ಏನೂ ಭಯ ಪಡದೇ ಸಂಪುಟ ವಿಸ್ತರಣೆ ಮಾಡಿ: ಸಿಎಂ ಬಿಎಸ್ವೈಗೆ ಜೆಡಿಎಸ್ ಅಭಯ
ಬಿಜೆಪಿ ವರಿಷ್ಠ ಅಮಿತ್ ಶಾ ಅವರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಅನುಮತಿ ಏನೋ ಸಿಕ್ಕಿದೆ. ಆದರೆ, ಕೆಲವರನ್ನು ಸಮಾಧಾನ ಪಡಿಸುವುದೇ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಒಂದು ಕಡೆ ಸೋತವರಿಗೂ ಸಚಿವ ಸ್ಥಾನ ನೀಡಬೇಕು ಎನ್ನುವ ವಿಚಾರದಲ್ಲಿ ಎಚ್.ವಿಶ್ವನಾಥ್ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವುದು, "ಯಡಿಯೂರಪ್ಪನವರ ಮನಸ್ಸಿನಲ್ಲಿ ನಾವಿದ್ದೇವೆ" ಎಂದು ಎಂ.ಟಿ.ಬಿ ನಾಗರಾಜ್ ಹೇಳಿರುವುದು ಬಿಎಸ್ವೈ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಅತ್ತ ದೆಹಲಿಯಲ್ಲಿ ಯಡಿಯೂರಪ್ಪ: ಇತ್ತ ಬೆಂಗಳೂರಿನಲ್ಲಿ ಏನೇನೋ ಸುದ್ದಿ
ಈ ಎಲ್ಲಾ ಜಂಜಾಟದ ನಡುವೆ, ಜೆಡಿಎಸ್ ಶಾಸಕರೊಬ್ಬರು, ಮುಖ್ಯಮಂತ್ರಿಗಳಿಗೆ ಅಭಯ ನೀಡಿದ್ದು, "ಏನೂ ಭಯ ಪಡದೇ ಸಂಪುಟ ವಿಸ್ತರಣೆ ಮಾಡಿ" ಎಂದು ಹೇಳಿರುವುದು, ಸಂಚಲನ ಮೂಡಿಸಿದೆ.
ಸಂಪುಟ ವಿಸ್ತರಣೆಯ ಹೊಸ್ತಿಲಲ್ಲಿ ವಿಶ್ವನಾಥ್ ಸಿಡಿಸಿದ ಹೊಸ ಬಾಂಬ್
ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಹೆಸರುವಾಸಿಯಾಗಿರುವ ಪ್ರಶಾಂತ್ ಕಿಶೋರ್ ಅವರ ಜೊತೆ, ಕುಮಾರಸ್ವಾಮಿ ಮಾತುಕತೆ ನಡೆಸುತ್ತಾರೆ ಎನ್ನುವ ಸುದ್ದಿಯ ನಡುವೆ, ಜೆಡಿಎಸ್ ಶಾಸಕರ ಹೇಳಿಕೆ, ಪಕ್ಷಕ್ಕೆ ಇರಿಸುಮುರಿಸು ತಂದಿದೆ.
ಬಿಎಸ್ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಸುರೇಶ್ ಗೌಡ
ಈ ಹಿಂದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ, ಯಡಿಯೂರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಸುರೇಶ್ ಗೌಡ, ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರಲಿದ್ದಾರೆಯೇ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿತ್ತು. "ಸಿಎಂ ಯಡಿಯೂರಪ್ಪನವರು ಹಿರಿಯರು, ಹೀಗಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೇನೆ. ಅವರ ಜಾಗದಲ್ಲಿ ಸಿದ್ದರಾಮಯ್ಯ ಇದ್ದಿದ್ದರೂ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ" ಎಂದು ಅವರು ಸ್ಪಷ್ಟನೆಯನ್ನು ನೀಡಿದ್ದರು.
ಯಡಿಯೂರಪ್ಪನವರ ಸರ್ಕಾರವನ್ನು ಬೀಳುವುದಕ್ಕೆ ಬಿಡುವುದಿಲ್ಲ
ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಸುರೇಶ್ ಗೌಡ, "ಯಾವುದೇ ಕಾರಣಕ್ಕೂ ನಾವು ಯಡಿಯೂರಪ್ಪನವರ ಸರ್ಕಾರವನ್ನು ಬೀಳುವುದಕ್ಕೆ ಬಿಡುವುದಿಲ್ಲ. ಅವರು ಯಾವುದೇ ತೊಂದರೆಯಿಲ್ಲದೇ ಇನ್ನುಳಿದ ಅವಧಿಗೆ ಸರಕಾರ ಮುನ್ನಡೆಸಬಹುದು" ಎಂದು ಹೇಳಿದ್ದಾರೆ.
ಯಡಿಯೂರಪ್ಪನವರಿಗೆ ಅಭಯ ನೀಡುತ್ತಿದ್ದೇವೆ
"ನಾವು ಈ ಮೂಲಕ ಯಡಿಯೂರಪ್ಪನವರಿಗೆ ಅಭಯ ನೀಡುತ್ತಿದ್ದೇವೆ. ಅವರಿಗೆ ಧೈರ್ಯ ತುಂಬುತ್ತೇವೆ, ಜೊತೆಗೆ, ಅವರ ಬೆನ್ನಿಗೆ ನಿಲ್ಲುತ್ತೇವೆ. ಈಗಿನ ಪರಿಸ್ಥಿತಿಯಲ್ಲಿ ಜನರಿಗಾಗಲಿ ಅಥವಾ ಯಾವುದೇ ಶಾಸಕರಿಗಾಗಲಿ ಮಧ್ಯಂತರ ಚುನಾವಣೆ ಬೇಕಾಗಿಲ್ಲ" ಎಂದು ಸುರೇಶ್ ಗೌಡ ಹೇಳಿದ್ದಾರೆ.
ಸುರೇಶ್ ಗೌಡ ಅವರನ್ನು ಬಿಜೆಪಿ ಸಂಪರ್ಕಿಸಿತ್ತು ಎಂದು ಎಚ್ಡಿಕೆ ಹೇಳಿದ್ದರು
ಸಚಿವ ಸ್ಥಾನದ ಹಂಚಿಕೆಯಲ್ಲಿ ಕೊಂಚ ಎಡವಟ್ಟಾದರೂ ಬಿಎಸ್ವೈ ನೇತೃತ್ವದ ಸರಕಾರ ಪತನಗೊಳ್ಳುವ ಸಾಧ್ಯತೆಯ ನಡುವೆ, ಜೆಡಿಎಸ್ ಶಾಸಕರೊಬ್ಬರು ನೀಡಿರುವ ಹೇಳಿಕೆ, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಹಿಂದೊಮ್ಮೆ, ಆಪರೇಶನ್ ಕಮಲದ ವೇಳೆ, ಸುರೇಶ್ ಗೌಡ ಅವರನ್ನು ಬಿಜೆಪಿ ಸಂಪರ್ಕಿಸಿತ್ತು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದನ್ನು, ಇಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ.