ಶಾಸಕ ಮುನಿರತ್ನ ರಾಜೀನಾಮೆ ಪತ್ರ ಹರಿದು ಹಾಕಿದ ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 6: ರಾಜ್ಯ ರಾಜಕೀಯ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದ್ದು, ರಾಜೀನಾಮೆ ನೀಡಿದ ಶಾಸಕರು ಟೆಂಪೋ ಟ್ರಾವೆಲ್ ಮೂಲಕ, ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಶಾಸಕರ ಪ್ರಯಾಣ ಎತ್ತ ಎನ್ನುವ ಖಚಿತ ಮಾಹಿತಿ ಸದ್ಯಕ್ಕೆ ಇಲ್ಲದಿದ್ದರೂ, ಮುಂಬೈನತ್ತ ಎಂದು ಹೇಳಲಾಗುತ್ತಿದೆ.
ಈ ನಡುವೆ, ರಾಜೀನಾಮೆ ನೀಡುವ ಶಾಸಕರ ಜೊತೆ, ಯಶವಂತಪುರದ ಕಾಂಗ್ರೆಶ್ ಶಾಸಕ, ಮುನಿರತ್ನ ನಾಯ್ಡು ಕಾಣಿಸಿಕೊಂಡಿದ್ದು ಪಕ್ಷಕ್ಕೆ ಭಾರೀ ಆಶ್ಚರ್ಯವನ್ನು ತಂದಿತ್ತು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ಡಿ ಕೆ ಶಿವಕುಮಾರ್, ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿ, ವಿಧಾನಸೌಧದತ್ತ ದೌಡಾಯಿಸಿದ್ದರು.
ಅಲ್ಲಿ ಎಲ್ಲಾ ಅತೃಪ್ತ ಶಾಸಕರ ಜೊತೆ ಮಾತನಾಡುತ್ತಾ ಡಿ ಕೆ ಶಿವಕುಮಾರ್, ರಾಜೀನಾಮೆ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಮುನಿರತ್ನ ಅವರಿಂದ ಪತ್ರವನ್ನು ತೆಗೆದುಕೊಂಡು, ಅದನ್ನು ಹರಿದು ಹಾಕಿದ್ದಾರೆ.

ತನ್ನ ಸಂಧಾನ ವಿಫಲವಾದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಡಿ ಕೆ ಶಿವಕುಮಾರ್, ಹೋಗುವವರನ್ನು ತಡೆಯಲು ಸಾಧ್ಯವೇ ಎನ್ನುತ್ತಾ, ಮುನಿರತ್ನ ರಾಜೀನಾಮೆ ಪತ್ರ ಹರಿದು ಹಾಕಿದ್ದನ್ನು ಒಪ್ಪಿಕೊಂಡಿದ್ದಾರೆ.
ಹೌದು ನಾನು ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದೇನೆ. ನನ್ನ ಮತ್ತು ಮುನಿರತ್ನ ಒಡನಾಟ ಮೂವತ್ತು ವರ್ಷದ್ದು, ನಮ್ಮಿಬ್ಬರ ನಡುವೆ ಭಾವನಾತ್ಮಕ ಸಂಬಂಧವಿದೆ ಎಂದು ಪತ್ರ ಹರಿದು ಹಾಕಿದ್ದನ್ನು ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ.
ರಾಜೀನಾಮೆ ಪತ್ರ ಹರಿದು ಹಾಕಿದ ವಿಚಾರದಲ್ಲಿ ಮುನಿರತ್ನ ಪೊಲೀಸರಿಗೆ ದೂರು ಬೇಕಾದರೆ ನೀಡಲಿ, ಜೈಲು ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ. ಈಗಾಗಲೇ ನನ್ನ ಮೇಲೆ ಏನು ನಡೆಯುತ್ತಿದೆ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications