾಧೀನ ಪಡಿಸಿಕೊಂಡ ನಂತರ ಪರಿಹಾರ ಮೊತ್ತವನ್ನು ಕೊಡುವ ಬಗ್ಗೆ ಜೊತೆಗೆ ಜಮೀನುಗಳು ಈ ಹಿಂದೇ ಭೂ ಸ್ವಾಧೀನವಾಗಿಲ್ಲವೆಂದು ಭೂ ಸ್ವಾಧೀನಾಧಿಕಾರಿಗಳು ಖಚಿತಡಿಸಿಕೊಂಡು ಧೃಢೀಕರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಸದ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿರುವ ಹಿನ್ನಲೆಯಲ್ಲಿ ಶೀಘ್ರದಲ್ಲಿ ಭೂ ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದ್ದು, ಕೆಲ ವರ್ಷದಲ್ಲಿಯೇ ನಾಗರಿಕ ವಿಮಾನ ನಿಲ್ದಾಣ ಸಾರ್ವಜನಿಕರ ಉಪಯೋಗಕ್ಕೆ ಸಿಗುವ ಸಾಧ್ಯತೆ ಇದೆ.
ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶವಾಗಿದೆ. ಎಂಒಯು ಕೂಡ ಪ್ರಗತಿಯಲ್ಲಿದೆ. ಅದಾದ ಕೂಡಲೇ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೂಡ ಹೇಳಿದ್ದಾರೆ.
ಅಲಗೇರಿ, ಬಾವಿಕೇರಿ, ಮತ್ತು ಬೇಲೇಕೇರಿ ಭಾಗದ ಜನರಲ್ಲಿ ಈ ಭಾಗದಲ್ಲಿ ವಿಮಾನ ನಿಲ್ದಾಣವಾಗುವುದೋ ಇಲ್ಲವೋ? ಭೂಸ್ವಾಧೀನವಾಗುವುದೆಷ್ಟೋ ಎನ್ನುವ ಕುತೂಹಲವಿತ್ತು. ಭೂಸ್ವಾಧೀನಕ್ಕೊಳಪಡುವ ಜನರು ಮಾತ್ರ ಪ್ರತಿ ನಿತ್ಯ ನಿದ್ದೆಗೆಟ್ಟು ತಮ್ಮ ಭೂಮಿ ಕಳೆದುಕೊಳ್ಳುತ್ತೇವೆ ಎನ್ನುವ ಆತಂಕದಲ್ಲಿಯೇ ಇದ್ದರು. ಇದೀಗ ಹೊರಬಿದ್ದ ಆದೇಶ ಮತ್ತಷ್ಟು ಕಳವಳ ಮೂಡಿಸಿದೆ.
ಕಳೆದ ವರ್ಷ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಗ್ರಾಮದಲ್ಲಿ ಇದರ ರನ್ವೇ ನಿರ್ಮಾಣದ ಸುದ್ದಿ ತಿಳಿಯುತ್ತಲೇ ಗ್ರಾಮಸ್ಥರು ಪ್ರತಿಭಟನೆ ಮಾಡಿ, ಇಲ್ಲಿ ಈ ಯೋಜನೆ ತರುವುದು ಬೇಡ ಎಂದು ಹೇಳಿದ್ದರು. ಆಗ ಇದರ ಸುದ್ದಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಮತ್ತೆ ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಂಕಿತ ಹಾಕುತ್ತಿದ್ದಂತೆಯೇ ಎಲ್ಲ ಪ್ರಕ್ರಿಯೆಗಳು ಮತ್ತೆ ಚಾಲ್ತಿಗೊಂಡವು ಯಾವುದೇ ಅಡೆ ತಡೆಗಳನ್ನು ಇಟ್ಟುಕೊಳ್ಳದೆ ವೇಗದಲ್ಲಿಯೇ ಕಾಮಗಾರಿ ಆರಂಭಕ್ಕೆ ಸರಕಾರ ಚಾಲನೆ ನೀಡಿದೆ.
ಇದರ ಮಧ್ಯೆಯೇ ವಿಶೇಷ ಭೂಸ್ವಾಧೀನಾಧಿಕಾರಿ ಅಲಗೇರಿ ನಾಗರಿಕ ವಿಮಾನ ನಿಲ್ದಾಣ ಹಾಗೂ ಕುಮಟಾ ಉಪವಿಭಾಗದ ಉಪವಿಭಾಗಾಧಿಕಾರಿಯನ್ನು ಭೂಸ್ವಾಧೀನ ಅಧಿನಿಯಮ 3ನೇ ಪ್ರಕರಣ (ಜಿ) ಖಂಡದ ಮೇರೆಗೆ ಜಿಲ್ಲಾಧಿಕಾರಿ ಕಾರ್ಯ ನಿರ್ವಹಿಸಲು ನಿಯುಕ್ತಿಗೊಳಿಸಿದ್ದಾರೆ.












Click it and Unblock the Notifications