ಜೀವಾವಧಿ ಶಿಕ್ಷೆ ವಿಧಿಸಿ: ಅಮೂಲ್ಯ ವಿರುದ್ಧ ಜಮೀರ್ ಅಹ್ಮದ್ ಕಿಡಿ
ಬೆಂಗಳೂರು, ಫೆಬ್ರವರಿ 21: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಎಡಪಂಥೀಯ ಹೋರಾಟಗಾರ್ತಿ ಅಮೂಲ್ಯ ವರ್ತನೆಯನ್ನು ವಿವಿಧ ರಾಜಕೀಯ ಪಕ್ಷಗಳ ನಾಯಕರು ಪಕ್ಷಭೇದ ಮರೆತು ಖಂಡಿಸಿದ್ದಾರೆ.
ಯಾವುದೇ ರೀತಿಯ ಹೋರಾಟವಿರಲಿ, ಯಾವುದೇ ವಿಚಾರದ ವಿರುದ್ಧ ಪ್ರತಿಭಟನೆ ಇರಲಿ, ಆದರೆ ನಾವು ಭಾರತೀಯರು ಎನ್ನುವುದನ್ನು ಮರೆಯಬಾರದು. ನಮ್ಮ ಶತ್ರು ಎಂದೇ ಪರಿಗಣಿಸಿರುವ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವುದು ದೇಶದ್ರೋಹದ ಕೆಲಸ ಎಂದು ಟೀಕಿಸಿದ್ದಾರೆ.
ಯುವತಿಯೊಬ್ಬಳು ನಿನ್ನೆ ಬೆಂಗಳೂರಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಅಕ್ಷಮ್ಯ ಅಪರಾಧ. ಈ ನೆಲದ ಮಕ್ಕಳಾದ ನಮ್ಮೆಲ್ಲರ ಆದ್ಯತೆ ಮತ್ತು ಬದ್ಧತೆ ಭಾರತವೇ ಹೊರತು ಪಾಕಿಸ್ತಾನವಲ್ಲ. ಇಂತಹ ಹೇಯಕೃತ್ಯವನ್ನು ಭಾರತೀಯರಾದ ನಾವು ಎಂದಿಗೂ ಸಹಿಸುವುದಿಲ್ಲ. ಈ ಪ್ರಕರಣದ ಸೂಕ್ತ ತನಿಖೆ ನಡೆಸಿ, ಜೀವಾವಧಿ ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ,

ಆಘಾತಕಾರಿ ವಿಚಾರ
ನಮ್ಮ ಬೆಂಗಳೂರಿನಲ್ಲಿ ಒಂದು ವಿದ್ಯಾರ್ಥಿನಿಯಿಂದ ಸದಾ ಭಾರತದ ಅಧಃಪತನವನ್ನು ಬಯಸುವ ರಾಷ್ಟ್ರವಾದ ಪಾಕಿಸ್ತಾನಕ್ಕೆ ಜೈಕಾರ ಬಂದಿದೆ ಎಂಬುದು ಒಂದು ಆಘಾತಕಾರಿ ವಿಚಾರ. ಅಂತಹ ದೇಶದ್ರೋಹಿ ಹೇಳಿಕೆಗಳನ್ನು ಖಂಡಿಸುತ್ತೇನೆ. ಈ ರೀತಿ ಬೆಳವಣಿಗೆಗಳನ್ನು ಯಾರೂ ಬೆಂಬಲಿಸಬಾರದು. ಸಮಾಜದ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಖಂಡನೀಯ ನಡವಳಿಕೆ
ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯ ನಡವಳಿಕೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಆಕೆಗೆ ತನ್ನ ತಪ್ಪಿನ ಅರಿವಾಗುವಂತಹ ಶಿಕ್ಷೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಾತಾಡಲು ಅವಕಾಶ ಕೊಡಬೇಕಿತ್ತು
ಇನ್ನೂ ಏನ್ ಹೇಳ್ತಿದ್ದಳು ಎನ್ನುವುದಕ್ಕೆ ಅವಕಾಶ ಕೊಡಬೇಕಿತ್ತು. ಆಕೆಯ ಭಾಷಣಗಳನ್ನು ನೋಡಿದ್ದೆ, ಅಂತಹದನ್ನ ಕೇಳಿರಲಿಲ್ಲ. ಇದರ ಬಗ್ಗೆ ನನಗೆ ಇನ್ನೂ ಕೆಲವು ಸ್ಪಷ್ಟನೆಗಳು ಬೇಕಿದೆ. ಹಾಗಾಗಿ ಇದರ ಬಗ್ಗೆ ನಾನು ಹೆಚ್ಚಾಗಿ ಕಾಮೆಂಟ್ ಮಾಡುವುದಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಕ್ಸಲರೊಂದಿಗೆ ಸಂಪರ್ಕವಿತ್ತು
ಅಮೂಲ್ಯಳಿಗೆ ನಕ್ಸಲರೊಂದಿಗೆ ಸಂಪರ್ಕವಿತ್ತು ಎನ್ನುವುದು ಈಗ ಸಾಬೀತಾಗಿದೆ. ಆಕೆಗೆ ಜಾಮೀನು ನೀಡಬಾರದು. ಆಕೆಯನ್ನು ರಕ್ಷಿಸುವುದಿಲ್ಲ ಎಂದು ಆಕೆಯ ತಂದೆಯೇ ಹೇಳಿದ್ದಾರೆ. ಆಕೆಗೆ ಸೂಕ್ತ ಶಿಕ್ಷೆ ನೀಡಬೇಕು. ಆಕೆಯ ಹಿಂದಿರುವ ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ರೀತಿಯ ಹೇಳಿಕೆಗಳನ್ನು ನೀಡಲು ಪ್ರಚೋದನೆ ನೀಡುವ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳದೆ ಹೋದರೆ ಅವರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಪರದೆ ಹಿಂದೆ ನೈಜ ಆಟಗಾರರು
ಸಿಎಎ ವಿರೋಧಿ ಪ್ರತಿಭಟನೆಗಳು ದೇಶ ವಿರೋಧಿ ಪ್ರಕರಣಗಳಾಗಿ ಬದಲಾಗುತ್ತಿವೆ. ಅವಳು ಅದರಲ್ಲಿ ಒಂದು ಮುಖವಷ್ಟೇ. ನೈಜ ಆಟಗಾರರು ಪರದೆ ಹಿಂದೆ ಇದ್ದಾರೆ. ತೀವ್ರಗೊಂಡಿರುವ ದೇಶ ವಿರೋಧಿ ಚಟುವಟಿಕೆಗಳ ಪರಿಸರ ವ್ಯವಸ್ಥೆಯನ್ನು ತುಂಡರಿಸಲು ಇದು ಸೂಕ್ತ ಸಮಯ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.












Click it and Unblock the Notifications