ಯಡಿಯೂರಪ್ಪ- ಈಶ್ವರಪ್ಪ ಜಟಾಪಟಿ: ಕಾಂಗ್ರೆಸ್ಸಿಗೆ ಏನು ಲಾಭ?
ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಪ್ರತಿಷ್ಥೆಯ ಮೇಲಾಟ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಪರೋಕ್ಷವಾಗಿ ಸಹಾಯವಾಗಲಿದೆಯೇ?
ಬಿಜೆಪಿ ರಾಜ್ಯ ಘಟಕದ ಇಬ್ಬರು ಹಿರಿಯ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಪ್ರತಿಷ್ಥೆಯ ಮೇಲಾಟ, ಬೀದಿಗೆ ಬಂದ ಕಿತ್ತಾಟ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಪರೋಕ್ಷವಾಗಿ ಸಹಾಯವಾಗಲಿದೆಯೇ?
ಹಿಂದೆ ಅಧಿಕಾರದಲ್ಲಿದ್ದ ಐದು ವರ್ಷದಲ್ಲಿ ಆಂತರಿಕ ಕಿತ್ತಾಟದ ಮೂಲಕ ಮೂರು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಡುಗೆ ನೀಡಿದ್ದ ಬಿಜೆಪಿ, ಅದಾದ ನಂತರದ ಅಸೆಂಬ್ಲಿ ಚುನಾವಣೆಯಲ್ಲಿ ದಯನೀಯ ಸೋಲು ಕಂಡರೂ ಪಾಠ ಕಲಿಯಲಿಲ್ಲ.
ಇವರದ್ದು ಅಧಿಕಾರದಲ್ಲಿದ್ದಾಗಲೂ ಕಿತ್ತಾಟ, ಇಲ್ಲದಿದ್ದಾಗಲೂ ಕಿತ್ತಾಟ, ಇವರಿಗೆ ಮತ್ತೆ ಅಧಿಕಾರ ಕೊಟ್ಟರೆ ಮತ್ತದೇ ರಂಪಾಟ, ಹಾಗಾಗಿ ಇವರಿಗಿಂತ ಅವರೇ ಸೂಕ್ತ ಎನ್ನುವ ತೀರ್ಮಾನಕ್ಕೆ ಮತದಾರ ಬಂದರೆ, ರಾಜ್ಯದಲ್ಲಿ ಬಿಜೆಪಿಯನ್ನು 'ಮೋದಿ ಅಲೆ' ಕೂಡಾ ಮೇಲೆತ್ತಲು ಸಾಧ್ಯವಾಗದು.
ಎಲ್ ಕೆ ಆಡ್ವಾಣಿ, ಮುರುಳಿ ಮನೋಹರ್ ಜೋಷಿ ಮುಂತಾದ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ತಲೆಗಳನ್ನೇ 'ಮಾರ್ಗದರ್ಶಕ ಮಂಡಳಿ' ಎನ್ನುವ ವೃದ್ದಾಶ್ರಮಕ್ಕೆ ಬಿಜೆಪಿ ಹೈಕಮಾಂಡ್ ಸೇರಿಸಿದಾಗಲೂ ಅರ್ಥ ಮಾಡಿಕೊಳ್ಳದ ರಾಜ್ಯ ಬಿಜೆಪಿ ಮುಖಂಡರು, ದೈನಂದಿನ ಪರಿಪಾಠದಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ.
ರಾಜ್ಯ ಸುತ್ತಿ, ಕೇಂದ್ರದಲ್ಲಿ ಮೋದಿ ಸರಕಾರದ ಕೆಲಸವನ್ನು ಜನರಿಗೆ ಮನದಟ್ಟು ಮಾಡುವುದನ್ನು ಬಿಟ್ಟು, ಮುಂದೊದಗಬಹುದಾದ ಅಧಿಕಾರ ಭಾಗ್ಯವನ್ನು ಆಂತರಿಕ ಕಿತ್ತಾಟದ ಮೂಲಕ ಹೇಗೆ ಹಾಳು ಮಾಡಿಕೊಳ್ಳಬಹುದು ಎನ್ನುವುದನ್ನು ಬೇಸಿಗೆ ಶಿಬಿರದಂತೆ ರಾಜ್ಯ ಬಿಜೆಪಿ ಮುಖಂಡರು ನಡೆಸಿಕೊಂಡು ಬರುತ್ತಿದ್ದಾರೆ. ಮುಂದೆ ಓದಿ..

ಎಲ್ಲವೂ ನಾಲ್ಕು ಗೋಡೆಯ ನಡುವೆ
ರಾಜ್ಯ ಕಾಂಗ್ರೆಸ್ ನಲ್ಲೂ ಮುಸುಕಿನ ಗುದ್ದಾಟ, ಶೀತಲ ಸಮರವಿದ್ದರೂ ಅದೂ ಎಲ್ಲೂ ಸಾರ್ವಜನಿಕವಾಗದಂತೆ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಅಷ್ಟಕಷ್ಟೇ ಎನ್ನುವ ಸುದ್ದಿಗಳಿದ್ದರೂ, ಅದನ್ನು ನಾಲ್ಕು ಗೋಡೆಯ ನಡುವೆ ಸುತ್ತಾಡುತ್ತಿದೆಯೇ ಹೊರತು ಎಲ್ಲೂ ಸ್ಪೋಟಗೊಳ್ಳುತ್ತಿಲ್ಲ.

ಬಿಜೆಪಿ ಗೊಂದಲದಿಂದ ಕಾಂಗ್ರೆಸ್ಸಿಗೆ ಅನುಕೂಲ
ಗುರುವಾರ (ಏ 27) ಈಶ್ವರಪ್ಪ ನೇತೃತ್ವದಲ್ಲಿ ಅತೃಪ್ತ ಮುಖಂಡರು 'ಸಂಘಟನೆ ಉಳಿಸಿ' ಸಭೆ ನಡೆಸಿದ ನಂತರ, ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಯಡಿಯೂರಪ್ಪ ಹೇಳಿದ್ದು ಕೂಡಾ ಅದನ್ನೇ. ಈಶ್ವರಪ್ಪ ಪಕ್ಷದಲ್ಲಿ ಗೊಂದಲ ಉಂಟುಮಾಡಿ ಕಾಂಗ್ರೆಸ್ಸಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆಂದು.

ಇನ್ನೂ ಅಂತಿಮವಾಗದ ಕೆಪಿಸಿಸಿ ಹುದ್ದೆ
ಕೆಪಿಸಿಸಿ ಅಧ್ಯಕ್ಷ ಗಾದಿ ಹುದ್ದೆ ನೇಮಕಾತಿ ವಿಚಾರ ಎಷ್ಟು ದಿನದಿಂದ ಚರ್ಚೆಯಾಗುತ್ತಿದ್ದರೂ, ಎಷ್ಟು ಜನ ಆ ಹುದ್ದೆಗೆ ಲಾಬಿ ನಡೆಸುತ್ತಿದ್ದರೂ, ಈ ವಿಚಾರದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಕಾಂಗ್ರೆಸ್ ಹೈಕಮಾಂಡ್ ಎಲ್ಲೂ, ಯಾರೂ ಬಹಿರಂಗ ಹೇಳಿಕೆ ನೀಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರಾಜ್ಯ ಬಿಜೆಪಿ ನಾಯಕರು ಇದಕ್ಕೆ ತದ್ವಿರುದ್ದವಾಗಿ ವರ್ತಿಸುತ್ತಾ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಅರ್ಥವಾಗದ ಈಶ್ವರಪ್ಪ ನಡೆ
ನಾವು ಬಿಜೆಪಿ ಬಿಟ್ಟು ಹೋಗಲ್ಲಾ.. ನಮ್ಮ ನಾಯಕ ಯಡಿಯೂರಪ್ಪ.. ಅವರೇ ಸಿಎಂ ಅಭ್ಯರ್ಥಿ ಎಂದು ಹೇಳುವ ಈಶ್ವರಪ್ಪ, ಅದ್ಯಾವ ಬೇಡಿಕೆಯನ್ನು ಇಟ್ಟುಕೊಂಡು ಯಡಿಯೂರಪ್ಪ ವಿರುದ್ದ ಕತ್ತಿಮಸಿಯುತ್ತಿದ್ದಾರೋ ತಿಳಿಯದು. ಯಾಕೆಂದರೆ, ಬಿಎಸ್ವೈ ಆಪ್ತರು ಹೇಳುವ ಪ್ರಕಾರ ಈಶ್ವರಪ್ಪನವರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದಾಗಿದೆ.

ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ತುಪ್ಪ ಸುರಿಯುತ್ತಿದ್ದಾರೆ
ರಾಜ್ಯದಲ್ಲಿನ ಬಿಜೆಪಿ ಭಿನ್ನಮತಕ್ಕೆ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಅವರೇ ನೇರ ಕಾರಣ ಎಂದು ಇದೇ ಮೊದಲ ಬಾರಿಗೆ ಆರೋಪಿಸಿರುವ ಯಡಿಯೂರಪ್ಪ, ಭಿನ್ನಮತದ ಹಿಂದೆ ರಾಜ್ಯದ ಇನ್ನೂ ಕೆಲವರ ಪಾತ್ರವಿದೆ ಎಂದು ಹೇಳಿರುವುದರಿಂದ, ಬಿಜೆಪಿ ಆಂತರಿಕ ಬೇಗುದಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ಬಿಜೆಪಿಗೆ ಆಮೂಲಾಗ್ರ ಬದಲಾವಣೆ
ಸಂತೋಷ್ ರಾಷ್ಟ್ರೀಯ ಮಟ್ಟದ ನಾಯಕರಾಗಿರುವುದರಿಂದ, ಯಡಿಯೂರಪ್ಪ ಹೇಳಿಕೆಯನ್ನು ಅಮಿತ್ ಶಾ ಗಂಭೀರವಾಗಿ ಪರಿಗಣಿಸಿ, ರಾಜ್ಯ ಬಿಜೆಪಿ ಘಟಕಕ್ಕೆ ಆಮೂಲಾಗ್ರ ಬದಲಾವಣೆ ತಂದರೂ ತರಬಹುದು.

ಕಾಂಗ್ರೆಸ್ ಮುಕ್ತ್ ಭಾರತ್
ಕಾಂಗ್ರೆಸ್ ಮುಕ್ತ್ ಭಾರತ್ ಮಾಡಲು ದಕ್ಷಿಣದಲ್ಲಿ ಬಿಜೆಪಿಗಿರುವ ಅವಕಾಶವೆಂದರೆ ಅದು ಕರ್ನಾಟಕ. ಇನ್ನು 14-16 ತಿಂಗಳಲ್ಲಿ ಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕೇಂದ್ರ ನಾಯಕರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಬಿಎಸ್ವೈ ಮತ್ತು ಈಶ್ವರಪ್ಪನವರಲ್ಲಿ ಇಬ್ಬರಲ್ಲಿ ಒಬ್ಬರಿಗಾದರೂ ಅಮಿತ್ ಶಾಗೆ ಬಿಸಿ ಮುಟ್ಟಿಸಲಿದ್ದಾರೆಯೇ?

ಜೆಡಿಎಸ್-ಕಾಂಗ್ರೆಸ್ಸಿಗೆ ಲಾಭ
ಈ ಇಬ್ಬರ ನಡುವಿನ ಬಿಕ್ಕಟ್ಟು ಶಮನಗೊಳ್ಳದಿದ್ದರೆ ಅದರ ಲಾಭವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಡೆದುಕೊಳ್ಳುವುದಂತೂ ಗ್ಯಾರಂಟಿ. ಈಗಾಗಲೇ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾಗಿದೆ.











Click it and Unblock the Notifications