ಯಾದಗಿರಿ: ರಾಚೋಟೇಶ್ವರ ಶ್ರೀಗಳ ಸಮಾಧಿ ಯೋಗ ಅನುಷ್ಠಾನ ಅಂತ್ಯ
ಯಾದಗಿರಿ, ಅಕ್ಟೋಬರ್ 11: ಕಿಕ್ಕಿರಿದು ತುಂಬಿರುವ ಭಕ್ತ ಸಮೂಹ. ಶ್ರೀಗಳಿಂದ ಗದ್ದುಗೆ ಗುಡಿಯ ಮಹದ್ವಾರಕ್ಕೆ ಪೂಜೆ. ಸಮಾಧಿ ಯೋಗದಲ್ಲಿದ್ದ ಸ್ವಾಮೀಜಿಗೆ ಜಯ ಘೋಷಗಳೊಂದಿಗೆ ಭಕ್ತರಿಂದ ಸ್ವಾಗತ. ಇದು ಕಂಡು ಬಂದಿದ್ದು ಯಾದಗಿರಿ ತಾಲೂಕಿನ ಚಿಂತನಹಳ್ಳಿಯ ಶ್ರೀ ಗವಿ ಸಿದ್ದೇಶ್ವರ ಮಠದಲ್ಲಿ.
22 ದಿನಗಳ ಕಾಲ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಲೋಕ ಕಲ್ಯಾಣಕ್ಕಾಗಿ ಸಮಾಧಿಯೋಗ ಅನುಷ್ಠಾನಕ್ಕೆ ಕುಳಿತಿದ್ದರು. ಅನ್ನ, ನೀರು, ಗಾಳಿ, ಬೆಳಕು ಇಲ್ಲದೇ ಶ್ರೀ ಗವಿಯಪ್ಪ ಎಂಬ ಶರಣರ ಸಮಾಧಿ ಮೇಲೆ ನಿರ್ಮಿಸಿರೋ ಗದ್ದುಗೆ ಗುಡಿಯಲ್ಲಿ ಸಮಾಧಿ ಯೋಗ ಆರಂಭಿಸಿದ್ದರು.

ಸಮಾಧಿಯೋಗ ಅನುಷ್ಠಾನ ಆರಂಭಿಸಿದ ಬಳಿಕ ಶ್ರೀ ಶರಣ ಗವಿಯಪ್ಪ ಗದ್ದುಗೆ ಗುಡಿಯ ಮಹಾದ್ವಾರವನ್ನು ಮುಚ್ಚಲಾಗಿತ್ತು. ಇವತ್ತು ರಾಚೋಟೇಶ್ವರ ಶಿವಾಚಾರ್ಯರ 44ನೇ ಮೌನ ಅನುಷ್ಠಾನ ಹಾಗೂ ಸಮಾಧಿ ಯೋಗ ಅಂತ್ಯ ಹಿನ್ನೆಲೆಯಲ್ಲಿ ಗದ್ದುಗೆಯ ಮಹದ್ವಾರವನ್ನು ಒಡೆದು ಸ್ವಾಮೀಜಿಯನ್ನು ಹೊರಗೆ ಕರೆತರಲಾಯಿತು.
ರಾಚೋಟೇಶ್ವರ ಸ್ವಾಮೀಜಿ ಹಿನ್ನೆಲೆ
ರಾಚೋಟೇಶ್ವರ ಸ್ವಾಮೀಜಿ, ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಬೊಮ್ಮನಾಳ ಗ್ರಾಮದವರು. ಸದ್ಯ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಪಿಎಚ್ಡಿ ಮಾಡ್ತಿದ್ದಾರೆ. ಅಲ್ಲದೇ ಗದಗ ತಾಲೂಕಿನ ಅಂತೂರು-ಬೆಂತೂರು ಗ್ರಾಮದಲ್ಲಿರೋ ಬೂದೀಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿದ್ದಾರೆ.

ರಾಚೋಟೇಶ್ವರ ಶ್ರೀಗಳು ಕಳೆದ 10 ವರ್ಷಗಳಿಂದ ದ್ರವ ಪದಾರ್ಥ, ನೆನಸಿದ ಆಹಾರ ಪದಾರ್ಥ ಹಾಗೂ ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಾರಂತೆ. ಹೀಗೆ ಕಳೆದ 20 ವರ್ಷಗಳಿಂದ ಕಠಿಣ ವೃತ ಆಚರಿಸುತ್ತಿದ್ದಾರಂತೆ.












Click it and Unblock the Notifications