ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!
ಬೆಂಗಳೂರು, ಜು. 20: ಸುಮಾರು 20ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಯ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಈ ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದ ಮಠಾಧೀಶರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚರ್ಚೆ ನಡೆಸಿದರು. ಆದರೆ ಮಠಾಧೀಶರೊಂದಿಗೆ ಮಾತನಾಡುವಾಗ ಸಿಎಂ ಯಡಿಯೂರಪ್ಪ ಅವರು ಹಂಚಿಕೊಂಡಿರುವ ಸಂಗತಿ ತೀವ್ರ ಚರ್ಚೆಗೆ ಕಾರಣವಾಗಿದೆ.
ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ 20 ಮಠಾಧೀಶರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಮಾತನಾಡಿರುವ ದಿಂಗಾಲೇಶ್ವರ ಸ್ವಾಮೀಜಿ ಅವರು, "ಯಡಿಯೂರಪ್ಪ ಇದ್ದಾಗ ಮಾತ್ರ ಬದಲಾವಣೆ ಪ್ರಶ್ನೆ ಉದ್ಭವ ಆಗುತ್ತಿರೋದು ಯಾಕೆ?" ಎಂದು ಪ್ರಶ್ನೆ ಮಾಡಿದ್ದಾರೆ.
ವಿವಿಧ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. @BSYBJP pic.twitter.com/iJD8fC2JXT
— oneindiakannada (@OneindiaKannada) July 20, 2021
ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ವಿಷಯಗಳನ್ನು ಮಾಧ್ಯಮಗಳೊಂದಿಗೆ ಮಠಾಧೀಶರು ಹಂಚಿಕೊಂಡಿದ್ದು, "ಹೈಕಮಾಂಡ್ ತೀರ್ಮಾನವೇ ಅಂತಿಮ. ಅವರು ಏನ್ ಹೇಳ್ತಾರೋ ಹಾಗೇ ಕೇಳ್ತೇನೆ ಎಂದಿದ್ದಾರೆ ಸಿಎಂ ಯಡಿಯೂರಪ್ಪ ಅವರು. ಆದರೆ ಹೈಕಮಾಂಡ್ ಸಿಎಂ ಬದಲಾವಣೆ ಮಾಡಬಾರದು ಅನ್ನೋದು ನಮ್ಮ ಒತ್ತಾಯ" ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಯಾವ ಸೂಚನೆ ಕೊಟ್ಟಿದೆ ಎಂಬ ಚರ್ಚೆ ಶುರುವಾಗಿದೆ.

"ಇಲ್ಲಿ ಲಿಂಗಾಯತರ ಪ್ರಶ್ನೆ ಬರಲ್ಲ. ಪ್ರಶ್ನೆ ಇರೋದು ಯಡಿಯೂರಪ್ಪ ಅವರು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ, ಪರಿಶ್ರಮ ಪಟ್ಟಿದಾರೆ ಎಂಬುದು. ಯಡಿಯೂರಪ್ಪ ಇದ್ದಾಗ ಮಾತ್ರ ಬದಲಾವಣೆ ಪ್ರಶ್ನೆ ಉದ್ಭವ ಆಗುತ್ತಿರೋದು ಯಾಕೆ? ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಮಠಾಧೀಶರೆಲ್ಲ ಸೇರಿ ಸಭೆ ಮಾಡುತ್ತೇವೆ. ಐದಾರು ನೂರು ಮಠಾಧೀಶರು ಬಹುದೊಡ್ಡ ಸಭೆ ನಡೆಸುತ್ತೇವೆ. ಆ ಸಭೆ ಬಳಿಕ ನಾವು ಮುಂದಿನ ತೀರ್ಮಾನ ಮಾಡುತ್ತೇವೆ" ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿಕೆ ಕೊಟ್ಟಿದ್ದಾರೆ.
ಆದರೆ ಯಡಿಯೂರಪ್ಪ ಅವರು ಹೈಕಮಾಂಡ್ ಹೇಳಿದಂತೆ ಮಾಡುತ್ತೇನೆ ಎಂದು ಮಠಾಧೀಶರಿಗೆ ಹೇಳಿರುವುದು ಬಿಜೆಪಿಯಲ್ಲಿ ಚರ್ಚೆ ಹುಟ್ಟುಹಾಕಿದೆ. ಹೀಗಾಗಿ ಜುಲೈ 26ರಂದು ಸಿಎಂ ಯಡಿಯೂರಪ್ಪ ಅವರು ಬದಲಾಗುತ್ತಾರಾ? ಎಂಬ ಚರ್ಚೆ ತೀವ್ರವಾಗಿದೆ.












Click it and Unblock the Notifications