ಮತ್ತೊಂದು ವಿವಾದ ಹುಟ್ಟುಹಾಕಿದ ಯೋಗೇಶ್ ಮಾಸ್ಟರ್
ದಾವಣಗೆರೆ, ಫೆ.9 : ಢುಂಡಿ' ಕೃತಿಕಾರ ಯೋಗೇಶ್ ಮಾಸ್ಟರ್ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಶನಿವಾರ ದಾವಣಗೆರೆಯಲ್ಲಿ ಮಾತನಾಡಿದ ಅವರು, ಹಿಂದೂ ಎಂಬುದು ಧರ್ಮವಲ್ಲ, ಪುರಾಣಗಳಲ್ಲೂ ಅದರ ಪ್ರಸ್ತಾಪವಿಲ್ಲ. ವೈದಿಕ ಬ್ರಾಹ್ಮಣರು ಬಸವಣ್ಣನ ದೇಹವನ್ನು ನಾಶ ಮಾಡಿದರೆ, ಚಡ್ಡಿ ತೊಟ್ಟ ಲಿಂಗಾಯತರು ಬಸವಣ್ಣನ ಆತ್ಮವನ್ನೇ ನಾಶ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಶನಿವಾರ ದಾವಣಗೆರೆಯಲ್ಲಿ "ಕರ್ನಾಟಕ ಕೋಮು ಸೌಹಾರ್ದ ವೇದಿಕೆ"ಯ ವತಿಯಿಂದ "ಮಂಕು ಬೂ(ಮೋ) ದಿ" ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿತ್ತು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ, ಯೋಗೇಶ್ ಮಾಸ್ಟರ್, ಹಿಂದೂ ಧರ್ಮ ಧರ್ಮವೇ ಅಲ್ಲ. ಪುರಾಣಗಳಲ್ಲೂ ಈ ಧರ್ಮದ ಯಾವುದೇ ಪ್ರಸ್ತಾಪವಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು.

ಲಿಂಗಾಯತ ಧರ್ಮ ಎಂಬುದು ವೈದಿಕ ಬ್ರಾಹ್ಮಣರ ವಿರುದ್ಧದ ಚಳವಳಿಯಾಗಿತ್ತು. ಬಸವಣ್ಣನ ದೇಹ ನಾಶಕ್ಕೆ ಕಾರಣರಾದ ವೈದಿಕರಿಂದ ದೂರವುಳಿಯಬೇಕಿದ್ದ ಲಿಂಗಾಯತರು ಪೈಪೋಟಿಗೆ ಬಿದ್ದಂತೆ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಚಡ್ಡಿ ತೊಟ್ಟು ಬಸವಣ್ಣನ ಆತ್ಮ ನಾಶ ಮಾಡಲು ಹೊರಟಿದ್ದಾರೆ ಎಂದು ಕಟುವಾಗಿ ಟೀಕಿಸಿದರು. [ಯೋಗೇಶ್ ಮಾಸ್ಟರ್ ಯಾರು?]
ಸಂಸ್ಕೃತಿ, ಪರಂಪರೆಯ ಭಾಗವಾಗಿರುವ ರಾಮಾಯಣ, ಮಹಾಭಾರತ ಕೇವಲ ಮಹಾಕಾವ್ಯಗಳೇ ಹೊರತು ಪವಿತ್ರ ಧರ್ಮ ಗ್ರಂಥಗಳಲ್ಲ. ಶೂರ್ಪನಖೀಯನ್ನು ಅವಮಾನಿಸಿ, ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಿದ ಶ್ರೀರಾಮ ಸಂಘ ಪರಿವಾರದವರಿಗೆ ಮಾದರಿಯಾಗಿರುವುದು ದುರಂತ ಎಂದು ಅಭಿಪ್ರಾಯಪಟ್ಟರು.[ಢುಂಡಿ ಪುಸ್ತಕ ವಿವಾದ]
ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ : ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಯೋಗೇಶ್ ಮಾಸ್ಟರ್ ವಿರುದ್ಧ ಬಿಜೆಪಿ ಮತ್ತು ನಮೋ ಬ್ರಿಗೇಡ್ ಕಾರ್ಯಕರ್ತರು ದಿಡೀರ್ ಪ್ರತಿಭಟನೆ ನಡೆಸಿದರು. ಯೋಗೇಶ್ ಮಾಸ್ಟರ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ದೂರು ನೀಡಿದರೆ ಬಂಧಿಸುವುದಾಗಿ ಪ್ರತಿಭಟನಾಕಾರರಿಗೆ ಹೇಳಿದರು. ಬಿಜೆಪಿ ಹಾಗೂ ನಮೋ ಬ್ರಿಗೇಡ್ ಕಾರ್ಯಕರ್ತರು ಯೋಗೇಶ್ ಮಾಸ್ಟರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.












Click it and Unblock the Notifications