ಉತ್ತರ ಕನ್ನಡದಲ್ಲಿ ಮಳೆ; ಸಮುದ್ರದಲ್ಲಿ ಮುಳುಗಿದ ಬೋಟು
ಹೊನ್ನಾವರ, ಫೆಬ್ರವರಿ 19; ಅರಬ್ಬಿ ಸಮುದ್ರದಲ್ಲಿ ಲಘು ವಾಯುಭಾರ ಕುಸಿತ ಉಂಟಾಗಿರುವ ಕಾರಣ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಸಹಿತ ಮಳೆಯಾಗಿದೆ. ಹೊನ್ನಾವರ ವ್ಯಾಪ್ತಿಯ ಕಡಲಿನಲ್ಲಿ ಬೋಟೊಂದು ಮುಳುಗಡೆಯಾಗಿದೆ.
ಶುಕ್ರವಾರ ಮಧ್ಯಾಹ್ನದ ಬಳಿಕ ಜಿಲ್ಲೆಯಲ್ಲಿ ಮಳೆ ಸುರಿದಿದ್ದು, ಕರಾವಳಿಯಾದ್ಯಂತ ಹಾಗೂ ಮಲೆನಾಡಿನ ಹಲವೆಡೆಯೂ ಮಳೆಯಾಗಿದೆ. ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ವೆಂಕಟರಮಣ ಅಂಬಿಗ ಎನ್ನುವವರ ದುರ್ಗಾ ಭೈರವಿ ಎನ್ನುವ ಬೋಟು ಮುಳುಗಡೆಯಾಗಿದೆ.
ಕುಮಟಾ ತಾಲೂಕಿನ ಗೋಕರ್ಣ ತದಡಿ ಬಂದರಿನಿಂದ 15 ಮಂದಿ ಮೀನುಗಾರರು ಎರಡು ದಿನದ ಹಿಂದೆ ಈ ಬೋಟಿನಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದ ನಡುವೆ ಲಂಗರು ಹಾಕಿ ಬೋಟನ್ನು ನಿಲ್ಲಿಸಿಟ್ಟು, ಇಂದು ಮೀನುಗಾರರೆಲ್ಲ ಮಲಗಿದ್ದ ವೇಳೆ ಏಕಾಏಕಿ ಬೋಟಿನಲ್ಲಿ ನೀರು ತುಂಬಿದೆ.

ಇದರಿಂದಾಗಿ ಬೋಟಿನಲ್ಲಿದ್ದವರು ರಕ್ಷಣೆಗೆ ಕೂಗಿಕೊಂಡಾಗ ಸಮೀಪದಲ್ಲೇ ಇದ್ದ ಸರ್ವಲಕ್ಷ್ಮಿ ಎಂಬ ಇನ್ನೊಂದು ಬೋಟಿನಲ್ಲಿದ್ದ ಮೀನುಗಾರರು ಮುಳುಗುತ್ತಿದ್ದ ಬೋಟಿನಲ್ಲಿದ್ದ ಎಲ್ಲಾ ಮೀನುಗಾರರನ್ನು ತಮ್ಮ ಬೋಟಿಗೆ ಹತ್ತಿಸಿಕೊಂಡು ತದಡಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಬಳಿಕ ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.












Click it and Unblock the Notifications