ಮಲ್ಲಮ್ಮ ಭೇಟಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ವಿಜಯಪುರ, ಡಿಸೆಂಬರ್ 20 : ಧಾರವಾಡದಲ್ಲಿ ಹತ್ಯೆಯಾದ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಮಲ್ಲಮ್ಮ ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಲ್ಲಮ್ಮ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದರು. ಬಿಜೆಪಿಯವರು ತಮಗೆ ಕಿರುಕುಳ ನೀಡುತ್ತಿದ್ದಾರೆ. ರಕ್ಷಣೆ ನೀಡಿ ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಪರಿಷತ್ತಿನಲ್ಲಿ ಕಾವೇರಿದ ಚರ್ಚೆ : ಹತ್ಯೆಯಾದ ಯೋಗೇಶ್ ಗೌಡ ಯಾರು?
ಮಲ್ಲಮ್ಮ ಭೇಟಿ ಬಗ್ಗೆ ವಿಜಯಪುರದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. 'ಈ ತರಹ ಹೇಳಿಕೆ ಕೊಡಿ, ಆ ಥರ ಹೇಳಿಕೆ ಕೊಡಿ ಎಂದು ಬಿಜೆಪಿಯವರು ನನಗೆ ಕಿರುಕುಳ ನೀಡುತ್ತಿದ್ದಾರೆ' ಎಂದು ಮಲ್ಲಮ್ಮ ಹೇಳಿದ್ದಾರೆ ಎಂದರು.
'ರಕ್ಷಣೆ ನೀಡಬೇಕು ಎಂದು ಮಲ್ಲಮ್ಮ ಮನವಿ ಮಾಡಿದ್ದಾರೆ. ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದೇನೆ. ಬೇರೆ ಯಾವುದೇ ಬೇಡಿಕೆಯನ್ನು ಅವರು ಇಟ್ಟಿಲ್ಲ' ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಯೋಗೀಶ್ ಗೌಡ ಹತ್ಯೆ: ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರು
'ಕಾಂಗ್ರೆಸ್ ಸೇರುತ್ತೇನೆ ಎಂದು ಮಲ್ಲಮ್ಮ ಹೇಳಿದರು. ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಹೋಗಿ ಅರ್ಜಿ ಕೊಡಿ ಎಂದು ಸೂಚಿಸಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದರು.
ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ನಾಯಕ ಯೋಗೀಶ್ ಗೌಡ ಅವರನ್ನು ಜೂನ್ 15, 2016ರಂದು ಹತ್ಯೆ ಮಾಡಲಾಗಿತ್ತು. ಬೆಳ್ಳಂಬೆಳಗ್ಗೆ ಜಿಮ್ನಲ್ಲಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.