ಸಿವಿಲ್ ಡಿಪ್ಲೊಮಾ: ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದ 71 ವರ್ಷದ ಹಿರಿಯ ವಿದ್ಯಾರ್ಥಿ
ಕಾರವಾರ, ಅಕ್ಟೋಬರ್31: ಸಾಧನೆ ಸಾಧರಕ ಸೊತ್ತೇ ಹೊರತು, ಸೋಂಬೇರಿಯ ಸೊತ್ತಲ್ಲ, ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೇ. (age is a just number) ಈ ಎಲ್ಲಾ ನುಡಿಗಟ್ಟುಗಳಿಗೆ ಸಾಕ್ಷಿ ಎಂಬಂತೆ ಉತ್ತರ ಕನ್ನಡದ ಕಾರಾವಾರದ ವ್ಯಕ್ತಿಯೊಬ್ಬರು ಸಾಧನೆ ಮಾಡಿ ತೋರಿಸಿದ್ದಾರೆ.
71ರ ಇಳಿ ವಯಸ್ಸಿನಲ್ಲಿಯೂ ಎಲ್ಲಾ ವಿಧ್ಯಾರ್ಥಿಗಳಂತೆ ಸಮವಸ್ತ್ರದಲ್ಲಿ ಕಾಲೇಜಿಗೆ ತೆರಳಿ 3 ವರ್ಷ ಸಿವಿಲ್ ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದ ಹಿರಿಯರೊಬ್ಬರು ಇದೀಗ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬರುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಕರ್ನಾಟಕ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ನಿವೃತ್ತಿ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಹೊಸದೇನೋ ಕಲಿಯುವ ನಿಟ್ಟಿನಲ್ಲಿ ಕಾಲೇಜಿಗೆ ಸೇರಿ ಉತ್ತರ ಅಂಕ ಗಳಿಸಿ ಅದರಲ್ಲೂ ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ಮಾಡಿದವರು ನಾರಾಯಣ್ ಭಟ್.
ರಾಜ್ಯವೇ ತಿರುಗಿ ನೋಡಿದ ನಾರಾಯಣ ಭಟ್ ಸಾಧನೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಆದರ್ಶ ನಗರದ ನಾರಾಯಣ ಭಟ್ ಎನ್ನುವವರು ಇಂತಹದೊಂದು ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಡಿಪ್ಲೊಮಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, 71ರ ಈ ಹಿರಿಯ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ ಆಗುವ ಮೂಲಕ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದರೆ. ಅಲ್ಲದೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲೇ ಇವರೇ ಅತಿ ಹಿರಿಯ ಸಿವಿಲ್ ಡಿಪ್ಲೊಮಾ ವಿದ್ಯಾರ್ಥಿಯೂ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಾಧನೆ ಮಾಡಿರುವ ನಾರಾಯಣ ಭಟ್ ಅವರನ್ನು ನವೆಂಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಪ್ಲೊಮಾ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ತಾಂತ್ರಿಕ ಶಿಕ್ಷಣ ಸಚಿವರು ಗೌರವಿಸಲಿದ್ದಾರೆ.
ಕೆಪಿಎಸ್ಸಿ ವಿವಿಧ ಇಲಾಖೆಯ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟ
1973ರಲ್ಲಿ ರಾಜ್ಯಕ್ಕೆ ದ್ವಿತೀಯ ಶ್ರೇಣಿಯಲ್ಲಿ ಪಾಸ್
ಡಿಪ್ಲೋಮೋ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ನಾರಾಯಣ ಭಟ್ ಅವರು, ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು 1973ರಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾದಲ್ಲಿ ರಾಜ್ಯಕ್ಕೆ ದ್ವಿತೀಯ ಶ್ರೇಣಿ ಪಡೆದಿದ್ದರು. ಬಳಿಕ ಬಿಣಗಾದ ಕಾಸ್ಟಿಕ್ ಸೋಡಾ ಫ್ಯಾಕ್ಟರಿಯಲ್ಲಿ ನೌಕರಿಗೆ ಸೇರಿಕೊಂಡಿದ್ದರು. 1993ರವರೆಗೆ ಕರ್ತವ್ಯ ನಿರ್ವಹಿಸಿ, ನಂತರ ಗುಜರಾತ್ ನಲ್ಲಿ 2013 ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತರಾದ ಬಳಿಕವೂ ನಾರಾಯಣ ಭಟ್ ಅವರನ್ನು ಓದು ಎನ್ನುವುದು ಸೆಳೆಯುತ್ತಿತ್ತು. ಓದಿನ ಮೇಲಿನ ಆಸಕ್ತಿಯಿಂದಲೇ ಇಂದು ಅವರನ್ನು ರಾಜ್ಯವೇ ಗುರುತಿಸುವಂತಾಗಿದೆ.
ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ಕಾಲೇಜಿಗೆ ಹಾಜರ್
ಶಿರಸಿಗೆ ಬಂದು ನಿವೃತ್ತಿ ಜೀವನ ಕಳೆಯುತ್ತಿದ್ದರು. ಆದರೆ ಸುಮ್ಮನೆ ಮನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸಿವಿಲ್ ಡಿಪ್ಲೋಮಾ ಮಾಡಬೇಕೆಂಬ ಮಹಾದಾಸೆಯೊಂದಿಗೆ ಶಿರಸಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಬಯಸಿ 2019ರಲ್ಲಿ ದಾಖಲಾತಿ ಕೂಡ ಪಡೆದುಕೊಂಡರು. ನಿತ್ಯ ಕಾಲೇಜಿನ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ಕಾಲೇಜಿನ ತರಗತಿಗೆ ಹಾಜರಾಗಿ, ಕಿರಿಯವಿದ್ಯಾರ್ಥಿಗಳ ಜೊತೆಗೆ ಹೊಂದಿಕೊಂಡು, ಅವರಂತೆಯೇ ಕ್ಲಾಸಿನಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ನಾರಾಯಣ ಭಟ್ ಅವರು ಈ ಮೂರು ವರ್ಷದಲ್ಲಿ ಓದಿನಲ್ಲಿ ಸದಾ ಮುಂದೆ ಇರುತ್ತಿದ್ದರು.
71ನೇ ವಯಸ್ಸಿನಲ್ಲಿ 94.88% ಫಲಿತಾಂಶ ಗಳಿಕೆ
ಪ್ರತಿ ದಿನ ನೋಟ್ಸ್ ಬರೆಯುವುದು ಸೇರಿದಂತೆ ಇತರ ಕಾಲೇಜು ಕೆಲಸಗಳನ್ನು ಚಾಚೂ ತಪ್ಪದೇ ಮಾಡಿಕೊಂಡು ಬರುವ ಮೂಲಕ ನಾರಾಯಣ ಭಟ್ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಮೂರು ವರ್ಷಗಳ ಸಿವಿಲ್ ಡಿಪ್ಲೊಮಾ ಕೋರ್ಸ್ಗೆ ನಿತ್ಯ ತರಗತಿಗೆ ಹಾಜರಾಗಿ ಪ್ರಥಮ ವರ್ಷದಲ್ಲಿ ಶೇಕಡಾ 91ರಷ್ಟು ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದ ನಾರಾಯಣ ಭಟ್ ಅವರು, ಅಂತಿಮ ವರ್ಷದಲ್ಲಿ 94.88% ಫಲಿತಾಂಶ ದಾಖಲಿಸಿ ಇಂದಿನ ಯುವ ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ಸ್ವೀಕರಿಸುವ ಸಾಧನೆ ಮಾಡಿದ್ದಾರೆ.