JDS-BJP ವಿಲೀನ: ಬಿಜೆಪಿ ನಾಯಕರಲ್ಲಿ ಸಿಎಂ ಯಡಿಯೂರಪ್ಪ ಮನವಿ!
ಬೆಂಗಳೂರು, ಡಿ. 21: ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ವಿಳಿನದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ಮಹತ್ವದ ಹೇಳಿಕೆ ನೀಡಿದ್ದಾರೆ. ಅಧಿಕೃತ ನಿವಾಸ ಕಾವೇರಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಜೆಡಿಎಸ್ ಪಕ್ಷವು ಮಾಜಿ ಪ್ರಧಾನಿ ದೇವೇಗೌಡರು ಕಟ್ಟಿರುವ ಪಕ್ಷ. ಮಾಜಿ ಸಿಎಂ ಕುಮಾರಸ್ವಾಮಿ ಆ ಪಕ್ಷದ ಶಾಸಕಾಂಗ ಪಕ್ಷದ ನಾಯಕರು. ಆ ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ತರಲು ಪ್ರಯತ್ನವನ್ನು ಕುಮಾರಸ್ವಾಮಿ ಅವರು ಮಾಡುತ್ತಿದ್ದಾರೆ. ಆ ಪಕ್ಷ ವಿಲೀನ ಆಗುತ್ತದೆ ಅಂತಾ ಮಾತಾಡೋದು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ ಎಂದು ಹೇಳಿದ್ದಾರೆ.
ಈ ರೀತಿ ನಾನೂ ಮಾತಾಡಲು ಸಿದ್ಧವಿಲ್ಲ. ಬೇರೆ ಯಾರೂ ಕೂಡಾ ಮಾತಾಡಬಾರದು. ವಿಧಾನ ಪರಿಷತ್ ನಲ್ಲಿ ಸಭಾಪತಿ ಇಳಿಸುವ ವಿಚಾರದಲ್ಲಿ ಸಹಕಾರ ಕೇಳಿದ್ದೆವು, ಸಹಕಾರ ಕೊಟ್ಟಿದ್ದಾರೆ. ಇನ್ನು ಮುಂದೆಯೂ ಅಗತ್ಯವಿದ್ದ ಸಮಯದಲ್ಲಿ ನಮಗೆ ಸಹಕಾರ ಕೊಡಬಹುದು ಎಂದು ಬಿಎಸ್ವೈ ಹೇಳಿದ್ದಾರೆ.
Recommended Video
ಅವರು ಅವರ ಪಕ್ಷವನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ವಿಲೀನ ಆಗ್ತಾರೆ ಅಂತಾ ಹೇಳೋದು ಶೋಭೆ ತರುವುದಿಲ್ಲ. ವಿಲೀನದ ಪ್ರಶ್ನೆ ಈಗ ಇಲ್ಲ. ಇನ್ನೂ ಚುನಾವಣೆಗೆ ಎರಡೂವರೆ ವರ್ಷ ಇದೆ. ನಮ್ಮ ಪಾಡಿಗೆ ನಾವು ಪಕ್ಷ ಕಟ್ಟುತ್ತೇವೆ, ಅವರ ಪಾಡಿಗೆ ಅವರು ಪಕ್ಷ ಕಟ್ಟುತ್ತಾರೆ. ಯಾರೂ ಆ ರೀತಿ ಮಾತಾಡಬಾರದು. ನಮ್ಮ ಪಕ್ಷದಲ್ಲಿಯೂ ಯಾರೂ ಆ ರೀತಿ ಮಾತಾಡಬಾರದು ಎಂದು ಯಡಿಯೂರಪ್ಪ ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.