Year ender 2022; ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾದ ವಿಷಯಗಳು
ಬೆಂಗಳೂರು, ಡಿಸೆಂಬರ್ 27: 2022 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಜನವರಿ 1ರಿಂದ ಇಲ್ಲಿಯವರೆಗೆ ಅನೇಕ ರಾಜಕೀಯ ಘಟನೆಗಳು ಹಾಗೂ ಸಂಗತಿಗಳು ಸೇರಿದಂತೆ ರಾಜಕಾರಣಿಗಳ ಹೇಳಿಕೆಗಳು ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದು, ರಾಜ್ಯದಲ್ಲಿ ಸಾಕಷ್ಟು ಚರ್ಚೆಗೊಳಪಟ್ಟ ವಿಚಾರಗಳು ಈ ಕೆಳಗಿನಂತಿವೆ.
ರಾಮನಗರದಲ್ಲಿ ಸಚಿವ ಅಶ್ವತ್ಥ ನಾರಾಯಣ, ಡಿ.ಕೆ ಸುರೇಶ್ ಜಟಾಪಟಿ
ರಾಮನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ ಹಾಗೂ ಸಂಸದ ಡಿ.ಕೆ ಸುರೇಶ್ ವೇದಿಕೆಯಲ್ಲೇ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು. ರಾಮನಗರ ಜಿಲ್ಲಾಡಳಿತದಿಂದ ಡಿಸಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಈ ಘಟನೆ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವತ್ಥ ನಾರಾಯಣ ಮಾತನಾಡುವ ಸಂದರ್ಭದಲ್ಲಿ ಉಪಯೋಗಿಸಿದ ಒಂದು ಪದ ಡಿಕೆ ಸುರೇಶ್ ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಯೂ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ
ಮತೀಯ ಸೂಕ್ಷ್ಮ ಜಿಲ್ಲೆ ಕರಾವಳಿಯಲ್ಲಿ ಸ್ಕಾರ್ಫ್( ಶಿರವಸ್ತ್ರ) ವಿವಾದ ಹುಟ್ಟಿಕೊಂಡಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯಲ್ಲಿ ಸ್ಕಾರ್ಫ್ ಧರಿಸಿ ಬಂದಿದ್ದಕ್ಕೆ ಪ್ರತಿರೋಧವಾಗಿ ಹಿಂದೂ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿ ನಾವು ಕೇಸರಿ ಶಾಲು ತೆಗೆಯಬೇಕಾದರೆ ಮುಸ್ಲಿಂ ವಿದ್ಯಾರ್ಥಿನಿಯರು ಕೂಡಾ ಸ್ಕಾರ್ಫ್ ಇಲ್ಲದೆ ತರಗತಿಗೆ ಬರಬೇಕು ಎಂಬುವುದು ಇವರ ವಾದತ್ತು. ಈ ಹಿಜಾಬ್ ವಿವಾದ ಕರಾವಳಿ ಜಿಲ್ಲೆಯಿಂದ ಇಡೀ ರಾಜ್ಯಾದ್ಯಂತ ವ್ಯಾಪಿಸಿತ್ತು.ಸಾಕಷ್ಟು ವಾದ, ವಿವಾದಕ್ಕೆ ಕಾರಣವಾಗಿತ್ತು.
ಭವಿಷ್ಯದಲ್ಲಿ ಭಗವಾಧ್ವಜ ರಾಷ್ಟ್ರ ಧ್ವಜ ಆಗಬಹುದು; ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು. ಕೇಸರಿ ಶಾಲನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದ್ರೂ ಹಾರಿಸ್ತೇವೆ. ಈ ಹಿಂದೆ ರಾಮಚಂದ್ರ, ಮಾರುತಿ ರಥದ ಮೇಲೆ ಕೇಸರಿ ಧ್ವಜ ಇತ್ತು. ಈಗ ರಾಷ್ಟ್ರ ಧ್ವಜ ಫಿಕ್ಸ್ ಆಗಿದೆ. ರಾಷ್ಟ್ರ ಧ್ವಜಕ್ಕೆ ಅನ್ನ ತಿನ್ನುವ ಪ್ರತಿಯೊಬ್ಬನೂ ಗೌರವ ಕೊಡಬೇಕು ಎಂದರು. ಇವತ್ತಲ್ಲ, ಯಾವತ್ತೋ ಒಂದು ದಿನ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಅಂದಾಗ ನಗುತ್ತಿದ್ದರು. ಈಗ ಕಟ್ಟುತ್ತಿದ್ದೇವಲ್ಲಾ?ಹಾಗೆಯೇ ಇನ್ನು ನೂರು ವರ್ಷನೋ ಐನೂರು ವರ್ಷದ ನಂತರವೋ ಭಾಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು. ಆಗ ಆ ಧ್ವಜ ಎಲ್ಲಿ ಬೇಕಾದರೂ ಹಾರಬಹುದು. ಈಗ ಮಾತ್ರ ನಾವೆಲ್ಲರೂ ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಯಾರು ಆ ಧ್ವಜಕ್ಕೆ ಗೌರವ ಕೊಡುವುದಿಲ್ಲವೋ ಅವನು ರಾಷ್ಟ್ರ ದ್ರೋಹಿ ಆಗ್ತಾನೆ ಎಂದು ಈಶ್ವರಪ್ಪ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿವಾದ, ಚರ್ಚೆಗೂ ಕಾರಣವಾಗಿತ್ತು.
ರೇಣುಕಾಚಾರ್ಯ ಪುತ್ರಿಗೆ ನಕಲಿ ಜಾತಿಪತ್ರ : ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದ ಶಾಸಕರ ಪುತ್ರಿ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪುತ್ರಿ ಎಂ.ಆರ್. ಚೇತನ ಅವರು ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದುಕೊಂಡಿರುವ ಆರೋಪ ಕೇಳಿ ಬಂದಿತ್ತು. ಎಂ.ಪಿ.ರೇಣುಕಾಚಾರ್ಯ ಲಿಂಗಾಯಿತರು. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕುಂದೂರು ಶಾಲೆಯಲ್ಲಿಅವರು ಓದುತ್ತಿದ್ದಾಗ ಪಡೆದಿರುವ ಶಾಲಾ ದಾಖಲೆಗಳಲ್ಲೂ ಜಾತಿ ಕಲಂನಲ್ಲಿ'ಲಿಂಗಾಯಿತ' ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದರೆ, ಅವರ ಪುತ್ರಿ ಎಂ.ಆರ್. ಚೇತನ ಬೇಡ ಜಂಗಮ ಜಾತಿ ಎಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು 2012ರ ನ.17ರಂದು ಬೆಂಗಳೂರಿನ ಉತ್ತರ ತಾಲೂಕು ತಹಸೀಲ್ದಾರ್ ಅವರಿಂದ ಪಡೆದಿದ್ದಾರೆ. ಆ ಜಾತಿ ಪ್ರಮಾಣಪತ್ರವನ್ನು ಯಾರೂ ಪ್ರಶ್ನಿಸಿಲ್ಲ. ಅದನ್ನು ಜಿಲ್ಲಾಧಿಕಾರಿಗಳು ಸರಿ ಇದೆಯೇ ಇಲ್ಲವೇ ಎಂದು ಪರಿಶೀಲನೆಯನ್ನೂ ನಡೆಸಿಲ್ಲ.
ಆ ಜಾತಿ ಪ್ರಮಾಣಪತ್ರವನ್ನು ಚೇತನ ಬಳಸಿ ಸರಕಾರದ ಸವಲತ್ತು ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಎಂ.ಪಿ.ರೇಣುಕಾಚಾರ್ಯ ಹೇಳುವಂತೆ ''ನನ್ನ ಪುತ್ರಿಗೆ ಸಹೋದರ ಎಸ್ಸಿ ಜಾತಿ ಪ್ರಮಾಣಪತ್ರ ಕೊಡಿಸಿದ್ದು ನಿಜ ಎಂದು ಹೇಳಿದ್ದರು, ಇನ್ನೂ ಈ ವಿಚಾರ ವಿಧಾನಸಭಾ ಕಲಾಪದಲ್ಲೂ ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಪಠ್ಯ ಪುಸ್ತಕ ವಿವಾದ..? ಬಿಜೆಪಿ - ಕಾಂಗ್ರೆಸ್ ಜಟಾಪಟಿ
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿ, ಶಾಲಾ ಪಠ್ಯದ ಪರಿಷ್ಕರಣೆ ಮಾಡಿತ್ತು. ಈ ಸಮಿತಿಯು ಪಠ್ಯದಲ್ಲಿ ಕೆಲವೊಂದು ಲೋಪ ದೋಷಗಳನ್ನು ಮಾಡಿದೆ ಎಂದು ಆಕ್ಷೇಪಿಸಿ, ರಾಜ್ಯ ಬಿಜೆಪಿ ಸರ್ಕಾರವು ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿತ್ತು. ಈ ಸಮಿತಿಗೆ 6 ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆ, 6 ರಿಂದ 10ನೇ ತರಗತಿವರೆಗಿನ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ 3ನೇ ತರಗತಿಯ ಪರಿಸರ ಅಧ್ಯಯನ ಪಠ್ಯ ಪುಸ್ತಕಗಳ ಪರಿಷ್ಕರಣೆಯ ಜವಾಬ್ದಾರಿ ನೀಡಲಾಗಿತ್ತು.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುವ ವೇಳೆ ಟಿಪ್ಪು ಸುಲ್ತಾನ್ ಕುರಿತಾಗಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋದು ಮೊದಲ ಆರೋಪ. ಇನ್ನು ಆರ್ಎಸ್ಎಸ್ ಸಂಸ್ಥಾಪಕ ಹೆಡಗೇವಾರ್ ಅವರ ಕುರಿತಾದ ಲೇಖನ ಸೇರ್ಪಡೆ, ಚಕ್ರವರ್ತಿ ಸೂಲಿಬೆಲೆ ಬರೆದಿರುವ 'ತಾಯಿ ಭಾರತಿಯ ಅಮರ ಪುತ್ರರು' ಎಂಬ ಅಧ್ಯಾಯವನ್ನು ಸೇರ್ಪಡೆ ಮಾಡಿರೋದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದಲ್ಲದೆ, ಸಾಹಿತಿಗಳಾದ ಸಾ. ರಾ. ಅಬೂಬಕರ್ ಹಾಗೂ ಎ. ಎನ್. ಮೂರ್ತಿ ರಾವ್ ಅವರ ಕೃತಿಗಳನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿದ್ದೇಕೆ ಎಂಬ ಆಕ್ಷೇಪವೂ ಇದೆ. ಎಲ್ಲಕ್ಕಿಂತಾ ಹೆಚ್ಚಾಗಿ ಕುವೆಂಪು ವಿರಚಿತ ನಾಡಗೀತೆಯನ್ನು ರೋಹಿತ್ ಚಕ್ರತೀರ್ಥ ಅವರು ಈ ಹಿಂದೆ ವಿರೂಪಗೊಳಿಸಿದ್ದರು ಎಂಬ ವಿಚಾರವಂತೂ ವಿವಾದ ಭುಗಿಲೇಳುವಂತೆ ಮಾಡಿತ್ತು. ಇದು ಜ್ಞಾನಪೀಠ ಪುರಸ್ಕೃತ, ರಾಷ್ಟ್ರಕವಿಗೆ ಮಾಡಿದ ಅಪಮಾನ ಎಂಬ ಆಕ್ರೋಶ ವ್ಯಕ್ತವಾಗಿತ್ತು . ಜೊತೆಯಲ್ಲೇ ಬಸವಣ್ಣನವರ ಕುರಿತಾದ ಪಠ್ಯದಲ್ಲಿ ಲೋಪ ಎಸಗಲಾಗಿದೆ ಎಂದೂ ಆರೋಪಿಸಲಾಗಿದ್ದು, ಇದೂ ಕೂಡಾ ದೊಡ್ಡ ವಿವಾದದ ರೂಪ ಪಡೆದಿದೆ. ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಕುರಿತಾದ ಪಠ್ಯ ಕೈಬಿಟ್ಟಿದ್ದು ಏಕೆ ಎಂದೂ ರಾಜಕೀಯ ಪಕ್ಷಗಳು ಹಾಗೂ ಸಾಹಿತಿಗಳು ಪ್ರಶ್ನಿಸುತ್ತಿದ್ದು, ಪಠ್ಯ ಪುಸ್ತಕ ಪರಿಷ್ಕರಣೆ ಸಾಕಷ್ಟು ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ.
ಚಾಮರಾಜಪೇಟೆಯ ಆಟದ ಮೈದಾನವನ್ನು ಈದ್ಗಾ ಮೈದಾನ ಎಂದು ಕರೆಯಲಾಗುತ್ತದೆ. 1952ರಿಂದ ಈ ಮೈದಾನದ ವಿಚಾರವಾಗಿ ವಿವಾದ ಪ್ರಾರಂಭವಾಗಿತ್ತು. ಈ ಮೈದಾನದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ ಮೈದಾನವನ್ನು ನೆಲಸಮ ಮಾಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಸಂಘದ ಅಧ್ಯಕ್ಷ ಎಸ್. ಭಾಸ್ಕರನ್ ಎಚ್ಚರಿಕೆ ನೀಡಿದ್ದರು.
ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ತೀರ್ಪು ನೀಡಿತ್ತು. ರಂಜಾನ್, ಬಕ್ರೀದ್ ವೇಳೆ ಪ್ರಾರ್ಥನೆಗೆ ಬಳಸಲು ಅವಕಾಶ ನೀಡಿರುವ ನ್ಯಾಯಾಲಯ, ಬೇರೆ ಯಾವುದೇ ರೀತಿಯ ಆಚರಣೆಗೆ ಬಳಸದಂತೆ ಸ್ಪಷ್ಟಪಡಿಸಿದೆ. ಇದರಿಂದಾಗಿ ಈ ಬಾರಿ ಗಣೇಶೋತ್ಸವ ಆಚರಣೆಗೆ ಅವಕಾಶ ಸಿಗದಂತಾಗಿತ್ತು. ಈ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಬಾರೀ ಚರ್ಚೆಗೆ ಕಾರಣವಾಗಿತ್ತು.
ಅಂಬೇಡ್ಕರ್ಗೆ ಅವಮಾನ: ಮತ್ತೊಂದು ವಿವಾದದಲ್ಲಿ ರೋಹಿತ್ ಚಕ್ರತೀರ್ಥ
ಕರ್ನಾಟಕ ಪಠ್ಯಪುಸ್ತಕ ಮರು ಪರಿಷ್ಕರಣೆಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮೇಲೆ ಒಂದೊಂದೇ ವಿವಾದಗಳು ಸುತ್ತಿಕೊಳ್ಳುತ್ತಿವೆ. ಕುವೆಂಪುರವರಿಗೆ ಅವಮಾನ, ನಾಡಗೀತೆಯನ್ನು ತಿರುಚಿದ ವಿವಾದ, ಪಠ್ಯದಲ್ಲಿ ಕೆಲವು ಲೇಖಕರ ಪಠ್ಯವನ್ನು ಕೈಬಿಟ್ಟಿದ್ದು. ಬಸವಣ್ಣರವರಿಗೆ ಅವಮಾನ ಸೇರಿದಂತೆ ಹಲವಾರು ವಿವಾದಗಳ ಜೊತೆಗೆ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ಗೆ ಅವಮಾನಿಸಿದ್ದರು ಎಂದು ಟ್ವಿಟ್ಟರ್ ಹರಿದಾಡಿತ್ತು. ತಿರುಚಿದ ನಾಡಗೀತೆಯನ್ನು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ನಾಡಗೀತೆ ಮತ್ತು ಕುವೆಂಪುರವರಿಗೆ ಅವಮಾನವನ್ನು ಮಾಡಲಾಗಿತ್ತು. ಇದಾದ ಬಳಿಕ ಪುಸ್ತಕ ಪರಿಷ್ಕರಣೆಯಲ್ಲಿಯೂ ಹಲವು ವಿವಾದ ತಲೆ ಎತ್ತಿವೆ. ಇದರ ನಡುವೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವವರಿಗೆ ಅವಮಾನವನ್ನು ಮಾಡಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಮತದಾರರ ಮಾಹಿತಿ ಕಳವು ಪ್ರಕರಣ; ಬಿಜೆಪಿ - ಕಾಂಗ್ರೆಸ್ ಜಟಾಪಟಿ
ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಮತದಾರರ ಪರಿಷ್ಕೃತ ಪಟ್ಟಿಯಲ್ಲಿನ ಮಾಹಿತಿ ಕಳವು ಪ್ರಕರಣ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿತ್ತು. 2018 ರಲ್ಲಿ, ಬೆಂಗಳೂರಿನ ನಾಗರಿಕ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತದಾರರ ಜಾಗೃತಿಗಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಸಕ್ರಿಯ ಪಾಲುದಾರಿಕೆ (SVEEP) ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, NGO ಗೆ ಅನುಮತಿ ನೀಡಿದೆ. ಹೀಗಿರುವಾಗ ಅವರು 2018 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗಿತ್ತು. ಹೀಗಿರುವಾಗ ತಾವು ಈ ಸಮೀಕ್ಷೆಯನ್ನು ಉಚಿತವಾಗಿ ನಡೆಸುವುದಾಗಿ ಎನ್ಜಿಒ ಹೇಳಿಕೊಂತ್ತು.
ಇನ್ನೂ ಸರ್ಕಾರ ಇದರಲ್ಲಿ ಯಾವುದೇ ರೀತಿಯ ಆರೋಪ, ಅಕ್ರಮ ನಡೆದಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರೆ ಪ್ರತಿಪಕ್ಷಗಳು ಮಾತ್ರ ತನಿಖೆ ನಡೆಯಲಿ ಎಂದು ಒತ್ತಾಯಿಸಿತ್ತು. ಇದರ ನಡುವೆ ರಾಜ್ಯ ಚುನಾವಣಾ ಆಯೋಗವು ಪ್ರಕರಣ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲಾ ಬಿಸ್ವಾಸ್ ಅವರನ್ನು ತನಿಖಾಕಾಧಿರಿಯನ್ನಾಗಿ ನೇಮಿಸಿತ್ತು. ಕೆಲವು ಕಡೆ ಮತದಾರರ ಹೆಸರು ಎರಡೆರಡು ಕಡೆ ಸೇರ್ಪಡೆ ಯಾಗಿದ್ದರಿಂದ ಅಂಥವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ .ಇದು ಪ್ರತಿ ಚುನಾವಣಾ ಸಂದರ್ಭದಲ್ಲೂ ನಡೆಯುವ ಸಾಮಾನ್ಯ ಪ್ರಕ್ರಿಯೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಇದೇ ಸಂಸ್ಥೆಗೆ ಪರಿಷ್ಕರಣೆ ಮಾಡಲು ನೀಡಲಾಗಿತ್ತು ಎಂದು ಸರ್ಕಾರ ಆರೋಪವನ್ನು ತಳ್ಳಿ ಹಾಕಿತ್ತು. ಅಲ್ಲದೇ ಈ ಪ್ರಕರಣವನ್ನ ನ್ಯಾಯಾಂಗ ತನಿಖೆ ನಡೆಸಿ ಎಂದು ಸರ್ಕಾರದ ವಿರೋಧ ಕಾಂಗ್ರೆಸ್ ಸಾಕಷ್ಟು ಒತ್ತಡವನ್ನ ಹಾಕುವ ಮೂಲಕ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಈ ಪ್ರಕರಣವೂ ಜಟಾಪಟಿಗೆ ಕಾರಣವಾಗಿತ್ತು.
ಮೈಸೂರು ಜಿಲ್ಲೆಯ ಬಸ್ ನಿಲ್ದಾಣದ 'ಗುಂಬಜ್' ವಿವಾದ
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚಿಕ್ಕ ಚಿಕ್ಕ ವಿಚಾರಗಳು ಕೂಡ ದೊಡ್ಡ ದೊಡ್ಡ ವಿವಾದಗಳನ್ನು ಹುಟ್ಟು ಹಾಕುತ್ತಿವೆ. ಪ್ರಯಾಣಿಕರ ತಂಗುದಾಣದ ಮೇಲಿದ್ದ ಗುಂಬಜ್ ನೋಡಿದ ಜನರಲ್ಲಿ ಯಾವ ಭಾವನೆಗಳು ಬಂದಿರಲಿಲ್ಲ. ಕಾರಣ ಪಾರಂಪರಿಕ ನಗರಿ ಮೈಸೂರಿನ ಕಟ್ಟಡಗಳು ಗುಮ್ಮಟಗಳಿಂದ ಕೂಡಿದೆ. ಅದರಂತೆ ಪ್ರಯಾಣಿಕರ ತಂಗುದಾಣದ ಮೇಲೆ ಗುಮ್ಮಟಗಳನ್ನು ನಿರ್ಮಿಸುವ ಮೂಲಕ ಪಾರಂಪರಿಕ ನಗರಿಗೆ ಒತ್ತು ನೀಡುವ ಕಾರ್ಯವನ್ನು ಮಾಡಲಾಗಿತ್ತು. ಆದರೆ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಬರುವ ಕೆಲವು ಪ್ರಯಾಣಿಕರ ತಂಗುದಾಣದ ಮೇಲೆ ಗುಂಬಜ್ ನಿರ್ಮಿಸಿರುವ ವಿಚಾರ ಈಗ ರಾಜಕೀಯ ಕೆಸರು ಎರಚಾಟಕ್ಕೆ ಕಾರಣವಾಗಿದೆ.
ಪ್ರಯಾಣಿಕರ ತಂಗುದಾಣದ ಬಗೆಗೆ ಆ ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ಅವರಿಂದ ಮಾಹಿತಿ ಪಡೆಯದೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಪ್ರಯಾಣಿಕರ ತಂಗುದಾಣದ ಮೇಲಿನ ಗುಂಬಜ್ ಗಳನ್ನು ತೆರವು ಗೊಳಿಸದಿದ್ದರೆ ಜೆಸಿಬಿ ತಂದು ಒಡೆದು ಹಾಕುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿತ್ತು. ಜತೆಗೆ ರಾಜಕೀಯ ನಾಯಕರು ತಮಗೆ ತೋಚಿದಂತೆ ಆರೋಪ ಪ್ರತ್ಯಾರೋಪಗ ನಡುವೆ ಈ ವಿಚಾರ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ
ಬೆಳಗಾವಿ ಗಡಿ ವಿವಾದವನ್ನೇ ಮುಂದಿಟ್ಟುಕೊಂಡು ಸದಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಹಾರಾಷ್ಟ್ರ ಇದೀಗ ಮತ್ತೆ ಬೆಳಗಾವಿ ಗಡಿ ವಿಷಯದಲ್ಲಿ ಮತ್ತೊಂದು ಕ್ಯಾತೆ ತೆಗೆದಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜಕಾರಣಿಗಳ ಮಧ್ಯೆ ವಾದ ವಿವಾದಕ್ಕೆ ಕಾರಣವಾಗಿದೆ.
ಹಲವು ದಶಕಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಕಗ್ಗಂಟಾಗಿಯೇ ಪರಿಣಮಿಸಿರುವ ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಾವು ಬದ್ದ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದರು. ಇನ್ನೂ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೆಲ, ಜಲ, ಭಾಷೆ ಹಾಗೂ ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ವಾದವನ್ನ ಮಂಡಿಸಲು ನಾವು ಸಜ್ಜಾಗಿದ್ದೇವೆ ಎಂದಿದ್ದರು, ಇತ್ತ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದ ಈ ವಿವಾದದ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮಧ್ಯಪ್ರವೇಶಿಸುವ ಮೂಲಕ ಕರ್ನಾಟಕ ಹಾಗೂ ಮಹರಾಷ್ಟ್ರ ಮುಖ್ಯಮಂತ್ರಿಗಳ ಜೊತೆಗೆ ಸಂಧಾನ ಸಭೆಯನ್ನ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಸಾಕಷ್ಟು ಚರ್ಚೆಗೆ ಒಳಪಟ್ಟಿದ್ದು, ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವರು ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಗಡಿ ವಿವಾದವೂ ಚುನಾವಣೆ ಹೊತ್ತಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.