ರಾಜೀನಾಮೆ ನಾಟಕ ಚೆನ್ನಾಗಿದೆ: ಶಿವಾನಂದ ಪಾಟೀಲ್ಗೆ ಮತ್ತೆ ಯತ್ನಾಳ್ ಸವಾಲ್
ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಹಾಗೂ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ನಡುವಿನ ರಾಜೀನಾಮೆ ವಾರ್ ತಾರಕಕ್ಕೇರಿದೆ. ಮೊದಲಿಗೆ ತಾಕತ್ತಿದ್ದರೆ ರಾಜೀನಾಮೆ ನೀಡಲಿ ಎಂದು ಯತ್ನಾಳ್ ತೊಡೆ ತಟ್ಟಿದ್ದರು. ಅದರಂತೆ ಶಿವಾನಂದ ಪಾಟೀಲ್ ಸವಾಲ್ ಸ್ವೀಕರಿಸಿ ರಾಜೀನಾಮೆಯೂ ನೀಡಿ ಸಂಚಲನ ಮೂಡಿಸಿದ್ದರು. ಆದರೆ ಈಗ ಆ ರಾಜೀನಾಮೆ ಅಂಗೀಕಾರವಾಗಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದು, ಯತ್ನಾಳ್ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಉತ್ತರನ ಪೌರುಷ ಒಲೆಯ ಮುಂದೆ, ಇವರಿಗೆ ನಿಜಕ್ಕೂ ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಲಿ ಎಂದು ಮತ್ತೆ ಸವಾಲ್ ಹಾಕಿದ್ದಾರೆ.
ರಾಜೀನಾಮೆ ಅಂಗೀಕಾರ ಆಗುವುದಿಲ್ಲ ಎಂದು ಗೊತ್ತಿದ್ದರೂ ಪುಕ್ಕಟೆ ಪ್ರಚಾರಕ್ಕೆ ರಾಜೀನಾಮೆ ಕೊಟ್ಟು ರಾಜೀನಾಮೆಯನ್ನು ತಿರಸ್ಕೃತವಾಗುವಂತ ಪ್ರಭೃತಿಗಳು ಇದ್ದಾರೆ ಎಂಬುದೇ ಅಚ್ಚರಿಯ ಸಂಗತಿ. ಶಾಸಕರು ರಾಜೀನಾಮೆ ಕೊಡುವುದಕ್ಕೆ ರೀತಿ ರಿವಾಜು ಇರುತ್ತೆ ಎಂಬುದು ಇವರಿಗೆ ಗೊತ್ತಿಲ್ಲವೇ? ಎಂದು ಯತ್ನಾಳ್ ಕೇಳಿದ್ದಾರೆ. ಇವರು ರಾಜೀನಾಮೆ ಕೊಡುವುದು, ಸಭಾಧ್ಯಕ್ಷರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತು. ಸಭಾಧ್ಯಕ್ಷರಾದ ಖಾದರ್ ಅವರು ಈ ರೀತಿಯಾದ ರಾಜೀನಾಮೆ ಸ್ವೀಕೃತವಾಗುವುದಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕಾಗಿತ್ತು ಎಂದಿದ್ದಾರೆ.

ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು ಈ ರೀತಿಯಾದ ರಾಜಕೀಯ ನಾಟಕವಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ರಾಜೀನಾಮೆ ಸರಿಯಾದ ವಿಧಾನದಲ್ಲಿಲ್ಲ ಎಂದು ಸ್ವೀಕರಿಸುವ ವೇಳೆಯಲ್ಲೇ ಖಾದರ್ ಅವರು ಹೇಳಬೇಕಾಗಿತ್ತು. ನೀವು ಮಾಡುತ್ತಿರುವ ನಾಟಕವನ್ನು ಪ್ರಜ್ಞಾವಂತ ಮತದಾರರು, ಕ್ಷೇತ್ರದ ಜನತೆ ಗಮನಿಸಿ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎಂಬುದನ್ನು ಮರೆಯದಿರಿ ಎಂದು ಎಚ್ಚರಿಸಿದ್ದಾರೆ.
ಯತ್ನಾಳ್ ರಾಜೀನಾಮೆ ಕೊಟ್ರೆ ನನ್ನದೂ ಅಂಗೀಕರಿಸಿ
ವಿಜಯಪುರ ಕ್ಷೇತ್ರದ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಮತ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವನ ಬಾಗೇವಾಡಿ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ಅದರಂತೆ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಯತ್ನಾಳ್ ಕೂಡ ರಾಜೀನಾಮೆ ನೀಡಿ ಅದು ಅಂಗೀಕಾರವಾದರೆ ಮಾತ್ರ ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಶಿವಾನಂದ ಪಾಟೀಲ್ ಹೇಳಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಹಾಕಿದ ಸವಾಲು ಸ್ವೀಕರಿಸಿದ್ದೇನೆ. ಅದರಂತೆ, ವಿಧಾನ ಸಭೆಯ ಮಾನ್ಯ ಸಭಾಧ್ಯಕ್ಷರಿಗೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ. ಇದೊಂದು ಸತ್ವ ಪರೀಕ್ಷೆ ಆಗಿಯೇ ಬಿಡಲಿ! ಇದು ಕೇವಲ ನನ್ನ ಅಸ್ತಿತ್ವದ ಪ್ರಶ್ನೆಯಲ್ಲ. ನಮ್ಮ ಬಸವನ ಬಾಗೇವಾಡಿ ಮತಕ್ಷೇತ್ರದ ಮಹಾಜನತೆಯ ಸ್ವಾಭಿಮಾನದ ಪ್ರಶ್ನೆ ಎಂದು ಶಿವಾನಂದ ಪಾಟೀಲ್ ರಾಜೀನಾಮೆ ಬಳಿಕ ಪ್ರತಿಕ್ರಿಯಿಸಿದ್ದರು. ನಾನು ಇವತ್ತು ಈ ನಿರ್ಧಾರ ಮಾಡಿರದಿದ್ದರೆ, ಅದು ನನ್ನ ಮತದಾರರಿಗೆ ಮಾಡುವ ಅವಮಾನವಾಗುತ್ತಿತ್ತು. ಹೀಗಾಗಿ ಯತ್ನಾಳ್ ಅವರು ಹಾಕಿದ ಸವಾಲು ಸ್ವೀಕರಿಸಿ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನೀವು ಯಾವಾಗ ರಾಜೀನಾಮೆ ಸಲ್ಲಿಸುತ್ತೀರಿ ಯತ್ನಾಳ್ ಅವರೇ ಎಂದು ತಿರುಗೇಟು ನೀಡಿದ್ದರು.












Click it and Unblock the Notifications