Zameer Ahmed: ವಕ್ಫ್ ವಿವಾದ, ಕರಿಯ ಕುಮಾರಸ್ವಾಮಿ! ಜಮೀರ್ ಅಹ್ಮದ್ರಿಂದಲೇ ಕಾಂಗ್ರೆಸ್ಗೆ ಸಂಕಷ್ಟ
ನವೆಂಬರ್ 13ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಕಾಂಗ್ರೆಸ್ ಮತ್ತು ಎನ್ಡಿಎ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರು, ಶಾಸಕರು ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣಕ್ಕಿಳಿದಿದ್ದು ಚುನಾವಣೆ ಮತ್ತಷ್ಟು ರಂಗೇರಿದೆ.
ಕಾಂಗ್ರೆಸ್ ಜನಪರ ಆಡಳಿತ ಕೊಟ್ಟಿದ್ದೇವೆ, ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಡುತ್ತೇವೆ, ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ರಾಜ್ಯವನ್ನು ಮುಳುಗಿಸಿದೆ. ಮುಡಾ ಹಗರಣ, ಅಬಕಾರಿ ಇಲಾಖೆ ಭ್ರಷ್ಟಾಚಾರ ಆರೋಪ ಸೇರಿ ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಜೆಡಿಎಸ್, ಬಿಜೆಪಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿವೆ.

ಇದೀಗ ಕಾಂಗ್ರೆಸ್ಗೆ ಹೊಸ ತಲೆನೋವು ಶುರುವಾಗಿದೆ. ಅದು ತನ್ನದೇ ಪಕ್ಷದ ಸಚಿವರಿಂದ ಎನ್ನುವುದು ವಿಶೇಷ. ಹೌದು, ವಕ್ಫ್ ವಿವಾದ ಇದೀಗ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಕಂಡ ಕಂಡ ಜಾಗವೆಲ್ಲಾ ನಂದೇ ಎನ್ನುವ ರೀತಿಯಲ್ಲಿ ವಕ್ಫ್ ರೈತರಿಗೆ, ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲ ದೇವಸ್ಥಾನದ ಜಾಗವೂ ನಂದೇ ಎಂದು ನೋಟಿಸ್ ಕೊಟ್ಟಿದೆ.
ವಕ್ಫ್ ವಿವಾದದಿಂದ ಸಂಕಷ್ಟ
ವಕ್ಫ್ ವಿವಾದ ಕಾಂಗ್ರೆಸ್ಗೆ ಸಂಕಷ್ಟ ತಂದೊಡ್ಡಿದೆ. ರೈತರ ಜಮೀನುಗಳಿಗೆ ವಕ್ಫ್ ಮಂಡಳಿ ನೋಟಿಸ್ ಕೊಟ್ಟ ಬಳಿಕ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಕ್ಫ್ ನೋಟಿಸ್ ವಿಚಾರದಲ್ಲಿ ಜಮೀರ್ ಅಹಮದ್ ನೀಡಿರುವ ಹೇಳಿಕೆಗಳು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿವೆ. ತೀವ್ರ ವಿರೋದಧ ಬಳಿಕ ಕೊಟ್ಟಿರುವ ನೋಟಿಸ್ ಹಿಂಪಡೆಯುವಂತೆ, ವಕ್ಫ್ ಬೋರ್ಡ್ನಿಂದ ಯಾವುದೇ ನೋಟಿಸ್ ಕೊಡದಂತೆ ಸರ್ಕಾರ ಆದೇಶ ಹೊರಡಿಸಿದೆ.
ಕರಿಯ ಕುಮಾರಸ್ವಾಮಿ
ವಕ್ಫ್ ವಿವಾದದ ಬಳಿಕ ಜಮೀರ್ ಅಹ್ಮದ್ ಖಾನ್ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಬಗ್ಗೆ ನೀಡಿರುವ ಹೇಳಿಕೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಚುನಾವಣಾ ಭಾಷಣದ ಸಮಯದಲ್ಲಿ 'ಕರಿಯ ಕುಮಾರಸ್ವಾಮಿ' ಎನ್ನುವ ಪದ ಬಳಕೆ ಮಾಡಿದ್ದು, ವಿಪಕ್ಷಗಳ ಕೈಗೆ ಹೊಸ ಅಸ್ತ್ರ ಕೊಟ್ಟಂತಾಗಿದೆ.
ಕರಿಯ ಕುಮಾರಸ್ವಾಮಿ ಎನ್ನುವ ಮೂಲಕ ಜಮೀರ್ ಅಹ್ಮದ್ ಖಾನ್ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಜೆಡಿಎಸ್ ಮಾತ್ರವಲ್ಲ ಕಾಂಗ್ರೆಸ್ ಕಾರ್ಯಕರ್ತರಿಗೂ ಜಮೀರ್ ಅಹಮದ್ ಹೇಳಿಕೆ ಅಸಮಾಧಾನ ಮೂಡಿಸಿದೆ. ಮೂರು ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿರುವ ಕಾಂಗ್ರೆಸ್ಗೆ ಜಮೀರ್ ಅಹಮದ್ ಹೇಳಿಕೆಗಳೇ ಮುಳ್ಳಾಗುವ ಆತಂಕ ಕೂಡ ಶುರುವಾಗಿದೆ.
ಹೇಳಿಕೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಜಮೀರ್ ಅಹ್ಮದ್, ನಾನು ಕುಮಾರಸ್ವಾಮಿ ಅವರನ್ನು ಪ್ರೀತಿಯಿಂದ ಕರಿಯಣ್ಣ ಅಂತೀನಿ ಅವರು ನನ್ನನ್ನು ಕುಳ್ಳ ಎನ್ನುತ್ತಾರೆ ಎಂದು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.












Click it and Unblock the Notifications