ರಾಯಚೂರು : ಹದಗೆಟ್ಟ ರಸ್ತೆ, ಬಸ್ಸಿನಲ್ಲಿಯೇ ಹೆರಿಗೆ
ರಾಯಚೂರು, ಜೂ. 28 : ಈ ರಸ್ತೆಯಲ್ಲಿ ಗರ್ಭಿಣಿಯರು ಪ್ರಯಾಣ ಮಾಡಿದರೆ ಹೆರಿಗೆ ಆಗುತ್ತದೆ ಎಂದು ಕೆಟ್ಟ ರಸ್ತೆಯನ್ನು ಜನರು ಲೇವಡಿ ಮಾಡುವುದುಂಟು. ಆದರೆ, ರಾಯಚೂರಿನಲ್ಲಿ ಇದು ಸತ್ಯವಾಗಿದೆ, ಬಸ್ಸಿನಲ್ಲಿಯೇ ಗರ್ಭಿಣಿಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ.
ಹಂಚಿನಾಳ ಗ್ರಾಮದ ಯಮನಮ್ಮ ದುರುಗಪ್ಪ ಗುರುವಾರ ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿಸಿಕೊಂಡು ಗ್ರಾಮಕ್ಕೆ ತೆರಳುತ್ತಿದ್ದರು. ಹೆರಿಗೆಗೆ ಇನ್ನೂ ವಾರಬೇಕು, ಹೀಗಾಗಿ ವಾರದ ನಂತರ ಬಂದು ಆಸ್ಪತ್ರೆಗೆ ದಾಖಲಾಗಿ ಎಂದು ಯಮನಮ್ಮ ಅವರಿಗೆ ವೈದ್ಯರು ಸೂಚನೆ ಕೊಟ್ಟಿದ್ದರು.

ವೈದ್ಯರ ಸಲಹೆಯಂತೆ ಗರ್ಭಿಣಿ ಹಾಗೂ ಸಂಬಂಧಿಕರು ಊರಿಗೆ ಮರಳುತ್ತಿದ್ದರು. ಆಗ ಹೊಂಡಗಳಿಂದ ತುಂಬಿ ಹೋಗಿರುವ ಸಿಂಧನೂರು-ಮಸ್ಕಿ ಮಾರ್ಗದಲ್ಲಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗಲೇ ಯಮನಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ನಂತರ ಬಸ್ಸಿನಲ್ಲೇ ಅವರು ಹೆಣ್ಣುಮಗುವಿಗೆ ಜನ್ಮನೀಡಿದರು.
ಹೆರಿಗೆಯ ನಂತರ ಮಗು ಮತ್ತು ತಾಯಿಯನ್ನು ಸಮೀಪವಿದ್ದ ಹಾರಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. [ದೇಶದ ರಸ್ತೆಗಳು ಜೈಂಟ್ ಕಿಲ್ಲರುಗಳು- ಸುಪ್ರೀಂಕೋರ್ಟ್]
ಅಸಮರ್ಪಕ ನಿರ್ವಹಣೆ : ಸಿಂಧನೂರು-ಮಸ್ಕಿ ರಸ್ತೆ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ 19ರ ಒಂದು ಭಾಗ. ಬಳ್ಳಾರಿ, ಗುಲ್ಬರ್ಗ, ಬೀದರ್, ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಎಂಟು ವರ್ಷಗಳ ಹಿಂದೆ ಮಸ್ಕಿ-ಸಿಂಧನೂರು ವ್ಯಾಪ್ತಿಯ 24 ಕಿ.ಮೀ. ರಸ್ತೆಯ ಅಭಿವೃದ್ಧಿ ಕೈಗೊಳ್ಳಲಾಗಿತ್ತು. [ರಾಷ್ಟೀಯ ಹೆದ್ದಾರಿಯಾಗಲಿರುವ ರಾಜ್ಯದ 7 ರಸ್ತೆಗಳು]
ಈ ರಸ್ತೆಯನ್ನು ನಿರ್ಮಿಸಿದ್ದ ಖಾಸಗಿ ಕಂಪನಿ ಐದು ವರ್ಷಗಳವರೆಗೆ ರಸ್ತೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕಾಗಿತ್ತು. ಆದರೆ, ಅಸಮರ್ಪಕ ನಿರ್ವಹಣೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.












Click it and Unblock the Notifications