ಸರ್ಕಾರ ಬೀಳಿಸಲು ಬಿಎಸ್ವೈ ಭಾರಿ ತಂತ್ರ: ಎಚ್ಡಿಕೆಗೆ ಸಿಕ್ಕಿದೆ ಮಾಹಿತಿ
Recommended Video

ಬೆಂಗಳೂರು, ಸೆಪ್ಟೆಂಬರ್ 05: ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜ್ಯ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇದಕ್ಕೆ ಸಾಕ್ಷಿಗಳನ್ನೂ ನೀಡಿದ್ದಾರೆ.
ಇಂಗ್ಲಿಷ್ ಪತ್ರಿಕೆಯೊಂದರ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, ಸರ್ಕಾರವನ್ನು ಬೀಳಿಸಲು ಬಿಜೆಪಿ ಮಾಡುತ್ತಿರುವ ಯತ್ನಗಳ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ದಕ್ಷಿಣ ಭಾರತ ಆದಾಯ ತೆರಿಗೆ ಇಲಾಖೆ ಮುಖ್ಯಸ್ಥ ಬಿ.ಆರ್.ಬಾಲಕೃಷ್ಣನ್ ಅವರನ್ನು ಇತ್ತೀಚೆಗಷ್ಟೆ ಭೇಟಿ ಆಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಅವರ ಕುಟುಂಬದ ಲೆಕ್ಕಪತ್ರಗಳ ಲೇಖಾದೇಖಿ ನೋಡಿಕೊಳ್ಳುವ ಚಾರ್ಟರ್ಡ್ ಅಕೌಂಟೆಂಟ್ ಎಚ್.ಬಿ.ಸುನಿಲ್ ಮತ್ತು ಕುಮಾರಸ್ವಾಮಿ ಸೋದರ ಎಚ್.ಡಿ.ಬಾಲಕೃಷ್ಣ ಅವರ ಮನೆಯ ಮೇಲೆ ದಾಳಿ ಐಟಿ ದಾಳಿ ಆಗಿದ್ದುದರ ಬಗ್ಗೆಯೂ ಅವರು ಉಲ್ಲೇಖಿಸಿ ಇದು ಕೇಂದ್ರದ ಬಿಜೆಪಿ ನಮ್ಮ ಸರ್ಕಾರವನ್ನು ಬೀಳಿಸಲು ಮಾಡುತ್ತಿರುವ ಯತ್ನ ಎಂದಿದ್ದಾರೆ.

ಸಿಬಿಐ, ಇಡಿ, ಐಟಿ ಸಂಸ್ಥೆಗಳ ದುರ್ಬಳಕೆ
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಕೇಂದ್ರದ ತಮ್ಮದೇ ಪಕ್ಷದ ಅಧೀನದಲ್ಲಿರುವ ಸಿಬಿಐ, ಇಡಿ, ಐಟಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸಿಎಂ ಇದಕ್ಕೆ ಪುಷ್ಟಿ ನೀಡುವ ಘಟನೆಗಳನ್ನು ಹೇಳಿದ್ದಾರೆ.

ಶಂಕರ್ ಬಿದರಿ ಮಗನ ಬೆಂಗಳೂರಿಗೆ ಕರೆಸಿದ್ದಾರೆ
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಕಮಿಷನರ್ ಆಗಿದ್ದ ಶಂಕರ್ ಬಿದರಿ ಅವರ ಪುತ್ರ ವಿಜಶಂಕರ್ ಬಿದರಿ ಅವರನ್ನು ಬೆಂಗಳೂರು ನಗರ ಸಿಬಿಐ ಮುಖ್ಯಸ್ಥರಾಗಿ ವರ್ಗಾವಣೆ ಮಾಡುತ್ತಿರುವ ಹಿಂದೆಯೂ ಯಡಿಯೂರಪ್ಪ ಅವರ ಪ್ರಭಾವ ಹಾಗೂ ಕೇಂದ್ರ ಬಿಜೆಪಿಯ ಕುಯುಕ್ತಿ ಕೆಲಸ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ತಮ್ಮ ಆಪ್ತ ಸಹಾಯಕ ಹಾಗೂ ಸಹೋದರನ ಮೇಲೆ ಐಟಿ ದಾಳಿ
ತಮ್ಮ ಆಪ್ತ ಸಹಾಯಕ ಹಾಗೂ ಲೆಕ್ಕಪರಿಶೋಧರೂ ಆಗಿರುವ ಎಚ್.ಬಿ.ಸುನಿಲ್ ಹಾಗೂ ತಮ್ಮ ಸಹೋದರ ಎಚ್ಡಿ ಬಾಲಕೃಷ್ಣ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ಆಗಿದ್ದುದನ್ನು ಒಪ್ಪಿಕೊಂಡಿರುವ ಕುಮಾರಸ್ವಾಮಿ. ಇದೂ ಸಹ ಕೇಂದ್ರದ ದುರುದ್ದೇಶಪೂರಿತ ಕೃತ್ಯ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಕೇಸು ಐಟಿಯಲ್ಲಿಲ್ಲ
ಇದಕ್ಕೆ ಪೂರಕವೆಂಬಂತೆ ಯಡಿಯೂರಪ್ಪ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿ 'ಐಟಿಯಲ್ಲಿ ಕೇಸಿರಬೇಕು ಅದಕ್ಕೆಂದು ಹೋಗಿರಬೇಕು ಅಷ್ಟೆ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಯಡಿಯೂರಪ್ಪ ಅವರ ಕೇಸುಗಳು ಲೋಕಾಯುಕ್ತದಲ್ಲಿ ಹಾಗೂ ಸಿಬಿಐ ನಲ್ಲಿವೆ ಐಟಿ ಇಲಾಖೆಯಲ್ಲಿ ಇಲ್ಲ.

ಇದೇ ಸಮಯದಲ್ಲಿ ಸಿದ್ದರಾಮಯ್ಯ ಯೂರೋಪ್ಗೆ
ಇದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೂರೋಪ್ ಪ್ರವಾಸಕ್ಕೆ ತೆರಳಿರುವುದು ಸಹ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಯೂರೋಪ್ ಪ್ರವಾಸಕ್ಕೆ ತೆರಳಿರುವುದೇ ಸರ್ಕಾರ ಬೀಳಿಸಲು ಬಿಜೆಪಿ ಸಹಾಯವಾಗಲೆಂದು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.












Click it and Unblock the Notifications