ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡ ಬೆಂಗಳೂರಿನ ಇಂಜಿನಿಯರ್
ಶಹಾಪೂರ, ಅಕ್ಟೋಬರ್ 16 : ಈತ ಇಂಜಿನಿಯರ್ ಪದವೀಧರ. ಬಾಲ್ಯದಿಂದ ಬೆಳೆದಿದ್ದು, ಓದಿದ್ದು ಬೆಂಗಳೂರಿನಂಥ ಮಾಯಾ ನಗರಿಯಲ್ಲಿ. ಆದ್ರೆ ಮರಳಿ ಬಂದಿದ್ದು ಸ್ವಂತ ಹಳ್ಳಿಗೆ! ಯಾಕಂತೀರಿ? ರೈತನಾಗಿ ನೆಮ್ಮದಿ ಕಂಡುಕೊಳ್ಳಲು.
ಹಳ್ಳಿಯಲ್ಲಿ ವಾಸಿಸುತ್ತಿರುವ ಹಲವಾರು ಯುವಕರು ಉದ್ಯೋಗ ಹುಡುಕಿಕೊಂಡು ಬೆಂಗಳೂರಿನಂಥ ನಗರಕ್ಕೆ ಹೋಗಿ ಅಲ್ಲಿಯೇ ಕಳೆದುಹೋಗುತ್ತಿದ್ದರೆ, ಈ ಯುವಕ ಕಳೆದುಹೋದ ತನ್ನ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಹಳ್ಳಿಗೆ ಬಂದಿದ್ದಾನೆ.
ಹೀರೇಕಾಯಿ ಬಳ್ಳಿಗಳ ಪೋಷಣೆಯಲ್ಲಿ ತೊಡಗಿರುವ ಯುವಕ ರಾಜಾ ಶಶಿಕಾಂತ್ ನಾಯಕ. ಇಂಜಿನಿಯರ್ ಪದವೀಧರ. ಊರು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ವನದುರ್ಗ ಗ್ರಾಮ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡಿ ಹಳ್ಳಿಗೆ ಮರಳಿದ್ದಾರೆ.
ಎರಡು ವರ್ಷಗಳ ಕಾಲ ಕೆಲವೆಡೆ ಕೆಲಸ ಮಾಡಿದರು. ಆದರೆ ಅದ್ಯಾವುದೂ ನೆಮ್ಮದಿ ನೀಡಲಿಲ್ಲವಂತೆ. ಹೀಗಾಗಿ ಸ್ವಂತ ಜಮೀನಿನಲ್ಲೇ ಕುಟುಂಬದವರ ಜೊತೆ ಕೈ ಜೋಡಿಸಿ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ವಿವಿಧ ತೋಟಗಾರಿಕೆ ಬೆಳೆಗಳನ್ನ ಬೆಳೆಯುವ ಮೂಲಕ ಯಶಸ್ವಿ ಕೃಷಿಕರಾಗಿದ್ದಾರೆ.
ಯುವ ಕೃಷಿಕ ರಾಜಾ ಶಶಿಕಾಂತ್ ನಾಯಕ ಕುಟುಂಬಕ್ಕೆ ಸುಮಾರು 12 ಎಕರೆ ಜಮೀನಿದೆ. ಬೋರ್ವೆಲ್ ಮೂಲಕ ನೀರಾವರಿ ಅನುಕೂಲ ಮಾಡಿಕೊಂಡಿದ್ದಾರೆ. 12 ಎಕರೆಯಲ್ಲೂ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮುಖ್ಯವಾಗಿ ನೆರಳು ಮನೆ ಮಾಡಿಕೊಂಡು ಟೊಮಟೊ, ದೊಡ್ಡಮೆಣಸಿನಕಾಯಿ ಬೆಳೆಯುತ್ತಿದ್ದಾರೆ.
ನೆರಳು ಮನೆಯಲ್ಲಿ ಬೆಳೆಗಳು ಉತ್ತಮ ಇಳುವರಿ ನೀಡುತ್ತವೆ. ಅಲ್ಲದೇ ವಾತಾವರಣಕ್ಕೂ ಹೊಂದಿಕೊಳ್ಳುವುದರಿಂದ ರೈತರಿಗೆ ನೆರವಾಗುತ್ತಿದೆ. ಟೊಮಟೊ, ದೊಡ್ಡಮೆಣಸಿನಕಾಯಿ, ಬದನೆ, ಬೆಂಡೆ, ಸೌತೆಕಾಯಿ, ಹೀರೇಕಾರಿ, ಲಿಂಬು ಸೇರಿದಂತೆ ಹಲವು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತ ಲಾಭಾದಾಯಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ನೋಡಿ ಸುತ್ತಮುತ್ತಲಿನ ರೈತರೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.
ಇಂಜಿನಿಯರ್ ಓದಿ ಕೃಷಿ ಕಡೆ ಹೇಗೆ ವಾಲಿದಿರಿ ಎಂದು ಶಶಿಕಾಂತ್ಗೆ ಪ್ರಶ್ನೆ ಮಾಡಿದರೆ, ಓದಿದ್ದನ್ನೇ ಕೆಲಸ ಮಾಡಬೇಕೆಂದಿನಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ನೆಮ್ಮದಿಯಿಂದ ಇದ್ದೇನೆ. ಕೃಷಿಯಲ್ಲಿ ಜೀವನ ಪರಿಪೂರ್ಣ ಅನಿಸುತ್ತದೆ ಎನ್ನುತ್ತಾರೆ. ಇತ್ತೀಚಿನ ಯುವ ತಲೆಮಾರು ಕೃಷಿ ಕಡೆ ವಾಲುತ್ತಿರುವುದು ಆಶಾದಾಯಕ ಬೆಳವಣಿಗೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಶಿಕಾಂತ್ ಬದುಕು ಹಸನಾಗಲಿ ಎಂದು ಒನ್ಇಂಡಿಯಾ ಕನ್ನಡ ಹಾರೈಸುತ್ತದೆ.