ಈಶು-ಬಿಎಸ್ ವೈ ಒಟ್ಟಿಗೆ ತಿಂಡಿಯೇನೋ ತಿಂದರು, ಆದರೆ ಒಂದಾದರಾ?
ಬೆಂಗಳೂರು, ಅಕ್ಟೋಬರ್ 6: ರಾಯಣ್ಣ ಬ್ರಿಗೇಡ್ ನ ಹೊಯ್ ಕೈಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಂತಿದೆ. ಗುರುವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ವಿಧಾನಪರಿಷತ್ ವಿಪಕ್ಷ ನಾಯಕರಾದ ಕೆ.ಎಸ್.ಈಶ್ವರಪ್ಪನವರನ್ನು ಉಪಾಹಾರ ಕೂಟಕ್ಕೆ ಆಹ್ವಾನಿಸಿದ್ದರು. ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತ ಶಮನಕ್ಕೆ ಕೇಂದ್ರ ನಾಯಕರೇ ಸೂಚಿಸಿದ್ದರಿಂದ ಈ ಬೆಳವಣಿಗೆಗೆ ಕಾರಣವಾಯಿತು.
ಉಪಾಹಾರ ಕೂಟದ ನಂತರ ಮಾತನಾಡಿರುವ ಕೆ.ಎಸ್.ಈಶ್ವರಪ್ಪ ಅದೇ ಹಳೇ ಮಾತುಗಳನ್ನಾಡಿದ್ದಾರೆ. ಯಡಿಯೂರಪ್ಪನವರು ನಮ್ಮ ನಾಯಕರು. ಉಪಾಹಾರಕ್ಕೆ ಕರೆದಿದ್ದರು, ಬಂದಿದ್ದೆ. ರಾಯಣ್ಣ ಬ್ರಿಗೇಡ್ ಬಗ್ಗೆ ಯಾವುದೇ ಮಾತನಾಡಲಿಲ್ಲ. ಕಾಂಗ್ರೆಸ್ ನಾಯಕರಿಗೆ ರಾಯಣ್ಣ ಬ್ರಿಗೇಡ್ ಬಗ್ಗೆಯೇ ಭಯ ಇದೆ. ಕಾರಣಕ್ಕೆ ಏನೇನೋ ಮಾತನಾಡುತ್ತಿದ್ದಾರೆ ಎಂದರು.[ಯಾಕೆ ಕೆಜೆಪಿ ಕಟ್ಟಿದ್ರಿ, ಯಾಕೆ ವಾಪಸ್ ಬಂದ್ರಿ: ಈಶ್ವರಪ್ಪ]

ರಾಯಣ್ಣ ಬ್ರಿಗೇಡ್ ಜತೆಗೆ ಪಕ್ಷದ ಯಾರೂ ಕಾಣಿಸಿಕೊಳ್ಳಬಾರದು. ನನ್ನ ಬೆನ್ನ ಹಿಂದೆಯೂ ದೊಡ್ಡ ಸಮುದಾಯವಿದೆ. ಆದರೆ ನನ್ನ ಹೆಸರಿನಲ್ಲಿ ಯಾವುದೇ ಸಂಘಟನೆ ಕಟ್ಟಬಾರದು ಎಂಬುದಾಗಿ ಸೂಚಿಸಿದ್ದೇನೆ ಎಂದು ಹೇಳಿದ್ದರು. ಇನ್ನೂ ಮುಂದೆ ಹೋಗಿ, ಈಶ್ವರಪ್ಪನವರಿಗೆ ನೀವು ಬುದ್ಧಿ ಹೇಳಿ, ಇಲ್ಲದಿದ್ದರೆ ನಾನೇ ಕಲಿಸಬೇಕಾಗುತ್ತದೆ ಎಂದು ಬಿಜೆಪಿ ಕೇಂದ್ರ ನಾಯಕರಿಗೂ ಬಿಎಸ್ ವೈ ಸಂದೇಶ ರವಾನಿಸಿದ್ದರು.

ಬಿಜೆಪಿಯ ಪದಾಧಿಕಾರಿಗಳ ಆಯ್ಕೆ ವೇಳೆ ಅಸಮಾಧಾನಗೊಂಡು ದೆಹಲಿವರೆಗೆ ದೂರು ಒಯ್ದಿದ್ದ ಈಶ್ವರಪ್ಪನವರು ಸಮಯ ಸಿಕ್ಕಾಗಲೆಲ್ಲ ಯಡಿಯೂರಪ್ಪನವರಿಗೆ ಟಾಂಗ್ ಕೊಡುತ್ತಿದ್ದಾರೆ. ಈಚೆಗೆ ಹಾವೇರಿಯಲ್ಲಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆದ ನಂತರ ಬಿಎಸ್ ವೈ ಗರಂ ಆಗಿದ್ದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ ಲಾಲ್, ಎಲ್ಲ ಸರಿ ಮಾಡಿಕೊಳ್ಳಿ ಎಂದು ಸೂಚಿಸಿದ್ದರು.[2018ರಲ್ಲಿ 150 ಸೀಟು ಗೆಲ್ಲುವ ತಂತ್ರ ಸಿದ್ಧ : ಯಡಿಯೂರಪ್ಪ]

ಈ ಹಿನ್ನೆಲೆಯಲ್ಲಿ ಗುರುವಾರ ಬಿ.ಎಸ್.ಯಡಿಯೂರಪ್ಪ ಉಪಾಹಾರ ಕೂಟಕ್ಕೆ ಕರೆದಿದ್ದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ ಲಾಲ್, ಸಹ ಕಾರ್ಯದರ್ಶಿ ಅರುಣ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಮತ್ತಿತರರು ಭಾಗವಹಿಸಿದ್ದರು.











Click it and Unblock the Notifications