ಸಿಹಿ ಸುದ್ದಿ: ಕನ್ನಡಿಗರಿಗೆ 75% ಉದ್ಯೋಗ ಮೀಸಲಾತಿಗೆ ಶೀಘ್ರದಲ್ಲೇ ಆದೇಶ
ಬೆಂಗಳೂರು, ಫೆಬ್ರವರಿ 07: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬುದು ಕನ್ನಡಿಗರ ಬಹುದಿನಗಳ ಪ್ರಬಲ ಒತ್ತಾಯ. ಈ ಬೇಡಿಕೆ ಕೆಲವೇ ದಿನಗಳಲ್ಲಿ ಈಡೇರುವ ಸಾಧ್ಯತೆ ಇದೆ.
ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಎರಡರಲ್ಲೂ ಕನ್ನಡಿಗರಿಗೆ 75% ಮೀಸಲಾತಿ ಕೊಡುವ ಹೊಸ ಆದೇಶವನ್ನು ಹೊರಡಿಸಲು ಯಡಿಯೂರಪ್ಪ ಸಕಲ ತಯಾರಿ ನಡೆಸಿದೆ.
ಕಾಯ್ದೆ ಜಾರಿಯಾದರೆ ಖಾಸಗಿ ವಲಯಗಳಲ್ಲಿಯೂ ಕನ್ನಡಿಗರಿಗೆ ಶೇ 75% ಉದ್ಯೋಗ ನೀಡಲೇ ಬೇಕಾಗುತ್ತದೆ. ಯಡಿಯೂರಪ್ಪ ಅವರ ಈ ಹೊಸ ಕಾಯ್ದೆಯು ಕನ್ನಡಿಗರಿಗೆ ಉದ್ಯೋಗ ನೀಡುವ ಜೊತೆಗೆ, ಕನ್ನಡಿಗರು ಉದ್ಯೋಗ ಅರಸಿ ಬೇರೆಡೆ ಹೋಗುವುದನ್ನು ಹಾಗೂ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬರುವವರನ್ನು ನಿಯಂತ್ರಿಸಲಿದೆ.

ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ
ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು ಇದೇ ರೀತಿಯ ಆದೇಶ ಹೊರಡಿಸಿದ್ದು, ಆಂಧ್ರ ಪ್ರದೇಶದಲ್ಲಿ ತೆಲುಗರಿಗೆ ಶೇ 75% ಉದ್ಯೋಗ ಮೀಸಲಾತಿ ನೀಡಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಅನುಸರಿಸುವ ಯತ್ನ ಈಗಾಗಲೇ ಜಾರಿಯಲ್ಲಿದೆ.

ಸಚಿವ ಸುರೇಶ್ ಕುಮಾರ್ ಹೇಳಿಕೆ
ಶಿಕ್ಷಣ ಮತ್ತು ಕಾರ್ಮಿಕ ಸಚಿವ ಸಚಿವ ಸುರೇಶ್ ಕುಮಾರ್ ಮಾತನಾಡಿ, 'ಇದು ಯಾರ ವಿರುದ್ಧವೂ ತರತಮ್ಯ ಮಾಡಲು ತರಲಾಗುತ್ತಿರುವ ಕಾಯ್ದೆಯಲ್ಲ ಬದಲಿಗೆ ಸ್ಥಳೀಯರಿಗೆ ಹೆಚ್ಚು ಅವಕಾಶ ಒದಗಿಸಲು ಮಾಡಲಾಗುತ್ತಿರುವ ಯತ್ನ' ಎಂದಿದ್ದಾರೆ.

ಹಲವು ವರ್ಷಗಳಿಂದಲೂ ನಡೆಯುತ್ತಿದೆ ಹೋರಾಟ
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಎಂದು ಹಲವು ವರ್ಷಗಳಿಂದಲೂ ಹೋರಾಟ ನಡೆಯುತ್ತಲೇ ಇತ್ತು. ಕನ್ನಡಪರ ಸಂಘಟನೆಗಳು, ಕನ್ನಡ ಸಾಹಿತ್ಯ ವಲಯ ಸಹ ಉದ್ಯೋಗ ಮೀಸಲಾತಿಗೆ ಒತ್ತಾಯ ಮಾಡುತ್ತಲೇ ಇದ್ದವು.

ಕನ್ನಡಿಗರ ನಿರುದ್ಯೋಗ ಸಮಸ್ಯೆ ನಿವಾರಿಸಲಿದೆಯೇ?
ಯಡಿಯೂರಪ್ಪ ಅವರು ಬಜೆಟ್ ಸಮಾವೇಶದಲ್ಲಿ ಅಥವಾ ನಂತರ ಉದ್ಯೋಗ ಮೀಸಲಾತಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಮೀಸಲಾತಿ ಆದೇಶ ಕನ್ನಡಿಗರ ನಿರುದ್ಯೋಗ ಸಮಸ್ಯೆ ದೂರ ಮಾಡುವ ಜೊತೆಗೆ ಬೆಂಗಳೂರಿನ ವಲಸೆ ಸಮಸ್ಯೆ ಬಗೆಹರಿಸುತ್ತದೆಯೇ ಕಾದು ನೋಡಬೇಕಿದೆ.












Click it and Unblock the Notifications