ಬಾಗಲಕೋಟೆ: ಭಯೋತ್ಪಾದಕರ ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಬಾಗಲಕೋಟೆ, ಡಿಸಂಬರ್ 16: ಭಯೋತ್ಪಾದಕರು ಕಾಟ ಕೊಡುತ್ತಿದ್ದಾರೆಂದು ಆರೋಪಿಸಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗಜೇಂದ್ರಗಡದಲ್ಲಿ ನಡೆದಿದೆ.
ಮೈಸೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ಶರಣಪ್ಪ ಹುನಗುಂದ ಎಂಬ ಯುವಕ ತನಗೆ ಭಯೋತ್ಪಾದಕರು ಉಗ್ರಗಾಮಿಯಾಗುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಆದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕಿದ ಕಾರಣ ಜೀವಕ್ಕೆ ಯಾವುದೇ ಹಾನಿಯಾಗಿಲ್ಲ.
'ಮೈಸೂರಿನಲ್ಲಿದ್ದಾಗ ಕೆಲವು ಮುಸ್ಲಿಂ ವ್ಯಕ್ತಿಗಳು ನನ್ನನ್ನು ಭೇಟಿ ಆಗಿದ್ದರು, ಅವರು ಪದೇ ಪದೇ ನನಗೆ ಮೇಲ್ ಮಾಡಿ ಭೇಟಿ ಆಗುವಂತೆ ಹೇಳುತ್ತಿದ್ದರು, ಭೇಟಿ ಆದಾಗ ನನ್ನನ್ನು ಭಯೋತ್ಪಾದಕನಾಗುವಂತೆ ಒತ್ತಾಯ ಹೇರುತ್ತಿದ್ದರು ಎಂದು ಶರಣಪ್ಪ ಮರಣ ಪತ್ರದಲ್ಲಿ ಬರೆದಿದ್ದಾನೆ.
'ನಾನು ಓದುತ್ತಿರುವ ಕಾಲೇಜಿಗೆ ಬಾಂಬ್ ಇಡಲು ನನಗೆ ಸೂಚಿಸಿದ್ದರು, ಹೇಳಿದ ರೀತಿ ಕೇಳದಿದ್ದರೆ ನನ್ನ ಕುಟುಂಬದವರನ್ನು ಕೊಲ್ಲುವುದಾಗಿ ಅವರು ಬೆದರಿಕೆ ಹಾಕಿದ್ದರು ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಆತ ಡೆತ್ ನೋಟ್ನಲ್ಲಿ ಬರೆದಿದ್ದಾನೆ.
ಆದರೆ ಆತನ ಕುಟುಂಬದವರೇ ಇದನ್ನು ಅಲ್ಲಗಳೆದಿದ್ದು, ಆತನ ಅಣ್ಣ 'ಶರಣಪ್ಪ ಹೇಳುತ್ತಿರುವುದು ಸುಳ್ಳು ಆತನಿಗೆ ಯಾವುದೇ ರೀತಿಯ ಭಯೋತ್ಪಾದಕರೊಂದಿಗೆ ಸಂಪರ್ಕ ಇಲ್ಲ ಎಂದಿದ್ದಾರೆ.
ಶರಣಪ್ಪನಿಗೆ ಮಾನಸಿಕ ಅಸ್ವಸ್ಥತೆ ಇದ್ದು ಹಾಗಾಗಿ ಆತ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ ಆತನಿಗೆ ಯಾವುದೇ ಭಯೋತ್ಪಾದ ತಂಡದೊಂದಿಗೆ ಸಂಪರ್ಕ ಇಲ್ಲ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರು ಸ್ಪಷ್ಟಪಡಿಸಿದ್ದಾರೆ.
ಶರಣಪ್ಪ ಎಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಫೇಲ್ ಆಗಿರುವ ಕಾರಣ ಮನೆಯವರ ಕೈಲಿ ಬೈಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಭಯೋತ್ಪಾದಕರ ಕತೆ ಕಟ್ಟಿದ್ದಾನೆ ಎಂದು ಆತನ ಗೆಳೆಯರು ಹೇಳಿದ್ದಾರೆ.
ಶರಣಪ್ಪ ಹುನಗುಂದ ನಿಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಜೀವಕ್ಕೆ ಯಾವುದೇ ಹಾನಿ ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.